ಒಳಮೊಗ್ರು ಗ್ರಾಮ

ಶ್ರೀ ಮಹಾಕಾಳಿ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನ, ಒಳಮೊಗ್ರು, ಕುಂಬ್ರ ಅಂಚೆ, ಪುತ್ತೂರು ದ.ಕ.-574 210. ಮೊ: 9480230206, 9901754299, 8105977103

ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನ ಪ್ರಮುಖ ದೈವ ಕ್ಷೇತ್ರ. ಇಲ್ಲಿ ಉಳ್ಳಾಕುಲು ದೈವದೊಂದಿಗೆ ಪಿಲಿಭೂತ, ಜುಮಾದಿ, ಕುಪ್ಪೆ ಪಂಜುರ್ಲಿ, ಮಹಾಕಾಳಿ, ಮಲರಾಯ, ರಕ್ತೇಶ್ವರಿ, ಕನ್ನಡಭೂತ, ಗುಳಿಗ, ನಾಗ ಸಾನಿಧ್ಯವೂ ಇದೆ. ಒಳಮೊಗ್ರು ಗ್ರಾಮದಲ್ಲಿ ಯಾವುದೇ ದೇವಾಲಯಗಳಿಲ್ಲ. ಜೈನ ಅರಸರ ಆಳ್ವಿಕೆಯಲ್ಲಿ ಆರಾಧನೆ ನಡೆಯುತ್ತಿತ್ತು. ಅರಸು ದೈವಗಳಾದ ಉಳ್ಳಾಕುಲುಗಳ ವಿಶೇಷವೆಂದರೆ ಭಂಡಾರದ ಚಾವಡಿ ಒಂದೆಡೆ ಇದ್ದರೆ, ಜಾತ್ರೆ ನಡೆಯುವ ಸ್ಥಳ (ಮಾಡ) ಬೇರೆಡೆ ಇದೆ. ಮುಗೇರುನಲ್ಲಿರುವ ಕದಿಕೆ ಚಾವಡಿಯಲ್ಲಿ ಉಳ್ಳಾಕುಲು ದೈವಗಳ ಭಂಡಾರವಿದೆ. ಜಾತ್ರೆ ನಡೆಯುವುದು ಬೊಳ್ಳಾಡಿಯ ರಾಜ ಮಾಡದಲ್ಲಿ.
ಇದೀಗ ರೂ. ೭೦ ಲಕ್ಷದಲ್ಲಿ ಕ್ಷೇತ್ರದ ಜೀರ್ಣೋದ್ಧಾರವಾಗುತ್ತಿದ್ದು, ಮಕರ ಮಾಸದಲ್ಲಿ ನೇಮೋತ್ಸವ ನಡೆಯುತ್ತದೆ. ಪ್ರತೀ ಸಂಕ್ರಮಣಕ್ಕೆ ತಂಬಿಲ ಸೇವೆಯಿದೆ.
ಪ್ರಸ್ತುತ ಎ. ಚಿಕ್ಕಪ್ಪ ನೈಕ್ ಅರಿಯಡ್ಕ, ಎ.ಜಿ. ವಿಜಯ ಕುಮಾರ್ ರೈ ಮುಗೇರು, ಜೆ.ಕೆ. ವಸಂತ ಗೌಡ ಉರ್ವ ಮೊಕ್ತೇಸರರಾಗಿದ್ದಾರೆ.

ಪರ್ಪುಂಜ ರಾಮಜಾಲು ಗರಡಿ

ಕಾರಣಿಕತೆಯನ್ನು ಮೆರೆದ ಅವಳಿ ವೀರ ಪುರುಷರಾದ ಕೋಟಿ ಚೆನ್ನಯರಿಗೆ ಈ ನಾಡಿನ ಹಲವು ಕಡೆಗಳಲ್ಲಿ ಆರಾಧನಾ ಕ್ಷೇತ್ರಗಳಿವೆ. ಭಕ್ತಿಯಿಂದ ಕೈ ಮುಗಿದು ನಿಂತ ಭಕ್ತನ ಕಷ್ಟಗಳಿಗೆ ಸ್ಪಂದಿಸುತ್ತಾ ಅವರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾನ್ ಚೇತನಗಳಾಗಿರುವ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ ದೈವ ಶಕ್ತಿಗಳ ಆರಾಧನಾ ಕ್ಷೇತ್ರಗಳಾದ ಹಲವು ಗರಡಿಗಳ ಸಾಲಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಪರ್ಪುಂಜದ ರಾಮಜಾಲು ಗರಡಿ ಕೂಡ ಒಂದಾಗಿದೆ.
ರಾಮಜಾಲು ಎಂಬ ಹೆಸರೇ ಸೂಚಿಸುವಂತೆ ಇದೊಂದು ದೈವ ಭಕ್ತರ ಊರಾಗಿತ್ತು. ರಾಮ ಲಕ್ಷ್ಮಣರೂ ಕೂಡ ಈ ಭಾಗದಲ್ಲಿ ಅಡ್ಡಾಡಿರಬಹುದು, ಇಲ್ಲೇ ಪಕ್ಕದಲ್ಲಿ ಬೊಮ್ಮೆರೆಗುಡ್ಡೆ (ಬಿರ್ಮೆರೆ ಗುಡ್ಡ) ಇದೆ. ಬೊಮ್ಮೆ ಎಂದರೆ ಬ್ರಹ್ಮ, ಬಿರ್ಮೆರ್ ಎಂದರೆ ಕೋಟಿ ಚೆನ್ನಯರು. ೧೯೭೯ರಲ್ಲಿ ಮಗಿರೆ ವಿಠಲ ಪೂಜಾರಿಯವರು ಊರವರ ಸಹಕಾರದಿಂದ ನೇಮೋತ್ಸವ ಆರಂಭಿಸಿದ್ದರು. ಡೆಕ್ಕಳ ಮಹಾಬಲ ರೈಯವರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡು ಒಂದು ಸಮಿತಿಯನ್ನು ರಚಿಸಿದ್ದರು. ಸುಮಾರು ೩೩ ವರ್ಷಗಳ ಇತಿಹಾಸ ಈ ಗರಡಿಗಿದೆ. ಸಂಶೋಧಕ ಡಾ. ವಾಮನ ನಂದಾವರ ಬರೆದ ಕೋಟಿ ಚೆನ್ನಯ ಅಧ್ಯಯನ ಗ್ರಂಥದಲ್ಲೂ ಈ ಗರಡಿಯ ಉಲ್ಲೇಖವಿದೆ. ೧೯೮೨ರಲ್ಲಿ ಒಂದು ಚಿಕ್ಕ ಗರಡಿ ನಿರ್ಮಾಣವಾಗಿತ್ತು. ಆದರೆ ಸುಮಾರು ೨೭ ವರ್ಷಗಳಿಂದ ಯಾವುದೇ ಜೀರ್ಣೋದ್ಧಾರ ಕಾಣದೆ ಬಹಳ ಅಜೀರ್ಣ ಅವಸ್ಥೆಯಲ್ಲಿದ್ದ ಈ ಗರಡಿಗೆ ಹೊಸ ರೂಪ ಕೊಟ್ಟು ೨೦೦೮ರಲ್ಲಿ ಬ್ರಹ್ಮಕಲಶೋತ್ಸವ ಮಾಡಿಸಿ ನಂತರ ಕಾಲಾನುಕಾಲಕ್ಕೆ ದೈವದ ಆರಾಧನೆ ಮಾಡಿಕೊಂಡು ಬರುತ್ತಿರುವವರು ಕೂರೇಲು ಸಂಜೀವ ಪೂಜಾರಿಯವರು.
ರಾಮಜಾಲು ಗರಡಿಯಲ್ಲಿ ಬಂದು ಭಕ್ತಿಯಿಂದ ಕೈ ಮುಗಿದರೆ ತಮ್ಮ ಕಷ್ಟಗಳು ದೂರವಾಗುತ್ತದೆ. ಮದುವೆಯಾಗದವರಿಗೆ ಮದುವೆ, ಮಕ್ಕಳಾಗದವರಿಗೆ ಮಕ್ಕಳು, ಕೃಷಿಗೆ ಬಾಧಿಸುವ ಕೀಟಗಳ ನಿವಾರಣೆ, ಬಾವಿ, ಕೆರೆ, ಕೊಳವೆಬಾವಿ ತೆಗೆದವರಿಗೆ ನೀರು ಸಿಗುವುದು, ಸರ್ಪದೋಷ ಸೇರಿದಂತೆ ದನಕರುಗಳಿಗೆ ಬಾಧಿಸುವ ಕಷ್ಟ ಕಾರ್ಪಣ್ಯ ಗಳು ಇಲ್ಲಿಗೆ ಹರಕೆ ಹೊತ್ತುಕೊಂಡಾಗ ಅದರಲ್ಲೂ ಭಕ್ತಿಯಿಂದ ಕೈಮುಗಿದು ಪ್ರಾರ್ಥಿಸಿದಾಗ ಗುಣವಾಗುತ್ತದೆ ಎಂಬ ಪ್ರತೀತಿ, ನಿದರ್ಶನಗಳಿವೆ.
ಮುಖ್ಯಸ್ಥರು – ಕೆ. ಸಂಜೀವ ಪೂಜಾರಿ ಕೂರೇಲು (9448153055)

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಪಿಲಿಚಾಮುಂಡಿ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಪನಡ್ಕ ಕುಟುಂಬ ದೈವಸ್ಥಾನ
* ಶ್ರೀ ಧೂಮಾವತಿ ದೈವಸ್ಥಾನ ಕೈಕಾರ
* ಶ್ರೀ ಜಠಾಧಾರಿ ದೈವಸ್ಥಾನ ಅಜ್ಜಿಕಲ್ಲು 9481229441 (ಹರಿಪ್ರಸಾದ್ ರೈ)
* ಪರ್ಪುಂಜ ಶ್ರೀ ರಾಮಜಾಲು ಬ್ರಹ್ಮಬೈದರ್ಕಳ ಗರಡಿ
* ಶ್ರೀ ರಾಮ ಭಜನಾ ಮಂದಿರ ಕುಂಬ್ರ
* ಶ್ರೀ ಸದಾಶಿವ ಭಜನಾ ಮಂದಿರ ಸದಾಶಿವನಗರ
* ಶ್ರೀ ಅಯ್ಯಪ್ಪ ಭಜನಾ ಮಂದಿರ ದರ್ಬೆತ್ತಡ್ಕ
* ಶ್ರೀ ದೇವಿ ಭಜನಾ ಮಂದಿರ ಮುಂಡೋವುಮೂಲೆ 9591376226 (ಗಣೇಶ ನಾಯ್ಕ)
* ಓಂ ಶಿವ ಭಜನಾ ಮಂದಿರ ಅಜ್ಜಿಕಲ್ಲು ಕೈಕಾರ 9880010146 (ರವೀಂದ್ರ).