ಪುತ್ತೂರು : ಶರೀರ, ಮನಸ್ಸು ಮತ್ತು ಆತ್ಮದ ಸಮತೋಲನ ಸಾಧಿಸುವ ಮಾರ್ಗವೇ ಯೋಗ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಇದೇ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಆರ್ಟ್ ಆಫ್ ಲಿವಿಂಗ್ ನ ಯೋಗಚಾರ್ಯರಾದ ಶರಾವತಿ ರವಿನಾರಾಯಣರವರು, “ಯೋಗ: ಕರ್ಮಸು ಕೌಶಲಂ”. ಫಲಾಪೇಕ್ಷೆ ಇಲ್ಲದೆ ಶ್ರದ್ಧೆಯಿಂದ ಕೆಲಸ ಮಾಡುವುದೇ ಯೋಗ. ಯೋಗವೆಂದರೆ ಏಕತೆ. ದೇಹ, ಮನಸ್ಸು ಮತ್ತು ಆತ್ಮವನ್ನು ಒಂದಾಗಿ ಬೆಸೆದು ಆತ್ಮಸಾಕ್ಷಾತ್ಕಾರವನ್ನು ಸಾಧಿಸಲು ಸಹಾಯ ಮಾಡುವ ಪಥವೇ ಯೋಗವಾಗಿದೆ” ಎಂದು ತಮ್ಮ ಅತಿಥಿ ಭಾಷಣದಲ್ಲಿ ಮಕ್ಕಳಿಗೆ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಪ್ರಕಾಶ್ ಚಂದ್ರ ಇವರು, ಯೋಗದ ಮಹತ್ತ್ವದ ಕುರಿತು ಮಾತನಾಡಿ, ಮಕ್ಕಳಿಗೆ ಹಿತನುಡಿಗಳನ್ನಾಡಿದರು.
ಯೋಗ ದಿನಾಚರಣೆಯ ಅಂಗವಾಗಿ ಶಾಲಾ ಶಿಕ್ಷಕ ರಮೇಶ್ ಮತ್ತು ಶಿಕ್ಷಕಿ ಶ್ಯಾಮಲಾ ಇವರ ಮಾರ್ಗದರ್ಶನದಲ್ಲಿ 8,9 ಮತ್ತು 10 ನೇ ತರಗತಿಗಳ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಸಿಂಧು ವಿ. ಜಿ ಹಾಗೂ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.