ಪುತ್ತೂರು: ಕನ್ನಡದಲ್ಲಿ ಪ್ರಶ್ನೆ ಕೇಳಿದಕ್ಕೆ ಕನ್ನಡದಲ್ಲೇ ಉತ್ತರ ನೀಡಿದ ಪುತ್ತೂರು ಮೂಲದ ಉಪನ್ಯಾಸಕ ರೂಪೇಶ್ ಪುತ್ತೂರು ಅವರಿಂದ ಬೆಂಗಳೂರಿನ ಆರ್.ವಿ. ಪಿಯು ಲರ್ನಿಂಗ್ ಹಬ್ನ ಪ್ರಾಂಶುಪಾಲರು ರಾಜೀನಾಮೆ ಪಡೆದಿದ್ದರು. ವಿಚಾರ ವೈರಲ್ ಆಗುತ್ತಿದ್ದಂತೆ ಕ್ಷಮೆ ಕೇಳಿದರಲ್ಲದೇ ಉಪನ್ಯಾಸರಿಂದ ರಾಜೀನಾಮೆಯನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ ಘಟನೆ ಜೂ.12ರಂದು ನಡೆದಿದೆ.
ಕನ್ನಡ ಭಾಷೆಯಲ್ಲಿ ಪಾಠ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿಯ ಆರ್.ವಿ ಪಿಯು ಲರ್ನಿಂಗ್ ಹಬ್ ಪ್ರಾಂಶುಪಾಲರೊಬ್ಬರು, ಉಪನ್ಯಾಸಕ ರೂಪೇಶ್ ಪುತ್ತೂರು ಅವರಿಂದ ರಾಜೀನಾಮೆ ಪಡೆದಿದ್ದರು. ಈ ಕುರಿತು ರೂಪೇಶ್ ಪುತ್ತೂರು ಅವರು ಬೇಸರದಿಂದ ಘಟನೆಯ ಕುರಿತು ವಿಡಿಯೋ ಸಂಭಾಷಣೆಯಲ್ಲಿ ತನಗಾದ ಅನ್ಯಾಯವನ್ನು ತೋಡಿಕೊಂಡಿದ್ದರು. ಸಂಸ್ಥೆಯ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಟಿವಿ ಮಾದ್ಯಮದಲ್ಲೂ ಈ ಕುರಿತು ವರದಿಯಾಯಿತು. ಬಳಿಕ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಕಾಲೇಜಿಗೆ ಭೇಟಿ ಮಾಡಿ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಕುರಿತು ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕ ರೂಪೇಶ್ ಅವರಿಗೆ ಪುನಃ ಕೆಲಸ ಕೊಡುವ ಭರವಸೆ ನೀಡಿದ್ದರು. ಆರ್.ವಿ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ನಾಗರಾಜ್ ಅವರು ಈ ವಿಚಾರ ಮ್ಯಾನೇಜ್ಮೆಂಟ್ ಗಮನಕ್ಕೆ ಬಂದಿಲ್ಲ, ಹಾಗಾಗಿ ತೊಂದರೆ ಆಗಿದೆ. ಇದಕ್ಕೆ ಪಶ್ಚಾತಾಪ ಪಟ್ಟಿದ್ದೇವೆ. ವಿಚಾರವನ್ನು ಬಗೆಹರಿಸಲಾಗಿದೆ ಎಂದು ಮಾದ್ಯಮದ ಮುಂದೆ ತಿಳಿಸಿದ್ದಾರೆ.
ಪ್ರಾಂಶುಪಾಲರು ಕ್ಷಮೆ ಕೇಳಿದ್ದಾರೆ:
ಪ್ರಾಂಶುಪಾಲು ತಾವು ಮಾಡಿದ್ದು ತಪ್ಪು ಎಂದು ಕ್ಷಮೆ ಕೇಳಿದ್ದಾರೆ. ನನ್ನ ನೋವಿಗೆ ಸ್ಪಂದಿಸಿದ್ದಾರೆ. ಮತ್ತೆ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಉಪನ್ಯಾಸಕ ರೂಪೇಶ್ ಪುತ್ತೂರು ಅವರು ತಿಳಿಸಿದ್ದಾರೆ.