ಬಲ್ನಾಡು: ಮನೆಯಿಂದ ನಗದು, ಚಿನ್ನಾಭರಣ ಕಳವು

0

ಪುತ್ತೂರು: ಬಲ್ನಾಡು ಗ್ರಾಮದ ಪಾಲೆಚ್ಚಾರ್ ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು ಚಿನ್ನ ಮತ್ತು ನಗದು ಕಳವು ಮಾಡಿದ ಘಟನೆ ನಡೆದಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿ.ಆನಂದ ನಾಯ್ಕ ಎಂಬವರ ಪತ್ನಿ ಉಮಾವತಿ ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಉಮಾವತಿಯವರು ಅಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಲ ಸಮಯದ ಹಿಂದೆ ಇವರ ಗಂಡ ತೀರಿಕೊಂಡಿದ್ದರು. ಇದಾದ ಬಳಿಕ ಕೆಲ ಸಮಯ ತಾಯಿ ಮನೆಯಲ್ಲಿ ವಾಸವಾಗಿದ್ದ ಅವರು ಅ.22ರಂದು ಪಾಲೆಚ್ಚಾರುವಿನಲ್ಲಿರುವ ಮನೆಗೆ ಬಂದು ಹೋಗಿದ್ದರು.ನ.5ರಂದು ಮತ್ತೆ ಪಾಲೆಚ್ಚಾರು ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಎದುರಿನ ಬಾಗಿಲಿನ ಬೀಗ ತೆಗೆದು ಒಳಗೆ ಹೋದಾಗ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿತ್ತು.ಕಪಾಟಿನ ಬೀಗ ತೆರೆದುಕೊಂಡಿದ್ದು, ಅದರೊಳಗೆ ಲಾಕರ್ನಲ್ಲಿಟ್ಟಿದ್ದ ಚಿನ್ನದ 8 ಗ್ರಾಂ ತೂಕದ ಕಿವಿಯ ಮಾಟಿ-2, 10 ಗ್ರಾಂ ತೂಕದ ಬೆಳ್ಳಿಯ ಸರ-1, 20 ಗ್ರಾಂ ತೂಕದ ಬೆಳ್ಳಿಯ ಕಾಲುಗೆಜ್ಜೆ- 2 ಮತ್ತು ರೂ.1000 ರೂ.ನಗದು ಕಾಣೆಯಾಗಿದೆ.ಕಳವಾದ ಸೊತ್ತುಗಳ ಮೌಲ್ಯ 63,500 ರೂ. ಎಂದು ಅಂದಾಜಿಸಲಾಗಿದೆ ಎಂದು ದೂರಿನಲ್ಲಿ ಉಮಾವತಿ ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here