ಕಾಣಿಯೂರು: ಕಾಣಿಯೂರಿನ ಬಿ. ಕೆ ಕಾಂಪ್ಲೆಕ್ಸ್ ಎರಡನೇ ಮಹಡಿಯಲ್ಲಿ ನೂತನವಾಗಿ ಡ್ರೀಮ್ ಡಿ ನೃತ್ಯ ತರಬೇತಿ ಕೇಂದ್ರವು ಜೂ.27ರಂದು ಉದ್ಘಾಟನೆಗೊಂಡಿತು.
ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಕಾಣಿಯೂರು ಬಿ.ಕೆ ಕಾಂಪ್ಲೆಕ್ಸ್ ಮಾಲಕ, ಉದ್ಯಮಿ ಪ್ರದೀಪ್ ಬೊಬ್ಬೆಕೇರಿಯವರು, ಕಾಣಿಯೂರಿನಲ್ಲಿ ನೂತನವಾಗಿ ಆರಂಭಗೊಂಡಿರುವ ನೃತ್ಯ ಕೇಂದ್ರವು ಉತ್ತಮ ಸಂಸ್ಥೆಯಾಗಿ ಮೂಡಿಬರಲಿ ಎಂದು ಶುಭಹಾರೈಸಿದರು.
ಕಲಾ ಪೋಷಕ ಸುಜಿತ್ ರೈ ಪಟ್ಟೆ ಮಾತನಾಡಿ, ಸ್ವಸ್ಟಿಕ್ ಶೆಟ್ಟಿಯವರು ಸಂಸ್ಥೆಯನ್ನು ಪ್ರಾರಂಭಮಾಡುವ ಮೂಲಕ ಕಾಣಿಯೂರು ಪರಿಸರದ ಮಕ್ಕಳಿಗೆ ನೃತ್ಯ ತರಬೇತಿಯನ್ನು ನೀಡಬೇಕೆಂಬ ಗುರಿಯೊಂದಿಗೆ ಈ ಸಂಸ್ಥೆ ಆರಂಭಗೊಂಡಿದ್ದು, ಈ ಸಂಸ್ಥೆ ಯಶಸ್ಸನ್ನು ಕಾಣಲಿ ಎಂದರು.
ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಮಾತನಾಡಿ, ನೂತನ ಸಂಸ್ಥೆಯನ್ನು ಪ್ರಾರಂಭ ಮಾಡುವ ಮೂಲಕ ಸ್ವಸ್ಟಿಕ್ ಅವರ ಸುಂದರ ಕನಸು ನನಸಾಗಿದೆ. ಈ ನೂತನ ಸಂಸ್ಥೆಯಿಂದ ಪ್ರತಿಭೆಗಳು ಹೊರ ಹೊಮ್ಮಲಿ ಎಂದರು.
ಕೊಡಿಯಾಲ ಕಲ್ಪಡ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನ ಅಧ್ಯಕ್ಷ ಸುಬ್ರಹ್ಮಣ್ಯ ಕಲ್ಪಡ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳು ಒಳ್ಳೆಯ ರೀತಿಯಲ್ಲಿ ತರಬೇತಿಯನ್ನು ಪಡೆದುಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದರು.
ಡ್ಯಾನ್ಸ್ ಎನ್ ಬೀಟ್ಸ್ ನೃತ್ಯ ಕಲಾ ಕೇಂದ್ರದ ನಿರ್ದೇಶಕ ಜೀವನ್ ಬೆಳ್ಳಾರೆ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ತನ್ನ ಪ್ರತಿಭೆಗಳನ್ನು ಹೊರ ಹೊಮ್ಮಲು ಇದೊಂದು ಸೂಕ್ತ ವೇದಿಕೆಯಾಗಿದ್ದು, ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು.
ಸಂಸ್ಥೆಯ ಸಂಚಾಲಕ ಸ್ವಸ್ಟಿಕ್ ಶೆಟ್ಟಿ ಅವರ ತಂದೆ ಸುಂದರ ಶೆಟ್ಟಿ ಪಟ್ಟೆ, ತಾಯಿ ಶೀಲಾ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ಸ್ವಸ್ಟಿಕ್ ಶೆಟ್ಟಿ ಕಲ್ಪಡ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಅಧ್ಯಕ್ಷ ರಾಕೇಶ್ ಆಚಾರ್ಯ ಬನಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಳೆದ ಹತ್ತು ವರ್ಷದಿಂದ ನೃತ್ಯ ತರಬೇತುಗಳನ್ನು ನೀಡುತ್ತಾ ಬಂದಿದ್ದೇನೆ. ಇದೀಗ ಇನ್ನಷ್ಟು ಗ್ರಾಮೀಣ ಪರಿಸರದ ಪ್ರತಿಭೆಗಳಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ನೂತನ ಸಂಸ್ಥೆಯನ್ನು ಪ್ರಾರಂಭಿಸುತ್ತಿದ್ದೇವೆ.
ಸ್ವಸ್ಟಿಕ್ ಶೆಟ್ಟಿ ಕಲ್ಪಡ
ಸಂಚಾಲಕರು, ಡ್ರೀಮ್ ಡಿ ನೃತ್ಯ ಕೇಂದ್ರ ಕಾಣಿಯೂರು