ಪುತ್ತೂರು: ಕಳೆದ ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಬಗ್ಗೆ ಅಸಭ್ಯ ಸಂದೇಶವನ್ನು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕು ಕಚೇರಿ ಸಿಬ್ಬಂದಿಯೋರ್ವರು ಶಾಸಕರ ಬಳಿ ಬಂದು ಕ್ಷಮೆ ಕೇಳಿದ್ದು, ಬುದ್ದಿವಾದ ಹೇಳಿದ ಶಾಸಕರು ಇನ್ನು ಮುಂದೆ ಯಾರ ಬಗ್ಗೆಯೂ ಅಸಭ್ಯ ಸಂದೇಶ ಕಳುಹಿಸಬೇಡಿ ಎಂದು ಹೇಳಿ ಆತನನ್ನು ಕ್ಷಮಿಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದರು.
ಅಶೋಕ್ ರೈ ಶಾಸಕರಾಗಿ ಆಯ್ಕೆಯಾದ ಕೆಲವು ತಿಂಗಳ ಬಳಿಕ ಯುವಕ ಶಾಸಕರ ಬಗ್ಗೆ ಅಸಭ್ಯವಾದ ಪದಗಳನ್ನು ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಇದರ ವಿರುದ್ದ ಅಶೋಕ್ ರೈ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪ್ರಕರಣದ. ಬಗ್ಗೆ ಪೊಲೀಸ್ ತನಿಖೆ ಆರಂಭವಾಗುತ್ತಿದ್ದಂತೆಯೇ ತಾಲೂಕು ಕಚೇರಿ ಸಿಬ್ಬಂದಿ ಶಾಸಕರಲ್ಲಿ ಬಂದು ನಾನು ತಪ್ಪು ಮಾಡಿದೆ ,ನನ್ನನ್ನು ಕ್ಷಮಿಸಿ ಸರ್ ಎಂದರು. ನೀವು ಕ್ಷಮಿಸದೆ ಇದ್ದಲ್ಲಿ ನನಗೆ ತೊಂದರೆಯಾಗಲಿದ್ದು, ನನ್ನ ನೌಕರಿಗೂ ಕುತ್ತು ಬರಲಿದೆ ಎಂದು ಕೇಳಿಕೊಂಡರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ನೀವು ನನ್ನ ಬಗ್ಗೆ ಕೆಟ್ಟ ಕಮೆಂಟ್ ಹಾಕಿದ್ದೀರಿ, ನಾನು ನಿಮಗಾಗಲಿ, ನಿಮ್ಮ ಕುಟುಂಬದವರಿಗಾಗಲಿ ಏನೂ ತೊಂದರೆ ಕೊಟ್ಟಿಲ್ಲ ಮತ್ತೆ ಯಾಕೆ ನನ್ನ ಮೇಲೆ ಕೋಪ ಎಂದು ಕೇಳಿದರು. ನೀವು ಮಾಡಿದ ಈ ಕೃತ್ಯಕ್ಕೆ ನೀವು ಪಶ್ಚತ್ತಾಪ ಪಟ್ಟು ನನ್ನ ಬಳಿ ಬಂದಿದ್ದೀರಿ, ಇದಕ್ಕಾಗಿ ನಿಮ್ಮನ್ನು ಕ್ಷಮಿಸಿದ್ದೇನೆ. ಮುಂದಕ್ಕೆ ಯಾರ ಬಗ್ಗೆಯೂ ಕೆಟ್ಟ ಕಮೆಂಟ್ ಹಾಕಬೇಡಿ. ಈ ರೀತಿಯ ಕಮೆಂಟ್ ಹಾಕುವುದು ಸಭ್ಯರ ಲಕ್ಷಣವಲ್ಲ ಎಂದು ಬುದ್ದಿವಾದ ಹೇಳಿ ಕಳುಹಿಸಿದರು ಎಂದು ವರದಿಯಾಗಿದೆ.