ಶತಮಾನ ಪೂರೈಸಿದ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಂಪೂರ್ಣ ಡಿಜಿಟಲೀಕರಣದತ್ತ

0

ಮಹಾಸಭೆಯಲ್ಲಿ ಹಲವು ಹೊಸತನಗಳಿಗೆ ಚಾಲನೆ – ಅಧ್ಯಕ್ಷ ಕಿಶೋರ್ ಕೊಳತ್ತಾಯ ಘೋಷಣೆ

ಪುತ್ತೂರು: ಶತಮಾನ ಪೂರೈಸಿದ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಗ್ರಾಹಕರಿಗೆ ಪ್ರಯೋಜನ ಆಗುವ ರೀತಿಯಲ್ಲಿ ಹಲವು ಹೊಸತನಗಳೊಂದಿಗೆ ಸಂಪೂರ್ಣ ಡಿಜಿಟಲೀಕರಣವಾಗುತ್ತಿದ್ದು, ಇದರ ಪ್ರಮುಖ ಯೋಜನೆಗಳನ್ನು ಸೆ.14ರಂದು ನಡೆಯುವ 116ನೇ ವರ್ಷದ ಮಹಾಸಭೆಯಲ್ಲಿ ಚಾಲನೆ ನೀಡಲಾಗುವುದು ಎಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ್ ಕೊಳತ್ತಾಯ ಎನ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


2024-25ನೇ ಸಾಲಿನಲ್ಲಿ ನಮ್ಮ ಬ್ಯಾಂಕ್ ಇತಿಹಾಸದಲ್ಲಿ ಒಂದು ಹೊಸ ಮೈಲುಗಲ್ಲನ್ನು ಸಾಧಿಸಿದೆ. ವ್ಯವಹಾರದಲ್ಲಿ ಗಣನೀಯ ಹೆಚ್ಚಳ ಸಾಧಿಸಿದ್ದು, ಒಟ್ಟು ಠೇವಣಿ ರೂ.74.87 ಕೋಟಿ, ಒಟ್ಟು ಸಾಲ ರೂ.50.31 ಕೋಟಿಗಳಾಗಿದ್ದು, ಒಟ್ಟು ವ್ಯವಹಾರ ರೂ. 126.26 ಕೋಟಿ ದಾಟಿದೆ. ಈ ವರ್ಷದ ನಿವ್ವಳ ಲಾಭ ರೂ. 1.04 ಕೋಟಿ ಆಗಿದೆ ಎಂದ ಹೇಳಿದ ಅವರು ಹಲವು ಯೋಜನೆಗಳನ್ನು ಮಹಾಸಭೆಯಲ್ಲಿ ಚಾಲನೆ ನೀಡಲಾಗುವುದು ಅದರ ಬಳಿಕ ಈ ಆರ್ಥಿಕ ವರ್ಷಾಂತ್ಯದೊಳಗೆ ಸಂಪೂರ್ಣ ಡಿಜಿಟಲೀಕರಣ ಬ್ಯಾಂಕ್ ಮಾಡುವತ್ತ ನಮ್ಮ ಪ್ರಯತ್ನ ಸಾಗಲಿದೆ ಎಂದವರು ಹೇಳಿದರು.


ಹಲವು ಸಾಧನೆಗಳು
ಆರ್‌ಬಿಐ ನಿಯಮಾನುಸಾರ ಬಲಿಷ್ಠ ಕೋ ಓಪರೇಟಿವ್ ಬ್ಯಾಂಕ್ ಎನಿಸಿಕೊಳ್ಳಲು ಬ್ಯಾಂಕಿನ ನಿವ್ವಳ ಆನುತ್ಪಾದಿತ ಆಸ್ತಿ ಶೇ.1ಕ್ಕಿಂತ ಕಡಿಮೆ ಇದೆ. ಲೆಕ್ಕಪರಿಶೋಧನೆಯಲ್ಲಿ ಎ ಗ್ರೇಡ್ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಗಳ ಪ್ರಕಾರ ‘ಆರ್ಥಿಕವಾಗಿ ಬಲಿಷ್ಠ ಮತ್ತು ಉತ್ತಮ ಆಡಳಿತ ಬ್ಯಾಕ್’ ಎಂಬ ಸರ್ಟಿಫಿಕೇಟ್ ಪಡೆದುಕೊಂಡಿದೆ. ಸಿಕೆವೈಸಿ, ಸಿಐಬಿಐಎಲ್, ಸಿಇಆರ್‌ಎಸ್‌ಎಐ ಪೂರ್ಣಗೊಳಿಸಿದೆ. ಐಎಸ್ ಅಡಿಟ್, ಸೈಬರ್ ಸೆಕ್ಯೂರಿಟಿ ಅಡಿಟ್ ಮಾಡಲಾಗಿದೆ. ವಿಟ್ಲದಲ್ಲಿ ಶಾಖೆ ಅರಂಭಿಸಿ ಉತ್ತಮ ವ್ಯವಹಾರ ನಡೆಯುತ್ತಿದೆ. 2025-26ನೇ ಸಾಲಿನಲ್ಲೂ ಇನ್ನೊಂದು ಶಾಖೆ ತೆರೆಯಲು ಯೋಜನೆ ಹಾಕಿಕೊಂಡಿದ್ದೇವೆ. ಬ್ಯಾಂಕಿಗೆ ಸೋಲಾರ್ ವಿದ್ಯುತ್ ಗ್ರಿಡ್ ಸ್ಥಾಪಿಸಿ ವಿದ್ಯುತ್ ಶಕ್ತಿ ಯೋಜನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಸವಾಲಾಗಿರುವ ಸಾಲಗಳನ್ನು ವಸೂಲು ಮಾಡಿದೆ. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಎರಡು ಅಂಗಡಿ ಕೋಣೆಗಳನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಬ್ಯಾಂಕಿನ ಭದ್ರತೆಗಾಗಿ ಸೆಕ್ಯೂರಿಟಿ ಆಲಾರಾಂ, ಸಿಸಿಟಿವಿ ಅಳವಡಿಸಿದ್ದವೆ. ಹಗಲು, ರಾತ್ರಿ ಕಾವಲುಗಾರರನ್ನು ನೇಮಿಸಲಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸೈನ್ ಇನ್ ಸೆಕ್ಯೂರಿಟಿ ಸಹಾಯದಿಂದ 24 ಗಂಟೆಗಳ ಕಾಲ ಕಂಟ್ರೋಲ್ ರೂಮ್ ಮುಖಾಂತರ ಭದ್ರತೆ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆ ಮಾಡಲಾಗಿದೆ. ಬ್ಯಾಂಕ್‌ನಲ್ಲಿ ಚಿನ್ನಾಭರಣ, ಗೃಹ, ಆಸ್ತಿ ಅಡಮಾನ, ವಾಹನ ಸಾಲ, ಆಸ್ತಿ ಭದ್ರತೆಯ ಮೇಲೆ ಓವರ್ ಡ್ರಾಫ್ಟ್ ಸೌಲಭ್ಯ ಸಹಿತ ಹಲವು ಸಾಲ ಯೋಜನೆ ಆರಂಭಿಸಿದ್ದೇವೆ ಎಂದವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಶ್ರೀಧರ ಗೌಡ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ್ ಶೆಟ್ಟಿ, ನಿರ್ದೇಶಕರಾದ ರಾಮಚಂದ್ರ ಕಾಮತ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ಕಿರಣ್ ಕುಮಾರ್ ರೈ, ಸುಜೀಂದ್ರ ಪ್ರಭು, ಮಲ್ಲೇಶ್ ಕುಮಾರ್, ಶ್ರೀಧರ ಪಟ್ಲ, ಗಣೇಶ್ ಕೌಕ್ರಾಡಿ, ಸೀಮಾ ಎಂ.ಬಿ, ವೀಣಾ ಉಪಸ್ಥಿತರಿದ್ದರು.


ಹಲವು ಹೊಸ ಯೋಜನೆಗಳಿಗೆ ಮಹಾಸಭೆಯಲ್ಲಿ ಚಾಲನೆ
ಕಾಲ ಬದಲಾಗುತ್ತಿದ್ದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಯುವ ಪೀಳಿಗೆಯನ್ನು ನಮ್ಮ ಬ್ಯಾಂಕಿನತ್ತ ಸೆಳೆಯಬೇಕಾದ ಅವಶ್ಯಕತೆ ಇದೆ. ಇತರ ಬ್ಯಾಂಕ್‌ಗಳ ಜೊತೆಗೆ ಸ್ಪರ್ಧಿಸುವ ಅವಶ್ಯಕತೆಯೂ ಇದೆ. ಈ ನಿಟ್ಟಿನಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಕ್ರಾಂತಿಕಾರಿ ಹೆಜ್ಜೆಯಿಡಲು ಯೋಚಿಸಲಾಇದೆ. ಹಾಗಾಗಿ ಬ್ಯಾಂಕ್ ಗ್ರಾಹಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದಕ್ಕೆ ಮಹಾಸಭೆಯಲ್ಲಿ ಚಾಲನೆ ನೀಡಲಾಗುವುದು. ಅದರಲ್ಲಿ ಗ್ರಾಹಕರಿಗೆ ಚೆಕ್ ಕಲೆಕ್ಷನ್‌ಗೆ ಈ ಹಿಂದೆ 3 ದಿನ ತಗಲುತ್ತಿತ್ತು. ಈಗ ಸಿಟಿಎಸ್ ಕ್ಲಿಯರಿಂಗ್ ಕ್ಷೇತ್ರಕ್ಕೆ ಬ್ಯಾಂಕ್ ಕಾಲಿಟ್ಟಿದೆ. ಇನ್‌ವರ್ಡ್ ಮತ್ತು ಔಟ್‌ವರ್ಡ್ ಕ್ಲಿಯರಿಂಗ್ ಎರಡರಲ್ಲೂ ಸಿಟಿಎಸ್ ಕ್ಲಿಯರಿಂಗ್ ವ್ಯವಸ್ಥೆ ಪ್ರಾರಂಭಿಸಲಾಗುತ್ತಿದೆ. ನೇರ ಹಣ ವರ್ಗಾವಣೆಗಾಗಿ ನೇರ ಆರ್‌ಟಿಜಿ ಮತ್ತು ಎನ್‌ಇಎಫ್‌ಟಿ ವ್ಯವಸ್ಥೆ ಜಾರಿಗೊಳಿಸಿದ್ದು, ಆಕ್ಸಿಸ್ ಬ್ಯಾಂಕ್‌ನ ಸಹಕಾರದಲ್ಲಿ ಬ್ಯಾಂಕ್ ಐಎಫ್‌ಎಸ್‌ಸಿ ಕೋಡ್ ಹೊಂದಿದ್ದು, ನೇರ ಹಣ ವರ್ಗಾವಣೆ ಮಾಡಲಾಗುವುದು. ಮೊಬೈಲ್ ಬ್ಯಾಂಕಿಂಗ್‌ಗೂ ಚಾಲನೆ ನೀಡಲಾಗುವುದು ಜೊತೆಗೆ ಎಟಿಎಮ್ ಖಾರ್ಡ್ ಮಹಾಸಭೆಯಲ್ಲಿ ಚಾಲನೆ ನೀಡಲಾಗುವುದು.
ಕಿಶೋರ್ ಕೊಳತ್ತಾಯ ಎನ್ ಅಧ್ಯಕ್ಷರು


ಮೊಬೈಲ್ ಬ್ಯಾಂಕಿಂಗ್
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಅನುಕೂಲ ಆಗುವಂತೆ ಮೊಬೈಲ್ ಬ್ಯಾಂಕಿಂಗ್ ಪ್ರಮುಖ ಅಂಶ. ಇದನ್ನು ಸದ್ಯಕ್ಕೆ ಮೊಬೈಲ್‌ನಲ್ಲಿ ಮೊಬೈಲ್ ಬ್ಯಾಂಕಿಂಗ್ ಆಪ್ ಡೌನ್‌ಲೋಡ್ ಮಾಡಿಕೊಂಡು ಗ್ರಾಹಕರು ತಮ್ಮ ಖಾತೆಯ ವಿವರ ಮತ್ತು ಎಮ್ ಪಾಸ್ ಬುಕ್ ಪಡೆಯಬಹುದು. ಸದ್ಯ ನಾವು ಗ್ರಾಹಕರಿಗೆ ಬ್ಯಾಂಕ್‌ನಲ್ಲೇ ಆಪ್ ಅಳವಡಿಸಿಕೊಡುತ್ತೇವೆ. ಸೈಬರ್ ಕ್ರೈಮ್ ಮುನ್ನೆಚ್ಚರಿಕೆಯಾಗಿ ಸದಸ್ಯ ಗ್ರಾಹಕರ ಇಮೇಲ್‌ಗೆ ಆಪ್ ಲಿಂಕ್ ಕಳುಹಿಸುತ್ತೇವೆ. ಅವರು ಅದನ್ನು ಡೌನ್‌ಲೋಡ್ ಮಾಡಿ ಮೊಬೈಲ್ ಬ್ಯಾಂಕಿಂಗ್ ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು.
ಬಿ.ಶೇಖರ ಶೆಟ್ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

LEAVE A REPLY

Please enter your comment!
Please enter your name here