ಗುರುವಿಲ್ಲದೆ ಪ್ರಪಂಚವಿಲ್ಲ- ಪ್ರೊ.ಶ್ರೀಧರ ಭಟ್
ಪುತ್ತೂರು : ಭಗವಾನ್ ವೇದವ್ಯಾಸರ ಜನ್ಮ ದಿನವನ್ನು ಗುರು ಪೂರ್ಣಮಿಯೆಂದು ಆಚರಿಸುತ್ತೇವೆ. ನಮ್ಮ ಅಜ್ಞಾನವನ್ನು ದೂರಗೊಳಿಸಲು ವ್ಯಾಸರನ್ನು ಅರಿಯಬೇಕು. ಈ ಪ್ರಪಂಚ ಹುಟ್ಟಿರುವುದು ಗುರು ಪರಂಪರೆಯಿಂದ. ಆದ್ದರಿಂದ ಗುರುವಿಲ್ಲದೆ ಈ ಪ್ರಪಂಚವೇ ಇಲ್ಲ. ಪ್ರತಿಯೊಬ್ಬ ಶ್ರೇಷ್ಠ ವ್ಯಕ್ತಿಯ ಹಿಂದೆ ಗುರುವಿನ ಕಾಣಿಕೆ ಇದ್ದೆ ಇದೆ. ಯಾರು ಶ್ರೇಷ್ಠರು ಅಲ್ಲ, ಕನಿಷ್ಠರು ಅಲ್ಲ ಯಾರು ಗುರು ಹಿರಿಯರಿಗೆ ಗೌರವ ಕೊಡುತ್ತಾರೋ ಅವರೇ ಶ್ರೇಷ್ಠರು. ಹೂವಿನ ಮೊಗ್ಗು ಅರಳಲು ಸೂರ್ಯನ ಕಿರಣ ಎಷ್ಟು ಮುಖ್ಯವೋ ಒಬ್ಬ ವಿದ್ಯಾರ್ಥಿಯ ಜೀವನ ಅರಳಲು ಕೂಡಾ ಗುರು ಅತ್ಯಗತ್ಯ ಎಂದು ಎಸ್ ಡಿಎಂ ಕಾಲೇಜು ಉಜಿರೆ ಇಲ್ಲಿಯ ಕುಲಸಚಿವ (ಆಡಳಿತ) ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಧರ್ ಭಟ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ವಿವೇಕಾನಂದ ಸಂಶೋಧನಾ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ನಡೆದ ಗುರು ಪೂರ್ಣಿಮಾ ಆಚರಣೆ ‘ಗುರುಸ್ಮರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್. ಮಾತನಾಡಿ, ನಾವಿಂದು ಆಧುನಿಕ ಶಿಕ್ಷಣದ ಧಾವಂತದಲ್ಲಿ ಗುರುಕುಲ ಶಿಕ್ಷಣವನ್ನು ಮರೆಯುತ್ತಿದ್ದೇವೆ. ಭಾರತೀಯ ಶಿಕ್ಷಣವನ್ನು ಅರಿಯ ಬೇಕಾದರೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯ ಜೊತೆಗೆ ನಮ್ಮ ದೇಶದ ಪರಂಪರೆಯ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಮತ್ತೆ ನಮ್ಮ ದೇಶದ ಘನತೆಯನ್ನು ಜಗತ್ತಿಗೆ ತೋರಿಸಲು ಸಾಧ್ಯ. ಬದುಕಿಗೆ ಆಸರೆಯಾಗುವ ಗುರುವನ್ನು ಅನುದಿನ ಪೂಜಿಸಿ ಗುರು ಶಿಷ್ಯರ ಸಂಬಂಧವನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಸಮಾಜದಲ್ಲಿ ದೇವರನ್ನು ನಂಬುವವರು ಇದ್ದಾರೆ ನಂಬದವರು ಇದ್ದಾರೆ. ಆದರೆ ದೇವರು ಮತ್ತು ಮನುಷ್ಯರ ನಡುವೆ ಇರುವ ಒಂದೇ ಸಂಗತಿ ಎಂದರೆ ಗುರು. ನಮ್ಮೆಲ್ಲರ ಯಶಸ್ಸಿನ ಹಿಂದೆ ಗುರುಹಿರಿಯರ ಶ್ರಮ ಇದ್ದು ಬದುಕಿನ ಉನ್ನತಿಗೆ ಇವರ ಅನುಗ್ರಹ ಅಗತ್ಯವೆಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಾಯಕ್, ಉಪಪ್ರಾಂಶುಪಾಲ ಪ್ರೊ. ಶ್ರೀ ಕೃಷ್ಣ ಗಣರಾಜ್ ಭಟ್, ಪರೀಕ್ಷಾಂಗ ಕುಲಸಚಿವ ಡಾ. ಹೆಚ್ ಜಿ. ಶ್ರೀಧರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಬಿ ಸ್ವಾಗತಿಸಿ, ಸಂಸ್ಕೃತ ವಿಭಾಗದ ಮುಖ್ಯಸ್ಥ ಶ್ರೀಶ ಕುಮಾರ್ ವಂದಿಸಿ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ.ಎಸ್ ನಿರೂಪಿಸಿದರು.