ಪರಸ್ಪರರ ಆಶಯಗಳಿಗೆ ಸ್ಪಂದಿಸಿದಾಗ ಉತ್ತಮ ಸಮುದಾಯ ಸಾಧ್ಯ-ವಂ|ಫಾವುಸ್ತಿನ್ ಲೋಬೊ
ಪುತ್ತೂರು: ಸಮಾಜದಲ್ಲಿ ಕಷ್ಟದಲ್ಲಿ ಇರುವವರ, ಸಾಮಾಜಿಕ ಸ್ಥಾನಮಾನದಲ್ಲಿ ಇಲ್ಲದವರ, ಶಿಕ್ಷಣದಿಂದ ವಂಚಿತರಾದವರ, ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ, ಒಂದೊತ್ತಿನ ಅನ್ನಕ್ಕೂ ಪರದಾಡುವವರ ಹೀಗೆ ಹಲವು ವಿಚಾರಗಳಿಗೆ ಅನುಗುಣವಾಗಿ ಬಳಲುತ್ತಿದ್ದ ಸಂದರ್ಭದಲ್ಲಿ ಅವರುಗಳ ಆಶಯಗಳಿಗೆ ಸ್ಪಂದಿಸುವ ಮನೋಭಾವ ನಮ್ಮಲ್ಲಿದ್ದಾಗ ಒಳ್ಳೆಯ ಸಮುದಾಯ ಕಟ್ಟಲು ಸಾಧ್ಯವಾಗುತ್ತದೆ ಮಾತ್ರವಲ್ಲ ಸಂತ ಅಂತೋನಿಯವರ ಜೀವಿತಕ್ಕೆ ಅರ್ಥ ಬರುತ್ತದೆ ಎಂದು ಮಂಗಳೂರಿನ ಫಾದರ್ ಮುಲ್ಲರ್ಸ್ ಸಂಸ್ಥೆಗಳ ನಿಯೋಜಿತ ನಿರ್ದೇಶಕ ವಂ|ಫಾವುಸ್ತಿನ್ ಲೂಕಾಸ್ ಲೋಬೊರವರು ಹೇಳಿದರು.

ಅವರು ಜೂ.13ರಂದು ಬನ್ನೂರು ಸಂತ ಆಂತೋನಿ ಚರ್ಚ್ ಧರ್ಮಕೇಂದ್ರದಲ್ಲಿ ಜರಗಿದ ಸಂತ ಅಂತೋನಿಯರವರ ವಾರ್ಷಿಕ ಮಹೋತ್ಸವದ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿ, ಭಕ್ತಾಧಿಗಳಿಗೆ ಪವಿತ್ರ ಬೈಬಲ್ ಮೇಲೆ ಸಂದೇಶ ನೀಡಿದರು. ನಾವು ನಮಗೋಸ್ಕರ ಪ್ರಾರ್ಥನೆ ಮಾಡುವ ಬದಲು ಇತರರ ಒಳಿತಿಗೋಸ್ಕರ ಪ್ರಾರ್ಥನೆ ಮಾಡಿದಾಗ ದೇವರು ಆಶೀರ್ವದಿಸುತ್ತಾನೆ. ಕುಟುಂಬದಲ್ಲಿ ಜೀವಿಸುವ ನಾವೆಲ್ಲರೂ ಉತ್ತಮ ರೀತಿಯಲ್ಲಿ, ಯಾರಿಗೂ ನೋಯಿಸದೆ ಜೀವನ ನಡೆಸಿದಾಗ ಆ ಕುಟುಂಬ ಮಾದರಿ ಕುಟುಂಬ ಎನಿಸುವಂತಾಗುತ್ತದೆ. ದೇವರು ನಮ್ಮೊಳಗೆ, ನಮ್ಮ ನಡುವೆ ಇದ್ದಾನೆ ಎಂಬ ಭರವಸೆಯ, ವಿಶ್ವಾಸದ, ನಂಬಿಕೆಯ, ಸುಪ್ತ ಮನಸ್ಸಿನ ಬದುಕು ನಮ್ಮದಾದಾಗ ಸಂತ ಅಂತೋನಿಯವರ ಬದುಕಿನ ಆಶಯಕ್ಕೆ ಬೆಲೆ ಸಿಗುವಂತಾಗುತ್ತದೆ ಎಂದ ಅವರು ನಮ್ಮಲ್ಲಿರುವ ಸ್ವಾರ್ಥವನ್ನು ಹೋಗಲಾಡಿಸಿ, ಎಲ್ಲರನ್ನು ಸಹೋದರ-ಸಹೋದರಿಯರಂತೆ ಕಂಡಾಗ ದೇಶ ಸುಭೀಕ್ಷೆಯಾಗಬಲ್ಲುದು.
ಈ ನಮ್ಮ ಭರವಸೆಯ ಪಯಣದಲ್ಲಿ ಪುಣ್ಯಕ್ಷೇತ್ರವನ್ನು ತಲುಪಬೇಕಾದರೆ ನಾವೆಲ್ಲಾ ಒಗ್ಗಟ್ಟಾಗಿ ಪಯಣಿಸಿ ಶುಭ್ರ ಮನಸ್ಸಿನಿಂದ ದೇವರನ್ನು ಆರಾಧಿಸಿದಾಗ ನಮ್ಮ ಈ ಪಯಣವು ಯಶಸ್ವಿಯಾಗಬಲ್ಲುದು. ಜೀವನದಲ್ಲಿ ಯಾವುದು ಬೇಡ ಅದನ್ನು ದೂರವಿಡಿ. ಎಲ್ಲಿ ಕೆಟ್ಟದ್ದು ಇದೆಯೋ ಅಲ್ಲಿ ಒಳ್ಳೆಯದನ್ನು ಭಿತ್ತುವ ಮನಸ್ಸು ನಮ್ಮದಾಗಲಿ ಎಂದು ಅವರು ಹೇಳಿದರು.
ಮಾಯಿದೆ ದೇವುಸ್ ಚರ್ಚ್ನ ಪ್ರಧಾನ ಧರ್ಮಗುರು ಹಾಗೂ ಪುತ್ತೂರು ವಲಯ ಚರ್ಚ್ಗಳ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರದೀಪ್ ಲೋಬೊ, ಬನ್ನೂರು ಚರ್ಚ್ನ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ನ ವಂ|ಜೆ.ಬಿ ಮೊರಾಸ್, ಕಡಬ ಸೈಂಟ್ ಆನ್ಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ವಂ|ಸುನಿಲ್ ಪಿಂಟೊ, ಪಂಜ ಚರ್ಚ್ ಧರ್ಮಗುರು ಮೆಲ್ವಿನ್ ಡಿ’ಸೋಜ, ಕೊಕ್ಕಡ ಚರ್ಚ್ ಧರ್ಮಗುರು ವಂ|ಅನಿಲ್ ಡಿ’ಸಿಲ್ವ, ಸುಳ್ಯ ಚರ್ಚ್ ಧರ್ಮಗುರು ವಂ|ಆಲ್ವಿನ್ ಡಿ’ಕುನ್ಹಾ, ಮರೀಲ್ ನಿವಾಸಿ, ಪ್ರಸ್ತುತ ರೋಮ್ನಲ್ಲಿ ಸೇವೆ ಸಲ್ಲಿಸುತ್ತಿರುವ ಪಾಲೋಟಾಯ್ನ್ ಸಭೆಯ ಧರ್ಮಗುರು ನೋರ್ಬರ್ಟ್ ಸಿಕ್ವೇರಾ, ನೆಲ್ಯಾಡಿ ಚರ್ಚ್ ಧರ್ಮಗುರು ವಂ|ಗ್ರೇಶಿಯನ್ ಆಲ್ವಾರಿಸ್, ಕಡಬ ಚರ್ಚ್ ಧರ್ಮಗುರು ವಂ|ಪಾವ್ಲ್ ಪ್ರಕಾಶ್ ಡಿ’ಸೋಜ, ಬನ್ನೂರು ನಿವಾಸಿಯಾಗಿದ್ದು, ಸಹೋದರರಾಗಿರುವ ಬೆಂಗಳೂರಿನಲ್ಲಿ ಧರ್ಮಗುರು ಸೇವೆ ನೀಡುತ್ತಿರುವ ರಿಚರ್ಡ್ ಮಸ್ಕರೇನ್ಹಸ್, ಹರಿಹರದಲ್ಲಿ ಸೇವೆ ನೀಡುತ್ತಿರುವ ಗಿಲ್ಬರ್ಟ್ ಮಸ್ಕರೇನ್ಹಸ್ ಸಹಿತ ಧರ್ಮಭಗಿನಿಯರು ಮತ್ತು ಭಕ್ತಾಧಿಗಳೊಂದಿಗೆ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಬನ್ನೂರು ಚರ್ಚ್ನ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರು ವಾರ್ಷಿಕ ಹಬ್ಬಕ್ಕೆ ಆಗಮಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಬದ್ಯಾರು ಅರುಣ್ ಸೆರಾವೋ ಮಾಲಕತ್ವದ ಬ್ಲೂ ಬ್ರಾಸ್ ಬ್ಯಾಂಡ್ರವರ ಬ್ಯಾಂಡ್, ಚರ್ಚ್ನ ಯುವ ಸಮುದಾಯದವರಿಂದ ಆಕರ್ಷಕ ಗೇಮ್ಸ್, ತಾಂಬ್ಡೆಗುಳೆ(ಸಿಹಿ ತಿಂಡಿ) ಗಮನ ಸೆಳೆದವು. ಚರ್ಚ್ನ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ, 21 ಆಯೋಗಗಳ ಸಂಯೋಜಕ ಜೆರಿ ಪಾಯಿಸ್, ಚರ್ಚ್ ಪಾಲನಾ ಸಮಿತಿ ಸದಸ್ಯರು, ಗಾಯನ ಮಂಡಳಿ, ಸ್ಯಾಕ್ರಿಸ್ಟಿಯನ್, ವೇದಿ ಸೇವಕರು, ವಿವಿಧ ವಾಳೆಯ ಗುರಿಕಾರರು, ವಿವಿಧ ಸಂಘ-ಸಂಸ್ಥೆಯ ಸದಸ್ಯರು ಸಹಕರಿಸಿದರು. ಬಳಿಕ ಪ್ರಸಾದ ಭೋಜನ ನೆರವೇರಿತು.
ಪವಿತ್ರ ಮೊಂಬತ್ತಿ ವಿತರಣೆ..
ದಿವ್ಯಬಲಿಪೂಜೆ ಮುನ್ನ ಹಬ್ಬದ ಪ್ರಯುಕ್ತ ಹಣದ, ವಸ್ತುಗಳ ರೂಪದಲ್ಲಿ ನೀಡಿದ ದಾನಿಗಳಿಗೆ ಶುದ್ಧೀಕರಿಸಿದ ಮೊಂಬತ್ತಿಯನ್ನು ಸ್ಮರಣಿಕೆಯನ್ನಾಗಿ ವಿತರಿಸಲಾಯಿತು. ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ಹಾಗೂ ಪುತ್ತೂರು ವಲಯದ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಪವಿತ್ರ ಮೊಂಬತ್ತಿಯನ್ನು ವಿತರಿಸಿ, ಆಶೀರ್ವಾದ ನೀಡಿದರು.
13 ದಿನಗಳ ನವೇನಾ..
ಪವಾಡಪುರುಷ ಸಂತ ಅಂತೋನಿಯವರು ಜೂ.13ರಂದು ಇಹಲೋಕವನ್ನು ತ್ಯಜಿಸಿ ಸ್ವರ್ಗಕ್ಕೇರಿದ ದಿನವನ್ನು ಬನ್ನೂರು ಚರ್ಚ್ನಲ್ಲಿ ಸಂತ ಅಂತೋನಿಯವರ ವಾರ್ಷಿಕ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಮೇ.30ರಿಂದ ಜೂ.12ರ ತನಕ 13 ದಿನಗಳ ವಿಶೇಷ ಪ್ರಾರ್ಥನೆ(ನವೇನಾ) ನಡೆಯಿತು. ವಿವಿಧ ಕಡೆಯಿಂದ ಆಗಮಿಸಿದ ಧರ್ಮಗುರುಗಳಿಂದ ವಿಶೇಷ ಪ್ರಾರ್ಥನೆಯು ನೆರವೇರಲ್ಪಟ್ಟಿದ್ದು, ನೂರಾರು ಭಕ್ತಾಧಿಗಳು ಈ ಪವಿತ್ರ ನವೇನಾದಲ್ಲಿ ಭಾಗವಹಿಸಿ ತಮ್ಮ ಬೇಡಿಕೆ, ಹರಕೆಗಳನ್ನು ಸಂತ ಅಂತೋನಿಯವರಲ್ಲಿ ಸಮರ್ಪಿಸುತ್ತಾ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.