ನೆಲ್ಯಾಡಿ: ಇಲ್ಲಿನ ಸಂತಜಾರ್ಜ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪಾಲಕರ ಸಭೆಯನ್ನು ಮಕ್ಕಳ ಪ್ರಗತಿಯಲ್ಲಿ ‘ನಾವು-ನೀವು’ ಎಂಬ ಶೀರ್ಷಿಕೆಯಲ್ಲಿ ‘ಆರೋಗ್ಯಕರ ಪಾಲನೆ ‘ ಎಂಬ ವಿಷಯದ ಕುರಿತಾದ ತರಬೇತಿ ಕಾರ್ಯಕ್ರಮದೊಂದಿಗೆ ನಡೆಸಲಾಯಿತು.

ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನೋವಿಜ್ಞಾನ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಸಂಶೋಧಕಿ ನ್ಯಾನ್ಸಿ ಲವೀನಾ ಪಿಂಟೋರವರು ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿಯನ್ನು ನಡೆಸಿಕೊಟ್ಟರು. ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ, ಅತಿಯಾದ ಸಂರಕ್ಷಣೆ ಹಾಗೂ ಅತಿಯಾದ ನಿಯಂತ್ರಣದಿಂದಾಗುವ ದೋಷಗಳು, ಮಕ್ಕಳಿಗೆ ಪಾಲಕರೇ ಮಾದರಿಯಾಗುವುದು, ವೈಯಕ್ತಿಕ ವ್ಯತ್ಯಾಸಗಳನ್ನು ಗ್ರಹಿಸದೇ ಅನ್ಯ ಮಕ್ಕಳೊಂದಿಗೆ ತುಲನೆ ಮಾಡುವುದರಿಂದಾಗುವ ದುಷ್ಪರಿಣಾಮಗಳು, ಅಪಾಯಕಾರಿ ಮೊಬೈಲ್ ಆಪ್ ಬಗ್ಗೆ ಪಾಲಕರ ಜಾಗೃತಿ, ಮಕ್ಕಳಲ್ಲಿ ಜೀವನ ಕೌಶಲ್ಯಗಳ ಅಗತ್ಯ, ಆನ್ಲೈನ್ ಆಟಗಳಿಂದಾಗುವ ಸ್ವಭಾವ ವೈಕಲ್ಯಗಳು, ಮೊಬೈಲ್ ಸುರಕ್ಷತೆ, ಜೀವನದ ಸವಾಲುಗಳು ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಸಂತಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ. ಫಾ. ನೋಮಿಸ್ ಕುರಿಯಾಕೋಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲಾ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಯಾದ ಉದಯೊಂನ್ಮುಖ ಶಿಲ್ಪಿ ಶ್ರೀಕಾಂತ್ ಆಚಾರ್ಯರನ್ನು ಅಭಿನಂದಿಸಲಾಯಿತು. ಮುಖ್ಯ ಶಿಕ್ಷಕ ಎಂ.ಐ.ತೋಮಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ವಿದ್ಯಾರ್ಥಿನಿಯರೇ ನಿರ್ವಹಿಸಿದರು.