ಪುತ್ತೂರು: ಮರೀಲು ಬಳಿ ತಡ ರಾತ್ರಿ ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದ ವ್ಯಕ್ತಿಯೋರ್ವರಿಗೆ ಪುತ್ತೂರು ನಗರಸಭೆ ದಂಡ ವಿಧಿಸಿದ ಘಟನೆ ನಡೆದಿದೆ.
ಪುರುಷರಕಟ್ಟೆ ಮೂಲದ ಮಹಮ್ಮದ್ ಎಂಬವರು ರಸ್ತೆ ಬದಿ ಕಸ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಡಿ.10ರಂದು ನಗರಸಭೆಗೆ ಬಂದು ದಂಡ ಪಾವತಿಸಿದ್ದಾರೆ.

ಘಟನೆ ವಿವರ:
ಡಿ.8ರಂದು ಮರೀಲು ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನ ಡಿಯೋದಲ್ಲಿ ಬಂದ ವ್ಯಕ್ತಿಯೊಬ್ಬರು ರಸ್ತೆ ಬದಿಗೆ ಕಸವಿದ್ದ ಕಟ್ಟೊಂದನ್ನು ಬೀಸಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕಸ ಎಸೆದವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸ್ಥಳೀಯರ ಮತ್ತು ಕಸ ಎಸೆದ ವ್ಯಕ್ತಿ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಮತ್ತು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಅವರು ಬಂದು ಕಸವನ್ನು ರಸ್ತೆ ಬದಿಗೆ ಎಸೆದ ವ್ಯಕ್ತಿಗೆ ಎಚ್ಚರಿಕೆ ನೀಡಿದರಲ್ಲದೆ ದಂಡ ಪಾವತಿಸುವಂತೆ ಸೂಚಿಸಿದ್ದರು. ಅದರಂತೆ ಡಿ.10ರಂದು ನಗರಸಭೆಗೆ ಆಗಮಿಸಿದ ಮಹಮ್ಮದ್ ದಂಡ ಪಾವತಿಸಿದ್ದಾರೆ. ನಗರಸಭಾ ವ್ಯಾಪ್ತಿಯ ರಸ್ತೆ ಇಕ್ಕೆಲಗಳಲ್ಲಿ ಕಸ ಎಸೆಯುವುದು ಕಂಡು ಬಂದಲ್ಲಿ ದೊಡ್ಡ ಮೊತ್ತದ ದಂಡ ವಿಧಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.