ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ  ನೂತನ ಕಂಪ್ಯೂಟರ್ ಕೊಠಡಿ ಉದ್ಘಾಟನೆ

0

ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ರಾಕೇಶ್ ರೈ ಕಡಮಾಜೆ ಅವರು ಸೈಕಲ್ ಅಭಿಯಾನದ ಮೂಲಕ ಸಂಗ್ರಹಿಸಿದ ದೇಣಿಗೆ ಮೊತ್ತದಲ್ಲಿ  ಮತ್ತು ಮಂಗಳೂರಿನ ಲ್ಯಾಂಡ್ ಡೆವಲಪರ್ ಮತ್ತು ಬಿಲ್ಡರ್ ಸಂಸ್ಥೆ ಲ್ಯಾಂಡ್ ಟ್ರೇಡ್ಸ್ ಅವರು ಜಂಟಿಯಾಗಿ ನಿರ್ಮಿಸಿಕೊಟ್ಟ ಸುಸಜ್ಜಿತವಾದ ನೂತನ ಕಂಪ್ಯೂಟರ್ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ ಜೂ.18ರಂದು ಸುಬೋಧ ಪ್ರೌಢಶಾಲೆಯಲ್ಲಿ ಜರಗಿತು.

ಲ್ಯಾಂಡ್ ಟ್ರೇಡ್ಸ್ ಮಂಗಳೂರು ಇದರ ಆಡಳಿತ ನಿರ್ದೇಶಕ ಕೆ. ಶ್ರೀನಾಥ್ ಹೆಬ್ಬಾರ್  ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿ. ಶಿಕ್ಷಣಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ  ವಿದ್ಯಾಸಂಕಲ್ಪ ಯೋಜನೆಯ ಅಡಿಯಲ್ಲಿ ಗುಣಮಟ್ಟದ ಮತ್ತು ಡಿಜಿಟಲ್ ಶಿಕ್ಷಣವನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಸುಬೋಧ ಪ್ರೌಢಶಾಲೆಗೆ ಕಂಪ್ಯೂಟರ್ ಲ್ಯಾಬ್ ನೀಡಲು ಸಹಕಾರ ನೀಡಿತು. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿ ಎಸ್ .ಸಿ .ಟಿ .ಪಿ .ಎಲ್ ಬೆಂಗಳೂರು ಇದರ  ನಿರ್ದೇಶಕ, ಮುಖ್ಯ ಹಣಕಾಸು ಅಧಿಕಾರಿ ಹರ್ಷಿತ್ ಶೇಖರ್ ಶೆಟ್ಟಿ ಮಾತನಾಡಿ, ಸುಬೋಧ ಪ್ರೌಢಶಾಲೆಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲು ನಾನು ಬದ್ಧನಾಗಿದ್ದೇನೆ. ನಮ್ಮ ಸಂಸ್ಥೆ ನಿಮ್ಮೊಂದಿಗೆ ಕೈಜೋಡಿಸಲಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಮಾಡಿ ಸಮಾಜಕ್ಕೆ ಆದರ್ಶರಾಗಬೇಕು ಎಂದು ಹೇಳಿದರು. ನಿರೂಪಕಿ ಹೇಮಾ ಜಯರಾಮ ರೈ ಮಾತನಾಡಿ, ಕನ್ನಡಕ್ಕೆ ಒತ್ತು ಕೊಡಿ, ಕನ್ನಡ ಶಾಲೆ ಬೆಳಗಲಿ, ಸುಬೋಧ ಪ್ರೌಢಶಾಲೆ ಕನ್ನಡದಲ್ಲಿ ಸಾಧನೆಯನ್ನು ಮಾಡುತ್ತಾ ಬಂದಿರುತ್ತದೆ. ವಿದ್ಯಾರ್ಥಿಗಳು ಸುಲಲಿತವಾಗಿ ಕನ್ನಡ ಓದು ಬರಹ ಮಾಡುತ್ತಾ ಯಶಸ್ವಿಯಾಗಬೇಕು ಎಂದರು.

  ಶಾಲೆಯ ಪ್ರಥಮ ಬ್ಯಾಚಿನ ಹಿರಿಯ ವಿದ್ಯಾರ್ಥಿ ಕೃಷಿಕ  ಜಗನ್ನಾಥ ರೈ ಕಡಮಾಜೆ  ಅವರು ಎಲ್ಲರೂ ಕೈ ಜೋಡಿಸಿದರೆ ಯಾವ ಕಾರ್ಯವನ್ನಾದರೂ ಮಾಡಿ ಗುರಿ  ತಲುಪಿಸಬಹುದು, ಸತತ ಪ್ರಯತ್ನದಿಂದ ಗುರಿ ಸಾಧಿಸಬಹುದು  ಎಂದು ಶುಭ ಹಾರೈಸಿದರು.

 ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹಾಜಿ ಎಸ್ ಅಬೂಬಕ್ಕರ್ ಅವರು ರಾಕೇಶ್ ರೈ ಕಡಮಾಜೆ ಅವರ ಕಾರ್ಯವನ್ನು ಶ್ಲಾಘಿಸಿ ಮುಂದಿನ ಗಡಿನಾಡ ಸಮ್ಮೇಳನದಲ್ಲಿ  ಅವರನ್ನು  ಗಡಿನಾಡ ಧ್ವನಿ ಸಾಧನ ಶ್ರೀ ರಾಜ್ಯ ಪ್ರಶಸ್ತಿ  ನೀಡಿ ಸನ್ಮಾನಿಸಲಾಗುವುದು  ಎಂದು ಭರವಸೆ ನೀಡಿ ಅಭಿನಂದಿಸಿದರು.

  ಬಾಕ್ಸ್…

   ( * ಲ್ಯಾಂಡ್ ಟ್ರೇಡ್ಸ್ ವತಿಯಿಂದ ಪ್ರತಿಭಾ ಪುರಸ್ಕಾರ;

2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿನಿ ಸುಶ್ಮಿತಾ ಜಿ, 2024-25 ನೇ ಸಾಲಿನ 9ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ  ಗರಿಷ್ಠ ಅಂಕ ಪಡೆದ ವಿದ್ಯಾರ್ಥಿ ದೀಪಕ್ ಪಿ ಎಸ್, 2024-25 ನೇ ಸಾಲಿನ 8ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಗಗನ ಹಾಗೂ 2024-25ನೇ ಸಾಲಿನ ಎನ್ ಎಂ ಎಂ ಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಾದ ಭವಿತ್ ರಾಜ್, ಎಂ ಖಲಂದರ್ ಶಿಝನ್ ಹಾಗೂ ತನ್ವಿ ಎಸ್ ಪಿ ಅವರನ್ನು ಶಾಲು ಹೊದೆಸಿ ಹಣ್ಣು ಹಂಪಲು ಸ್ಮರಣಿಕೆ, ನಗದು ರೂ 5,000 ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.)

  ಇದೇ ಸಂದರ್ಭದಲ್ಲಿ ಲ್ಯಾಬ್ ಕೊಠಡಿಯ ನವೀಕರಣ ಕಾರ್ಯದಲ್ಲಿ ಶ್ರಮಿಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ)ಪಾಣಾಜೆ ಇದರ ಕಾರ್ಯಕರ್ತರಾದ ರಶ್ಮಿ ಎ.ಎಚ್, ಸಂದೀಪ್ ಕೆ, ಪ್ರೇಮ್ ರಾಜ್ ಅರ್ಲಪದವು, ಪ್ರದೀಪ್ ಪಾಣಾಜೆ, ಮೋಹನ್ ಪಾಣಾಜೆ ಹಾಗೂ ಹರೀಶ್ ಕಡಮಾಜೆ ಅವರನ್ನು ಲ್ಯಾಂಡ್ ಟ್ರೇಡ್ಸ್ ಪರವಾಗಿ ರಾಕೇಶ್ ರೈ ಅವರು ಸನ್ಮಾನಿಸಿದರು 

      ಲ್ಯಾಂಡ್ ಟ್ರೇಡ್ಸ್ ನ ಆಡಳಿತ ನಿರ್ದೇಶಕರಾದ  ಶ್ರೀನಾಥ್ ಹೆಬ್ಬಾರ್ ಹಾಗೂ ರಾಕೇಶ್ ರೈ ಕಡಮಾಜೆ ಅವರನ್ನು ಶಾಲಾ ವತಿಯಿಂದ  ಸನ್ಮಾನಿಸಲಾಯಿತು.

       ರಾಕೇಶ್ ರೈ  ಅವರು  ಸನ್ಮಾನ ಸ್ವೀಕರಿಸಿ ಮಾತನಾಡಿ ಶಾಲೆಗಾಗಿ ಸೈಕಲ್ ಅಭಿಯಾನದಲ್ಲಿ ತನ್ನ ಅನುಭವಗಳನ್ನು ವ್ಯಕ್ತಪಡಿಸುತ್ತಾ ದೇಣಿಗೆ ನೀಡಿದ ಸರ್ವರನ್ನು ಸ್ಮರಿಸುತ್ತಾ ಅಭಿನಂದಿಸಿದರು.

 ಉದ್ಘಾಟನಾ ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಶಾಲಾ ಮಕ್ಕಳು ಗಣಪತಿ ಸ್ತುತಿ ಹಾಗೂ ದೇಶಭಕ್ತಿಯ ನೃತ್ಯ ರೂಪಕಗಳನ್ನು ಪ್ರದರ್ಶಿಸಿದರು.   

   ಸಂಚಾಲಕ ಗಿಳಿಯಾಲು  ಮಹಾಬಲೇಶ್ವರ 

 ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಗೆ ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್ ಅನ್ನು ನಿರ್ಮಿಸಿ ಶಾಲೆಗೆ ಹಸ್ತಾಂತರಿಸಿದ ರಾಕೇಶ್ ರೈ ಹಾಗೂ ಲ್ಯಾಂಡ್ ಟ್ರೇಡ್ಸ್  ಅವರನ್ನು ಕೃತಜ್ಞತಾಪೂರ್ವಕವಾಗಿ ಅಭಿನಂದಿಸಿ ಸರ್ವರನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ನಿರ್ಮಲಾ ಕೆ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ಎಸ್ ಪಿ ನಿರೂಪಿಸಿದರು. ಸಹ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಯವರು ಸಹಕರಿಸಿದರು.

LEAVE A REPLY

Please enter your comment!
Please enter your name here