ಪುತ್ತೂರು: ಕೃತಕ ಬುದ್ಧಿಮತ್ತೆಯು ದಿನದಿಂದ ದಿನಕ್ಕೆ ಅಗಾಧವಾಗಿ ವ್ಯಾಪಿಸುತ್ತಿದ್ದು, ಮಾನವ ಜೀವನದ ಅವಿಭಾಜ್ಯ ಅಂಗವಾಗುತ್ತಿದೆ ಎಂದು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್ (AIML) ವಿದ್ಯಾರ್ಥಿ ವಿಭಾಗ, IEEE VCET ವಿದ್ಯಾರ್ಥಿ ವಿಭಾಗ ಮತ್ತು IEEE ಕಮ್ಯುನಿಕೇಶನ್ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಹಾಕಥಾನ್ ಸ್ಪರ್ಧೆ ಕೋಡ್ ಮಂಥನ್-25ಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕಷ್ಟೇ ಸೀಮಿತವಾಗಬಾರದು ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಸಮಾಜದ ಒಳಿತಿಗೆ ಬಳಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
IEEE VCET ವಿದ್ಯಾರ್ಥಿ ವಿಭಾಗದ ಸಂಯೋಜಕಿ ಡಾ.ಜೀವಿತಾ.ಬಿ.ಕೆ ಮಾತನಾಡಿ ಕೃತಕ ಬುದ್ಧಿಮತ್ತೆ ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಲು ವಿದ್ಯಾರ್ಥಿಗಳಿಗೆ ಇದೊಂದು ಸದಾವಕಾಶ ಎಂದರು.
ಸಮಾಜದಲ್ಲಿ ಜನಸಾಮಾನ್ಯರು ವಿವಿಧ ಕ್ಷೇತ್ರಗಳಲ್ಲಿ ಎದುರಿಸುವ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಉತ್ತರವನ್ನು ಕೊಂಡು ವಿದ್ಯಾರ್ಥಿಗಳ ಮೂಲಕ ಯೋಜನೆಯನ್ನು ತಯಾರಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಅಭಿಷೇಕ್ ಕುಮಾರ್, LEEE ವಿದ್ಯಾರ್ಥಿ ವಿಭಾಗದ ಸಂಯೋಜಕಿ ಡಾ.ಜೀವಿತ.ಬಿ.ಕೆ, ಕಾರ್ಯಕ್ರಮದ ಸಂಯೋಜಕ ಪ್ರೊ.ಅಜಯ್ ಶಾಸ್ತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
IEEE VCET ವಿದ್ಯಾರ್ಥಿ ವಿಭಾಗದ ಅಧ್ಯಕ್ಷೆ ಅನಘ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕ ಬಾಲಸುಬ್ರಮಣ್ಯ ವಂದಿಸಿದರು. ಮೇಘನಾ.ಕೆ.ಎನ್ ಕಾರ್ಯಕ್ರಮ ನಿರ್ವಹಿಸಿದರು.