ಆಲಂಕಾರು: ಎಂಡೋ ಸಂತ್ರಸ್ತರ, ವಿಶೇಷಚೇತನರ ಆರೋಗ್ಯ ತಪಾಸಣಾ ಶಿಬಿರ

0

ಆಲಂಕಾರು: ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಯಿಲ ಹಾಗೂ ಆಲಂಕಾರು ಗ್ರಾಮ ಪಂಚಾಯತ್‌ನ ಸಹಕಾರದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಎಂಡೋಸಂತ್ರಸ್ತರ ಮತ್ತು ವಿಶೇಷಚೇತನರ ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ ಶಿಬಿರ ಡಿ.೧೬ರಂದು ಆಲಂಕಾರು ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.


ಶಿಬಿರದಲ್ಲಿ ಸಾಮಾನ್ಯ ರೋಗದ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ಕಣ್ಣಿನ ತಜ್ಞರು, ಕಿವಿ, ಮೂಗು, ಗಂಟಲು ತಜ್ಞ ವೈದ್ಯರು ಎಂಡೋ ಸಂತ್ರಸ್ತರು ಮತ್ತು ವಿಶೇಷಚೇತನರಿಗೆ ವೈದ್ಯಕೀಯ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಆಲಂಕಾರು, ಪೆರಾಬೆ ಮತ್ತು ಕುಂತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂಡೋ ಪೀಡಿತರು ಹಾಗೂ ವಿಶೇಷಚೇತನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಆಲಂಕಾರು ಆರೋಗ್ಯ ಸಮುದಾಯ ಸುರಕ್ಷಾಧಿಕಾರಿ ಬಿನ್ಸಿ, ಕುಂತೂರು ಸಮುದಾಯ ಸುರಕ್ಷಾಧಿಕಾರಿ ರಮ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮೋಹನಾಂಗಿ, ಆಲಂಕಾರು, ಕುಂತೂರು ಮತ್ತು ಪೆರಾಬೆ ಗ್ರಾಮದ ಆಶಾ ಕಾರ್ಯಕರ್ತೆಯರು, ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಆಲಂಕಾರು ಗ್ರಾ.ಪಂ.ನ ಮೋನಪ್ಪ ಬರೆಪುದೇಲು, ಪೆರಾಬೆ ಗ್ರಾ.ಪಂ.ನ ಮುತ್ತಪ್ಪ ಬಿ., ಸಹಕರಿಸಿದರು.

LEAVE A REPLY

Please enter your comment!
Please enter your name here