ಪುತ್ತೂರು: ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪುತ್ತೂರು ತಾಲೂಕು ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗಿಸ್ ವಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲೇನಿದೆ?
ಹಿಂದೂ ಧರ್ಮದ ಪರವಾಗಿ ಸಮಾಜ ಪರಿವರ್ತನೆ ಕಾರ್ಯ ಮಾಡುತ್ತಿರುವ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಮೇಲೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆ ಪ್ರವೇಶ ನಿಷೇಧಿರಿಸುವುದು ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆ ಆಗಿದ್ದು, ಧಾರ್ಮಿಕ ಸಹಿಷ್ಣುತೆಗೂ ಧಕ್ಕೆಯಾಗಿದೆ. ಆದ್ದರಿಂದ ರಾಜ್ಯಪಾಲರು ಈ ನಿಷೇಧದ ವಿಚಾರದಲ್ಲಿ ಸಂವಿಧಾನ ಪ್ರಕಾರ ಸೂಕ್ತ ತನಿಖೆ ನಡೆಸಿ, ಈ ನಿಷೇಧವನ್ನು ತಕ್ಷಣ ರದ್ದುಪಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು. ಕಳೆದ ಶತಮಾನಗಳಿಂದ ರಾಷ್ಟ್ರದ ಸಂಕಷ್ಟದ ಸಂದರ್ಭಗಳಲ್ಲಿ ಸಂಘವು ನಿರಪೇಕ್ಷ ಸೇವೆ ಸಲ್ಲಿಸಿರುವುದು ರಾಷ್ಟ್ರಪ್ರೇಮದ ನಿದರ್ಶನವಾಗಿದೆ. ಇಂತಹ ಸಂಸ್ಥೆಯ ಮೇಲೆ ಕೋಮುವಾದ ದ್ವೇಷ ಅಥವಾ ಸಂವಿಧಾನ ಬಾಹಿರ ಕ್ರಿಯೆಗಳಲ್ಲಿ ತೊಡಗಿದೆ ಎಂಬ ಆರೋಪಗಳನ್ನು ರಾಜಕೀಯ ಉದ್ದೇಶಕ್ಕಾಗಿ ಮಾಡುವುದು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಅಪರಾಧವಾಗಿದೆ. ಸರಕಾರವು ಸಂಘದ ವಿರುದ್ಧ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವಾ ಸಂಸ್ಥೆಯಾಗಿದ್ದು, ಕೇಂದ್ರ ಸರಕಾರದ ಆಜ್ಞೆ ಪ್ರಕಾರ ಸರ್ಕಾರಿ ನೌಕರರು ಸಾಮಾಜಿಕ ಸಂಸ್ಥೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿಲ್ಲ. ಹೀಗಿರುವಾಗ ಸರಕಾರಿ ನೌಕರರು ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ ಕಾರಣಕ್ಕೆ ಅವರನ್ನು ಅಮಾನತು ಮಾಡಿರುವುದು ಅಧಿಕಾರದ ದುರ್ಬಳಕೆ ಹಾಗೂ ಸಂವಿಧಾನ ಬಾಹಿರ ಕ್ರಮವಾಗಿದೆ. ಅವರ ಅಮಾನತು ಆದೇಶವನ್ನು ತಕ್ಷಣ ರದ್ದುಪಡಿಸಲು, ಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿಯಲ್ಲಿ ತಿಳಿಸಲಾಗಿದೆ.
ಉದ್ಯಮಿ ಹಾಗೂ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರು, ಬಡಗನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಂತೋಷ್ ಆಳ್ವ, ದಸ್ತಾವೇಜು ಬರಹಗಾರರಾದ ಬಾಲಚಂದ್ರ ಸೊರಕೆ, ದಿವಾಕರ ಪಾಲ್ತಾಡಿ, ಜಯರಾಮ ಸಿಎನ್, ಪಿ ಆನಂದ ಪುತ್ತೂರು, ಪ್ರಸನ್ನ ಕಾಮತ್ ಉಪ್ಪಿನಂಗಡಿ, ಸತೀಶ್ ಗೌಡ ಕೋಲ್ಪೆ ನೆಲ್ಯಾಡಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
