ಪಿಎಸ್‌ಐ ಕೆಯ್ಯೂರಿನ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ : ಲೋಕಾಯುಕ್ತ ಇನ್ಸ್‌ಪೆಕ್ಟರ್ ಆಗಿ ನಿಯುಕ್ತಿ

0

ಕೆಯ್ಯೂರು:ರಾಜ್ಯದಲ್ಲಿ ಸಬ್ ಇನ್ಸ್‌ಪೆಕ್ಟರ್(ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯೂರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಭಡ್ತಿಗೊಳಿಸಿ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.ಪ್ರಸಕ್ತ ಹೊಸಕೋಟೆಯಲ್ಲಿ ಬೆಸ್ಕಾಂ ಜಾಗೃತ ದಳದಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಕರ್ತವ್ಯದಲ್ಲಿದ್ದ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ನೀಡಿ ಯಲಹಂಕಕ್ಕೆ ಕರ್ನಾಟಕ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆಗಿ ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿದೆ.


ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರು:
2023ನೇ ವರ್ಷದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದ ಪ್ರದೀಪ್ ಪೂಜಾರಿಯವರಿಗೆ ಏ.2ರಂದು ಮೂರನೇ ಬೆಟಾಲಿಯನ್ ಪೆರೆಡ್ ಗ್ರೌಂಡ್ ಕೆಎಸ್‌ಆರ್‌ಪಿ ಕೋರಮಂಗಲ ದಲ್ಲಿ ನಡೆದಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದ್ದರು.ಚಿಕ್ಕಬಳ್ಳಾಪುರ ಗ್ರಾಮಾಅತರ ಪೊಲೀಸ್ ಠಾಣೆಯಲ್ಲಿ 2010ನೇ ಸಾಲಿನಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ಸೇರಿದ್ದ ಇವರು ರಾಜಾನುಕುಂಟೆ, ಆವಲಹಳ್ಳಿ, ಕಮರ್ಷಿಯಲ್ ಸ್ಟ್ರೀಟ್, ಶಿಡ್ಲಘಟ್ಟ ಗ್ರಾಮಾಂತರ, ವಿಶ್ವನಾಥಪುರ,ಚಿಕ್ಕಬಳ್ಳಾಪುರ ಗ್ರಾಮಾಂತರ ಮತ್ತು ಹೊರವಲಯ,ಬೆಂಗಳೂರು ಯಲಹಂಕ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಹೊಸಕೋಟೆಯಲ್ಲಿ ಬೆಸ್ಕಾಂ ಜಾಗೃತ ದಳದಲ್ಲಿ ಕರ್ತವ್ಯ ನಿರತರಾಗಿದ್ದರು.


ಗುರುತರ ಸಾಧನೆಗಳು:
ಇವರ ಅವಧಿಯಲ್ಲಿ ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ವಿಮಾನದಲ್ಲಿ ಬೆಂಗಳೂರುಗೆ ಬಂದು ಬಾಡಿಗೆಗೆ ಬೈಕನ್ನು ಪಡೆದು ಬೆಂಗಳೂರು ನಗರದಲ್ಲಿ ಸರಗಳ್ಳತನ ಮಾಡಿ ವಿಮಾನದಲ್ಲಿ ವಾಪಸ್ ಹೋಗುತ್ತಿದ್ದ ಬವೇರಿಯಾ ಗ್ಯಾಂಗ್ ಅನ್ನು ಇವರು ಪಂಜಾಬಿನಲ್ಲಿ ಪತ್ತೆ ಮಾಡಿ ಆರೋಪಿಗಳಿಂದ 500 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಂಡು ನೊಂದವರಿಗೆ ವಾಪಸ್ ದೊರೆಯುವಂತೆ ಮಾಡಿದ್ದರು.2022ನೇ ಸಾಲಿನಲ್ಲಿ ಪೆರೇಸಂದ್ರ ಗ್ರಾಮದಲ್ಲಿ ಎಎಸ್‌ಐ ನಾರಾಯಣಸ್ವಾಮಿ ಅವರ ಮನೆಯಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣ ಭೇದಿಸಿದ್ದ ಪ್ರದೀಪ್ ಪೂಜಾರಿಯವರು,ದೇಶದಲ್ಲಿಯೇ ಗ್ಯಾಂಗ್‌ಸ್ಟರ್ ಎಂದು ಕುಖ್ಯಾತಿ ಪಡೆದ ಉತ್ತರಪ್ರದೇಶದ ಹೈದರ್ ಮತ್ತು ತಂಡವನ್ನು ಉತ್ತರಖಾಂಡ್ ರಾಜ್ಯದಲ್ಲಿ ಪತ್ತೆ ಮಾಡಿ 12 ಲಕ್ಷ ರೂ.ನಗದು, 4 ಪಿಸ್ತೂಲು, 24 ಜೀವಂತ ಗುಂಡುಗಳು ಮತ್ತು ಬಂಗಾರದ ಒಡವೆಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ರುಂಡ, ಮುಂಡವನ್ನು ಬೇರ್ಪಡಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯ ಬಂಧನ, 16 ಜಿಲ್ಲೆಗಳಲ್ಲಿ ಎಟಿಎಂ ಕೇಂದ್ರಗಳ ಬಳಿ ಹಣ ಡ್ರಾ ಮಾಡಲು ಬರುವ ಸಾರ್ವಜನಿಕರನ್ನು ಯಾಮಾರಿಸಿ ಅವರ ಕಾರ್ಡುಗಳನ್ನು ಬದಲಾಯಿಸಿ ಹಣವನ್ನು ಡ್ರಾ ಮಾಡಿ ಮೋಸ ಮಾಡುತ್ತಿದ್ದ ಆರೋಪಿಗಳಾದ ಸಾಗರ್ ಮತ್ತು ಕಿರಣ್ ಕುಮಾರ್ ಎಂಬವರನ್ನು ಪತ್ತೆ ಮಾಡಿ ಪ್ರಕರಣಗಳನ್ನು ಬೆಳಕಿಗೆ ತಂದಿದ್ದ ಪ್ರದೀಪ್ ಪೂಜಾರಿಯವರು ಆವಲಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಮನೆ ಕಳವು ಮತ್ತು ಡಕಾಯಿತಿ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳರನ್ನು ಪತ್ತೆ ಮಾಡಿ ಹಣ,ಒಡವೆಗಳನ್ನು ವಶಪಡಿಸಿಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.ನಿವೃತ್ತ ಸರ್ವೆ ಸೂಪರ್‌ವೈಸರ್ ಬಾಲಕೃಷ್ಣ ಪೂಜಾರಿ ಕೆಂಗುಡೇಲು ಮತ್ತು ಗುಣವತಿ ದಂಪತಿಯ ಪುತ್ರನಾಗಿರುವ ಇವರು ಕೆಯ್ಯೂರು,ಸಂತ ಫಿಲೋಮಿನಾ, ಮೂಡಬಿದ್ರೆ ಆಳ್ವಾಸ್‌ನ ಹಿರಿಯ ವಿದ್ಯಾರ್ಥಿ.

LEAVE A REPLY

Please enter your comment!
Please enter your name here