ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ ರವರನ್ನು ನಿಂದಿಸಿರುವುದಾಗಿ ಆರೋಪಿಸಿ ಉಪ್ಪಿನಂಗಡಿ ಬ್ಲಾಕ್ ವತಿಯಿಂದ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಜು.7 ಪುತ್ತೂರಿನ ದರ್ಬೆಯಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನಾ ಸಭೆಯಲ್ಲಿ ಅಜಿತ್ ಮಡಿಕೇರಿ ಎಂಬವರು ಶಾಸಕರನ್ನು ಅವಹೇಳನಾಕಾರಿಯಾಗಿ ಬೈದು, ಜೀವ ಬೆದರಿಕೆಯನ್ನು ಮಾಡಿರುತ್ತಾರೆ. ಶಾಸಕರಿಗೆ ಅವಮಾನ ಮಾಡಿರುತ್ತಾರೆ. ಭಾಷಣದಲ್ಲಿ ಕೋಮುಪ್ರಚೋದನೆಯನ್ನು ಮಾಡಿರುತ್ತಾರೆ. ಶಾಸಕರ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆ ಬಗ್ಗೆ ಇವರ ಪ್ರಭಾವವನ್ನು ಕುಂದಿಸಲು ಸುಳ್ಳು ಆರೋಪವನ್ನು ಹೊರಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು.ಟಿ. ತೌಸೀಫ್, ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿಮಿನೇಜಸ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ, ಉಪ್ಪಿನಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಡಿಸಿಸಿ ಕಾರ್ಯದರ್ಶಿ ನಝೀರ್ ಮಠ, ಶಬ್ಬೀರ್ ಕೆಂಪಿ, ಸಿದ್ದಿಕ್ ಕೆಂಪಿ, ಆದಂ ಕೊಪ್ಪಳ, ರವೀಂದ್ರ ಗೌಡ ಪಟ್ಟಾರ್ತಿ, ಝಕರಿಯಾ ಹಿರೆಬಂಡಾಡಿ, ಪ್ರೆಸಿಲ್ಲಾ ಡಿಸೋಜಾ ವಳಾಲು ಉಪಸ್ಥಿತರಿದ್ದರು.