ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ ವಿವೇಕಾನಂದ ವಸತಿ ನಿಲಯಗಳ ಜಂಟಿ ಆಶ್ರಯದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಇದರ ಸಹಯೋಗದೊಂದಿಗೆ ನಡೆದ 21 ದಿನಗಳ ಯೋಗ ಶಿಬಿರದ ಪ್ರಯುಕ್ತ ಭಾರತ್ ಮಾತಾ ಪೂಜನಾ ಕಾರ್ಯಕ್ರಮವು ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಇದರ ಜಿಲ್ಲಾ ಸಂಘಟನಾ ಪ್ರಮುಖರಾದ ಹರಿಪ್ರಸಾದ್ ಇವರು ಭಾಗವಹಿಸಿ”ಯೋಗ ನಮ್ಮೆಲ್ಲರ ಜೀವನದ ಬಹುಪ್ರಮುಖವಾದ ಅಂಶ. ಯೋಗದಿಂದ ಉತ್ತಮ ಜೀವನ ರೂಪಿಸಲು ಸಾಧ್ಯ.ವಿದ್ಯಾರ್ಥಿ ಜೀವನದಲ್ಲಾಗಲೀ ಅಥವಾ ವೃತ್ತಿ ಜೀವನದಲ್ಲಾಗಲೀ ಓದು, ಸಂಪಾದನೆ, ದೈನಂದಿನ ಚಟುವಟಿಕೆಗಳೊಂದಿಗೆ ಯೋಗವನ್ನು ಅಳವಡಿಸಿಕೊಳ್ಳಬೇಕು.ಗಾಳಿ,ನೀರು, ಬೆಳಕು ಹೇಗೆ ಅವಶ್ಯಕವೋ, ಯೋಗವು ಶಾರೀರಿಕ ಸುವ್ಯವಸ್ಥೆಗೆ ಪೂರಕವಾದ ಒಂದು ಅಂಶವಾಗಿದೆ ಎಂದು ಅವರು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಸತಿ ನಿಲಯಗಳ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಪ್ರಭು ಇವರು ವಹಿಸಿದ್ದರು.
ಕಾರ್ಯಕ್ರಮಕ್ಕೆ ವಿಶೇಷ ಅಭ್ಯಾಗತರಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ ಆಗಮಿಸಿ “ಯೋಗವು ಭಾರತ ಜಗತ್ತಿಗೆ ನೀಡಿದ ಒಂದು ವಿಜ್ಞಾನ ಎಂಬುದು ನಮಗೆ ನಿಜಕ್ಕೂ ಹೆಮ್ಮೆಯ ವಿಚಾರ. ಭಾರತ ಇಂತಹ ಹಲವಾರು ವಿದ್ಯೆಗಳ ತವರು ನೆಲೆ. ಯೋಗವಿದ್ಯೆಯು ಜಗತ್ತಿಗೆ ಸಂಪೂರ್ಣ ಬೆಳಕು ನೀಡುತ್ತದೆ. ಯೋಗವು ನಮ್ಮ ಶರೀರದ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಕೇವಲ ಶಾರೀರಿಕ ಮಾತ್ರವಲ್ಲದೆ ಮಾನಸಿಕ ಸದೃಢತೆಯನ್ನು ಬಲಗೊಳಿಸುವಲ್ಲಿ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಉಪಸ್ಥಿತರಿದ್ದರು.
ಸುಮಾರು 21 ದಿನಗಳ ಕಾಲ ಸತತವಾಗಿ ನಡೆದ ಯೋಗ ಶಿಬಿರದಲ್ಲಿ ವಿವೇಕಾನಂದ ವಸತಿ ನಿಲಯಗಳಾದ ತಕ್ಷಶಿಲಾ, ಶಾರದಾ ಹಾಗೂ ನಿವೇದಿತಾ ವಸತಿ ನಿಲಯಗಳ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು.