ಪುತ್ತೂರು: ದ.ಕ.ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ಕಡಬ ಮತ್ತು ಬೆಳ್ತಂಗಡಿ ತಾಲೂಕು ಪರಿಸರದಲ್ಲಿ ಹಲವು ಸಮಯದಿಂದ ಆನೆ ದಾಳಿಗೆ ಸಂಬಂಧಿಸಿ ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಮೂಲಕ ಜೂ.18 ರಿಂದ ಪರಿಶೀಲನೆ ನಡೆಸಿ ವರದಿ ಪಡೆದು ಕಾಡಾನೆಯ ನಿಯಂತ್ರಣ ಮತ್ತು ಸ್ಥಳಾಂತರ ಕಾರ್ಯವನ್ನು ಮುಂದಿನ 2 ವಾರದಲ್ಲಿ ಮಾಡುವುದಾಗಿ ಮಂಗಳೂರು ವಲಯದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್ ಅವರು ಭರವಸೆ ನೀಡಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಮಂಗಳೂರು ವಿಭಾಗ ಅಧ್ಯಕ್ಷ ಯಂ.ಜಿ.ಸತ್ಯನಾರಾಯಣ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಪ್ರಾಣಿಗಳ ಹಾವಳಿಯಿಂದ ರೈತರು ಬೆಳೆಸಿರುವ ಕೃಷಿ ಉತ್ಪನ್ನಗಳು ಸಂಪೂರ್ಣವಾಗಿ ನಾಶವಾಗಿದೆ ಮತ್ತು ಅಲ್ಲಲ್ಲಿ ರೈತರ ಜೀವ ಹಾನಿಯೂ ಆಗಿರುವ ಕುರಿತು ಜೂ.6ರಂದು ದ..ಜಿಲ್ಲಾ ಅರಿಯಡ್ಕ ಗ್ರಾ.ಪಂ ಸಭಾಭವನದಲ್ಲಿ ಸಂತ್ರಸ್ತ ರೈತ ಸದಸ್ಯರ ಸಭೆ ನಡೆಸಿ ಜೂ.7ಕ್ಕೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಿಸಿದ ಇಲಾಖೆಯ ಪ್ರಮುಖರಿಗೆ ಮನವಿ ಮಾಡಿದ್ದೇವೆ. ಕಾವು, ಅರಿಯಡ್ಕ, ಪೆರ್ಲಂಪಾಡಿ, ಮಾಡ್ನೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ 6 ತಿಂಗಳಿನಿಂದ ಆನೆ ದಾಳಿ ಜಾಸ್ತಿ ಆಗಿದ್ದು, ರೈತರ ಮಾಹಿತಿ ಪ್ರಕಾರ ಮಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾವು,ಅಮ್ಚಿನಡ್ಕದಿಂದ ಕೇವಲ ಒಂದೂವರೆ ಕಿ.ಮೀ ವ್ಯಾಪ್ತಿಯಲ್ಲಿ ಆನೆ ನೆಲೆಸಿದೆ. ಪೆರ್ಲಂಪಾಡಿ ಗ್ರಾಮದಲ್ಲಿ 65 ವರ್ಷ ಪ್ರಾಯದ ಸೆಲ್ವಮ್ ಅವರ ಜೀವಹಾನಿಯಾಗಿದೆ. ಈ ಕುರಿತು ಜೂ.17ಕ್ಕೆ ಸಂಸದಸ ಕ್ಯಾ|ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಅವರ ಸಹಕಾರದೊಂದಿಗೆ ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಡಾ. ಕರಿಕಾಲನ್ ಅವರು ಆನೆ ದಾಳಿಯ ಪರಿಶೀಲನೆಗೆ ಒಪ್ಪಿದ್ದಾರೆ. ಕಾಡಾನೆಯ ನಿಯಂತ್ರಣ ಮತ್ತು ಸ್ಥಳಾಂತರ ಕಾರ್ಯವನ್ನು ಮುಂದಿನ 2 ವಾರದಲ್ಲಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಮಧ್ಯೆ ಕಾಡಾನೆಯ ಹಾವಳಿಗೊಳಪಟ್ಟ ರೈತರ ಸಭೆಯನ್ನು ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಪುತ್ತೂರಿನಲ್ಲಿ ಕರೆದು ನೇರ ಮಾತುಕತೆ ಹಾಗು ಮಾಹಿತಿಯನ್ನು ಪಡೆದುಕೊಳ್ಳುವ ಆಶ್ವಾಸನೆ ನೀಡಿದ್ದಾರೆ ಎಂದ ಅವರು ಮುಂದಿನ ದಿನ ದ.ಕ.ಜಿಲ್ಲಾ ಪರಿಸರದಲ್ಲಿ ರೈತ ವರ್ಗದವರಿಗೆ ವನ್ಯ ಪ್ರಾಣಿಗಳಿಂದ ತೊಂದರೆ ಆದರೆ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರನ್ನು ಸಂಪರ್ಕಿಸಿದರೆ ಇಲಾಖೆಯ ಮೂಲಕ ರಕ್ಷಣೆಯನ್ನು ಕೊಡುವುದಾಗಿ ಅರಣ್ಯಸಂರಕ್ಷಣಾಧಿಕಾರಿಯವರು ಮಾಹಿತಿ ನೀಡಿದ್ದಾರೆ ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಪ್ರಸಾದ್, ಪುತ್ತೂರು ಅಧ್ಯಕ್ಷ ಜನಾರ್ಧನ ರೈ, ಸದಸ್ಯ ದಿವ್ಯಪ್ರಸಾದ್ ಕಾವು ಉಪಸ್ಥಿತರಿದ್ದರು.