ಧರ್ಮ ಹಾಗೂ ಆಧ್ಯಾತ್ಮ ಭಾರತದ ಆತ್ಮ-ರಾಧಾಕೃಷ್ಣ ಹೊಳ್ಳ
ಪುತ್ತೂರು: “ಧರ್ಮ ಮತ್ತು ಆಧ್ಯಾತ್ಮ ಭಾರತದ ವಿಶೇಷ ಅದನ್ನು ನಮ್ಮಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತದ ಚಿಂತನೆ ಇಂದು ವಿಶ್ವಕ್ಕೆ ಬೇಕಾಗಿದೆ. ನಮ್ಮಧರ್ಮ ಸಂಸ್ಕೃತಿಯನ್ನು ತಿಳಿದು ಆಚರಿಸಬೇಕು. ಭಾರತದ ಸಂಸ್ಕೃತಿಯ ಪ್ರಭಾವಜಗತ್ತಿನ ಮೇಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಹೊಳ್ಳ ಬೆಂಗಳೂರು ನುಡಿದರು. ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿ “ವಿಶ್ವದ ಸವಾಲುಗಳಿಗೆ ಭಾರತವೇ ಬೆಳಕು” ಎಂಬ ಧ್ಯೇಯದಲ್ಲಿ ನಡೆದ 44ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಅಭ್ಯಾಗತರಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ” ನಾವೆಲ್ಲರೂ ಪರಸ್ಪರ ಸಮನ್ವಯದಿಂದ ಬಾಳಬೇಕಾಗಿದೆ. ನಮ್ಮದು ವಿಶಾಲ ದೃಷ್ಟಿಕೋನವಿರುವ ಹಿಂದೂ ಸಮಾಜ. ಇಂದು ಶಾಂತಿಗಾಗಿ ಜಗತ್ತು ಭಾರತದ ಕಡೆ ನೋಡುತ್ತಿದೆ. ವಿಶ್ವದ ಸವಾಲಿಗೆ ಇಂದು ಭಾರತವೇ ಬೆಳಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ “ವಿಕಸನ ” ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಮಾಸಿಕ ಪತ್ರಿಕೆ “ವಿನೂತನ ” ವನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿವೇಕಾನಂದ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಹಾಗೂ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಗುರುರಾಜ್ ಎಂ.ಪಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಕ, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಎಂ. ಕೆ ನವೀನ್ಕುಮಾರ್ ವಂದಿಸಿದರು. ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಶಿಕ್ಷಕಿ ಲತಾ ಶಂಕರಿ ಹಾಗೂ ಜಯಶ್ರೀ ಆರ್.ಭಟ್ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ವಿವೇಕಾನಂದ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಗ್ರಾಮಸ್ಥರಿಂದ ಗ್ರಾಮ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ರಾಮಕೃಷ್ಣ ತಪೋವನ ಪೊಳಲಿಯ ಸ್ವಾಮಿ ವಿವೇಕ ಚೈತನ್ಯಾನಂದ “ನಾವು ಹಿಂದುಗಳಾಗಿ ನಮ್ಮ ಸ್ವಧರ್ಮವನ್ನು ಪಾಲಿಸಬೇಕಾಗಿದೆ. ಧರ್ಮವೇ ಭಾರತದ ಜೀವಾಳ. ಭಾರತ ಇಂದು ಆಧ್ಯಾತ್ಮಿಕ ವಿಶ್ವಗುರು ಆಗಬೇಕಾಗಿದೆ. ವಿದ್ಯಾರ್ಥಿಗಳು ದೇಶಕ್ಕೆ ಆಸ್ತಿ ಆಗಬೇಕು” ಎಂದರು.