ಸವಣೂರು : 1927 ರಲ್ಲಿ ಆರಂಭಗೊಂಡ ಪುಣ್ಚಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2027 ಕ್ಕೆ ನೂರು ವರ್ಷಗಳು ತುಂಬಲಿದ್ದು ,ʼಪುಣ್ಚಪ್ಪಾಡಿ ಶಾಲೆಗೆ ತುಂಬಿದೆ ವರುಷನೂರು ಎಳೆಯುವ ಶತಮಾನದ ಶಿಕ್ಷಣದ ತೇರುʼ ಎನ್ನುವ ಧ್ಯೇಯ ವಾಕ್ಯದೊಂದಿಗೆ ಶತಮಾನೋತ್ಸವದ ನೆನಪಿನಲ್ಲಿ ಹಲವಾರು ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಯೋಜಿಸಿಕೊಂಡು ನೂರು ಸರಣಿ ಕಾರ್ಯಕ್ರಮಗಳನ್ನು ನಡೆಸಲು ಪ್ರಾರಂಭಿಸಲಾಗಿದೆ.
ಸರಣಿ ಕಾರ್ಯಕ್ರಮ -ನಾಲ್ಕರ ಅಂಗವಾಗಿ ಶತಗಿಡ ನಾಟಿ ಸಂಭ್ರಮವನ್ನು ನಡೆಸಲಾಯಿತು. ಅರಣ್ಯ ಇಲಾಖೆ ಪುತ್ತೂರು ಸಹಯೋಗದೊಂದಿಗೆ 100 ಗಿಡಗಳನ್ನು ಶಾಲಾ ಸ್ಥಳದಲ್ಲಿ ದಿನ ನಾಟಿ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನರಿಮೊಗರು ಉಪ ವಲಯ ಅರಣ್ಯಾಧಿಕಾರಿ ರಾಜೇಂದ್ರ ಕುಮಾರ್ ಮಾತನಾಡಿ,ಗಿಡಗಳನ್ನು ಬೆಳೆಸುವುದರ ಜೊತೆಗೆ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡಿ ಪರಿಸರದ ಉಳಿವಿಗೆ ನಾವೆಲ್ಲರೂ ಕಾರಣರಾಗಬೇಕು. ನೀರೆಂಬ ಅಮೂಲ್ಯ ಸಂಪನ್ಮೂಲವನ್ನು ನಾವೆಲ್ಲರೂ ಉಳಿಸಬೇಕು ಎಂದರು.
ಕಾರ್ಯಕ್ರಮವನ್ನು ಸಂಘಟಿಸಿದ ಗ್ರಾಮ ಪಂಚಾಯತ್ ಸದಸ್ಯರಾದ ಬಾಬು ಜರಿನಾರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ವಿಜಯ ಕುಚ್ಚೆಜಾಲು ಉಪಸ್ಥಿತರಿದ್ದರು.
ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ ಕುಚ್ಚೆಜಾಲು, ಸದಸ್ಯರಾದ ಗಿರಿಶಂಕರ ಸುಲಾಯ, ಪೋಷಕರಾದ ಈಶ್ವರ ತೋಟತ್ತಡ್ಕ, ಪ್ರದೀಪ್ ನೆಕ್ಕರೆ, ರವಿ, ಸೋಮನಾಥ, ಬಾಬು, ಉಮೇಶ್ ಡಿ, ಸವಿತಾ ರೈ, ಪ್ರಫುಲ್ಲ , ಗೀತಾ ಬಿ., ಜಾನಕಿ ಕೆ.ಎಂ, ಹಾಗೂ ಧನರಾಜ್, ರಮೇಶ್ ಓ, ಆಶಾ ಶೆಟ್ಟಿ ಕಲಾಯಿ ಗಿಡ ನೆಡಲು ಸಹಕರಿಸಿದರು.
ಮುಖ್ಯಗುರು ರಶ್ಮಿತಾ ನರಿಮೊಗರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ಕೆ. ವಂದಿಸಿದರು. ಅತಿಥಿ ಶಿಕ್ಷಕರಾದ ಭಾಗೀರಥಿ, ಲೀಲಾವತಿ, ಭವಾನಿ ಸಹಕರಿಸಿದರು.