ಕಡಬ ಗ್ರಾಮ

ಶ್ರೀ ದುರ್ಗಾಂಬಿಕಾ ದೇವಸ್ಥಾನ ಕಡಬ, ಮೊ: 9448624749


ಪುತ್ತೂರಿನಿಂದ ಉಪ್ಪಿನಂಗಡಿ ಸುಬ್ರಹ್ಮಣ್ಯ ಮಾರ್ಗ ದಲ್ಲಿ ಪುತ್ತೂರಿನಿಂದ ೨೮ ಮೈಲು ದೂರದ ಕಡಬ ಪೇಟೆಯಲ್ಲಿ ಈ ದೇವಸ್ಥಾನವಿದೆ.
ಬನವಾಸಿ ಯಲ್ಲಿದ್ದ ಕದಂಬರ ಪತನ ವಾದ ಬಳಿಕ ಅವರ ವಂಶಸ್ಥರು ಬಂದು ಆಡಳಿತ ಮಾಡಿದುದರಿಂದ ಕದಂಬರು ತಂದು ಪೂಜಿಸುತ್ತಿದ್ದ ಮೂರ್ತಿಯೇ ಶ್ರೀ ದುರ್ಗಾಂಬಿಕಾ ಅಮ್ಮನವರು ಎಂದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ. ಏಕಾಹ ಭಜನೋತ್ಸವ, ಸಾರ್ವಜನಿಕ ಗಣೇಶೋತ್ಸವ ಸೇರಿದಂತೆ ಪ್ರತೀ ಶುಕ್ರವಾರ ಮತ್ತು ವಿಶೇಷ ದಿನಗಳಂದು ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ವತಿಯಿಂದ ಭಜನಾ ಸೇವೆ ನಡೆಯುತ್ತದೆ.
ಅಧ್ಯಕ್ಷರು – ಸೀತಾರಾಮ ಗೌಡ ಪೊಸವಳಿಕೆ, ಸದಸ್ಯರುಗಳು: ಗೋಪಾಲಕೃಷ್ಣ ಕೆದಿಲಾಯ, ಹುಕ್ರ ಮುಗೇರ ಪಳ್ಳತ್ತಾರು,ವೀಣಾ ಯೋಗೀಂದ್ರ ಕಡಬ, ಎಸ್. ಗೀತಾ ನಾಯಕ್ ಶಾರದಾ ಸದನ ಕಡಬ, ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಅಧ್ಯಕ್ಷ ಸೋಮಪ್ಪ ನೈಕ್, ಗಿರೀಶ್ ಎ.ಪಿ. ಆರಿಗ ಮನೆ, ಸಂತೋಷ್ ಸುವರ್ಣ ಕೋಡಿಬೈಲು, ರಾಧಾಕೃಷ್ಣ ಕೋಲ್ಪೆ ವಿದ್ಯಾನಗರ ಕೋಡಿಂಬಾಳ.

ಶ್ರೀ ಶ್ರೀಕಂಠಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನ ಕಡಬ, ಮೊ: 9740259698


ಶ್ರೀ ಶ್ರೀಕಂಠಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಾಸ್ಥಾನಗಳು ಕಡಬದ (ಹಿಂದಿನ ಕದಂಬಪುರ) ನಿಸರ್ಗ ಚೆಲುವಿನ ಮಧ್ಯೆ ಇರುವ ಪ್ರಶಾಂತವಾದ ಪಾವನ ಸ್ಥಳದಲ್ಲಿದೆ. ಶ್ರೀಕಂಠ ದೇವಾಲಯದ ಪಕ್ಕದಲ್ಲೇ ಮಹಾಗಣಪತಿ ದೇವಾಲಯವೂ ಇರು ವುದು ಇಲ್ಲಿಯ ಮುಖ್ಯ ವೈಶಿಷ್ಟ್ಯ. ಮಾತ್ರವಲ್ಲದೆ ಇಲ್ಲಿ ಮಹಾಗಣಪತಿ ದೇವರ ಕಾರಣಿಕವು ವಿಶೇಷವಾಗಿರುವುದರಿಂದ ಗಣಪತಿ ದೇವಾಲಯವೆಂದೇ ಹೆಸರುವಾಸಿ ಯಾಗಿದೆ.
ಶ್ರೀಕಂಠ ಸ್ವಾಮಿ ಈ ಊರಿನ ಆದಿಯ ದೇವಸ್ಥಾನ. ಸುಮಾರು ೮-೯ನೇ ಶತಮಾನದ ಕಾಲದ್ದೆಂದು ಅಭಿಪ್ರಾಯ ಪಡಲಾಗಿದೆ. ಶ್ರೀಕಂಠದೇವರನ್ನು ‘ಸಿರಿಕಂಠ’ ನೆಂದೂ ಕರೆಯು ತ್ತಾರೆ. ಶ್ರೀಕಂಠ ದೇವರ ಲಿಂಗದ ತಲೆ ಭಾಗವು ಚಪ್ಪಟೆಯಾಗಿದ್ದು ಲಿಂಗದ ಮಧ್ಯೆ ಎದುರುಗಡೆ ಒಂದು ನೀಳವಾದ ಸುಂದರ ರೇಖೆ ಇದೆ. ಇದೀಗ ದೇವಾಲಯ ಜೀರ್ಣೋದ್ಧಾರ
ಗೊಂಡಿದ್ದು, ಗೋಪಾಲ ರಾವ್ ಕಡಬ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದಾರೆ.
ಅರ್ಚಕ – ಕೇಶವ ಬೈಪಾಡಿತ್ತಾಯ, ಸದಸ್ಯರುಗಳು: ಗೋಪಾಲ ರಾವ್ ಕಡಬ, ಎಸ್. ಜಿನ್ನಪ್ಪ ಸಾಲಿಯಾನ್ ಕಡಬ, ಮೋನಪ್ಪ ಗೌಡ ನಾಡೋಳಿ, ಗೋಪಾಲ್ ನಾಕ್ ಮೇಲಿನ ಮನೆ ಕಡಬ, ಪ್ರಕಾಶ್ ಎನ್.ಕೆ ವಿದ್ಯಾನಗರ ಕಡಬ, ಶ್ರೀಮತಿ ಕುಸುಮಾ ಕೊರತ್ತಿಗುರಿ ಕೋಡಿಂಬಾಳ, ಶ್ರೀಮತಿ ಗಾಯತ್ರಿ ಯಸ್.ಆರ್, ಬಾಜಿನಾಡಿ, ಶ್ರೀಮತಿ ವಾರಿಜಾಕ್ಷಿ ಅಡಿಲ್ ಮನೆ ಮೂರಾಜೆ

ಕಡಬ ಪಣೆಮಜಲು ಶ್ರೀ ಸಬ್ಬಮ್ಮ ದೇವಿ ಸನ್ನಿಧಿ

“ಪಣೆಮಜಲು” ಕಡಬ ಪೇಟೆಯಿಂದ ಪಶ್ಚಿಮ ದಿಕ್ಕಿಗೆ ಸುಮಾರು ಒಂದೂವರೆ ಕಿ.ಮೀ. ಸಾಗಿದಾಗ ಕಾಣಸಿಗುವ ಪುಟ್ಟ ಬೈಲು ಇದು. ಈ ಬೈಲಿನ ಮಧ್ಯ ಭಾಗದಲ್ಲಿ ನೆಲೆ ನಿಂತಿರುವ ಶ್ರೀ ನಾಗದೇವರ ಸನ್ನಿಧಿ, ಉತ್ತರ ದಿಕ್ಕಿಗೆ ಮಲೆ ಉಳ್ಳಾಕ್ಲು ಭಂಡಾರ ಚಾವಡಿ, ಪಶ್ಚಿಮಕ್ಕೆ ಇಷ್ಟದೇವತೆ ಮಹಿಷಂದಾಯ, ಪಿಲಿ ಚಾಮುಂಡಿಗಳ ಗುಡಿ ಹಾಗೂ ಪೂಕರೆಗದ್ದೆ(ಬಾರೆಕಳಗದ್ದೆ), ಪೂರ್ವದಲ್ಲಿ ಶ್ರೀ ರುದ್ರಾಂಡಿ, ಶಿರಾಡಿ, ಪಂಜುರ್ಲಿ ದೈವಗಳ ಸ್ಥಾನ, ದಕ್ಷಿಣಕ್ಕೆ ಮಾಲೈ ಚಾವಡಿ ಹಾಗೂ ಅರ್ಧ ಕಿ.ಮೀ ದೂರದಲ್ಲಿ ಕಲ್ಲೊಡೆದು ಉದ್ಬವವಾಗಿರುವ ಶ್ರೀ ಉಳ್ಳಾಕ್ಲು ಮೂಲಸ್ಥಾನ ಕಲ್ಮಲ ಗುಡ್ಡೆ(ಕಲ್ಲಮಲೆ) ಮತ್ತು ಇತರ ಸ್ಥಾನಗಳು, ಈಶಾನ್ಯ ಭಾಗದಲ್ಲಿ ನೆಲೆನಿಂತು ಸದಾ ಕುಟುಂಬಸ್ಥರನ್ನು ರಕ್ಷಿಸುತ್ತಿರುವ ಕುಲದೇವತೆ ಶ್ರೀ ಸಬ್ಬಮ್ಮ(ಮಹಾಲಕ್ಷ್ಮಿ) ಗುಡಿ ಹಾಗೂ ಪಣೆಮಜಲು ಎಂದೇ ಕರೆಯಲ್ಪಡುವ ತರವಾಡು ಕುಟುಂಬದ ಕವಲು ಕುಟುಂಬಗಳಾದ ಅಂಙಣ, ಕೆರೆಮುದೆಲು ಕುಟುಂಬದ ಮನೆಯ ಭಂಡಾರ ಚಾವಡಿಯಲ್ಲಿ ನೆಲೆನಿಂತಿರುವ ಶ್ರೀ ಸತ್ಯದೇವತೆ, ವರ್ಣಾರ ಪಂಜುರ್ಲಿ, ಕಲ್ಲುರ್ಟಿ ಸ್ಥಾನಗಳು, ದೈವ ದೇವರ ವಿನಿಯೋಗಕ್ಕೆ ಹಿರಿಯರು ನಿಗದಿಪಡಿಸಿದ ಕಲ್ಲಗದ್ದೆ ಇದೆ. ಈ ತರವಾಡು ಮನೆಯಲ್ಲಿ ದಿವಂಗತರಾದ ಎಲ್ಯಣ್ಣ ಗೌಡ, ಸೋಮಪ್ಪ ಗೌಡ, ಬಾಲಣ್ಣ ಗೌಡ ಇವರುಗಳು ದೈವ ದೇವರುಗಳ ಕಾಲಾದಿ ಪರ್ವಗಳನ್ನು ಕಾಲ ಕಾಲಕ್ಕೆ ಸರಿಯಾಗಿ ಕುಟುಂಬಸ್ಥರ ಸಹಕಾರದಿಂದ ನೆರವೇರಿಸುತ್ತಿದ್ದು, ಕುಟುಂಬದ ಧಾರ್ಮಿಕ ನೆಲೆಗೆ ಒತ್ತುಕೊಟ್ಟಿದ್ದರು. ಸದ್ರಿ ಪಣೆಮಜಲು ಕುಟುಂಬವು ಈಗ ಕವಲೊಡೆದು ಕಡಬ ಮಾತ್ರವಲ್ಲದೆ, ಬಲ್ಯ, ನೆಲ್ಯಾಡಿ, ನೂಜಿಬಾಳ್ತಿಲ, ರೆಂಜಿಲಾಡಿ, ಐತ್ತೂರು, ಕೊಂಬಾರು, ಬಿಳಿನೆಲೆ, ಕುಂತೂರು, ಬೆಳ್ತಂಗಡಿ ತಾಲೂಕಿನ ರೆಖ್ಯ ಹಾಗೂ ಸುಳ್ಯ ತಾಲೂಕಿನ ಐನೆಕಿದು ಗ್ರಾಮದ ಅಂಙಣ ಹಾಗೂ ಕುಜುಂಬಾರು ಮತ್ತು ಹರಿಹರದಲ್ಲಿ ವಾಸವಿದ್ದು, ಸುಮಾರು ೩೦೦ಕ್ಕೂ ಹೆಚ್ಚು ಕುಟುಂಬಗಳು ಸುತ್ತಮುತ್ತ ಹರಡಿಕೊಂಡಿದೆ. ಪಕ್ಕದ ಐಗೂರು(ಮೂಡಲ ಸೀಮೆ) ಸೀಮೆಯಿಂದ ಸುಮಾರು ೩೫೦ರಿಂದ ೪೦೦ ವರ್ಷಗಳ ಹಿಂದೆ ವಲಸೆ ಬಂದ ಈ ಕುಟುಂಬವು ಕುಲದೇವತೆ ಶ್ರೀ ಸಬ್ಬಮ್ಮ ದೇವಿಯನ್ನು ಇಲ್ಲಿ ಪ್ರತಿಷ್ಠಾಪನೆಗೊಳಿಸಿ ಆರಾಧಿಸಿಕೊಂಡು ಬರುತ್ತಿದೆ. ತರವಾಡು ಮನೆಯಲ್ಲಿರುವ ಶ್ರೀ ಸಬ್ಬಮ್ಮ ದೇವಿಯ ಪುನರ್ ಪ್ರತಿಷ್ಠಾ ಕಲಾಶಾಭಿಷೇಕವು ೨೦೧೧ರ ಫೆ.೧೬ರಿಂದ ೧೮ರ ತನಕ ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮಿಗಳ ಆಶೀರ್ವಚನಗಳೊಂದಿಗೆ ಜರಗಿದೆ. ಸನ್ನಿಧಿಯಲ್ಲಿ ವರ್ಷಂಪ್ರತಿ ನವರಾತ್ರಿ ಉತ್ಸವ, ದೀಪಾವಳಿ, ಆಯುಧಪೂಜೆ, ವಾಹನಪೂಜೆ, ಪತ್ತನಾಜೆ ಹಾಗೂ ಪ್ರತಿಷ್ಠಾ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ನಿವೃತ್ತ ಮುಖ್ಯ ಶಿಕ್ಷಕ ಜನಾರ್ದನ ಗೌಡ ಪಣೆಮಜಲುರವರ ಮನೆಯಂಗಳದಲ್ಲಿದೆ ಈ ಕ್ಷೇತ್ರ.

ಶ್ರೀ ಮಹಾವಿಷ್ಣು ದೇವಸ್ಥಾನ ಪಿಜಕಳ, ಅಂಚೆ: ಕಡಬ, ಪುತ್ತೂರು ತಾಲೂಕು, ದ.ಕ. ಫೋನ್: 260369

ಕಡಬದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಪಿಜಕಳ ಶ್ರೀ ಮಹಾವಿಷ್ಣು ಕ್ಷೇತ್ರ ಇದೆ. ಈ ದೇವಸ್ಥಾನವು ಸುಮಾರು ೮೦೦ ವರ್ಷಗಳ ಇತಿಹಾಸವುಳ್ಳದ್ದಾಗಿದೆ ಎಂದು ಊಹಿಸಲಾಗಿದೆ. ಇಲ್ಲಿಯ ಶ್ರೀ ಮಹಾವಿಷ್ಣು ದೇವರಿಗೆ ಹಾಲು, ಪಾಯಸ, ಅಲಂಕಾರ ಪೂಜೆ ವಿಶೇಷ ಸೇವೆಗಳಾಗಿವೆ. ಗಣಪತಿ, ಶಾಸ್ತಾವು ಮತ್ತು ದೇವಿಯ ಸಾನಿಧ್ಯ ಕೂಡಾ ಇಲ್ಲಿ ಇದೆ.
ಸನ್ಯಾಸಿಯಿಂದ ಸ್ಥಾಪಿಸಲ್ಪಟ್ಟ ಈ ದೇವಾಲಯವು ಬ್ರಾಹ್ಮಣರಿಂದಲೇ ನಡೆಸಲ್ಪಡುತ್ತಾ ಬಂದು ಕ್ರಮೇಣ ಅವರ ಸಂತತಿಯು ಕ್ಷೀಣಿಸುತ್ತಾ ಬಂದಾಗ ಮುಂದಿನ ವ್ಯವಸ್ಥೆಗಾಗಿ ಈ ಭಾಗದಲ್ಲಿ ವಾಸ್ತವ್ಯ ಮಾಡಿಕೊಂಡಿದ್ದ ಗೌಡ ಸಮಾಜದವರಿಗೆ ಭೂಮಿ ಸಮೇತವಾಗಿ ದೇವಸ್ಥಾನದ ಅಧಿಕಾರವನ್ನು ಒಪ್ಪಿಸಿದರೆಂದು ದೇವಸ್ಥಾನದ ಬಗ್ಗೆ ಚಿಂತಿಸಿದಾಗ ದೈವಜ್ಞರಿಂದ ತಿಳಿದುಬಂದಿರುತ್ತದೆ. ಆದರೆ ಅಧಿಕೃತವಾದ ಯಾವುದೇ ದಾಖಲೆಗಳಿಲ್ಲ. ಹೀಗಿರುವಾಗ ಇಲ್ಲಿಯವರ ಬಡತನದಿಂದಾಗಿ ವಿಶೇಷ ಅಭಿವೃದ್ಧಿ ಹೊಂದದೆ ಒಂದೇ ಹೊತ್ತಿನ ಪೂಜೆ ಮಾತ್ರ ನಡೆಯುತ್ತಿತ್ತು. ಮುಂದೆ ೧೯೮೭ರಿಂದ ಈ ದೇವಾಲಯದ ಅಭಿವೃದ್ಧಿ ದೃಷ್ಟಿಯಿಂದ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ವಹಿಸಿಕೊಡಲಾಯಿತು. ಇಲ್ಲಿ ವೈವಾಹಿಕ ಸಂಬಂಧ ಹಾಗೂ ಇನ್ನಿತರ ಕಷ್ಟಕಾರ್ಪಣ್ಯಗಳಿಗೆ ದೇವರಲ್ಲಿ ಪ್ರಾರ್ಥಿಸಿದಾಗ ಪರಿಹಾರ ಸಿಗುವುದು.
ವ್ಯವಸ್ಥಾಪನಾ ಸಮಿತಿ : ಪಿ. ಸಾಂತಪ್ಪ ಗೌಡ, ನಿವೃತ್ತ ಶಿಕ್ಷಕರು – ಅಧ್ಯಕ್ಷರು, ಡಾ| ಎಚ್. ಮೋಹನ ರಾವ್ ಹಳ್ಳಂಗೇರಿ – ಅರ್ಚಕರು, ಪಿ. ಗಿರಿಧರ ರೈ ಪಿಜಕಳ – ಸದಸ್ಯರು, ಎ. ಅಣ್ಣು ನಾಯ್ಕ ಪರವು – ಸದಸ್ಯರು, ಪಿ. ಕೃಷ್ಣಪ್ಪ ಗೌಡ ಪಿಜಕಳ – ಸದಸ್ಯರು, ಎ. ಬಾಲಕೃಷ್ಣ ರೈ ಆರ್ತಿಲ – ಸದಸ್ಯರು, ಎ.ಕೆ. ದಯಾನಂದ ಗೌಡ ಆರಿಗ – ಸದಸ್ಯರು, ಶ್ರೀಮತಿ ಹೇಮಾವತಿ ಕೊರಗಪ್ಪ ಗೌಡ ಕಲ್ಲರ್ಪೆ, ಪಿಜಕಳ – ಸದಸ್ಯರು, ಶ್ರೀಮತಿ ವಿಜಯ ಸೀತಾರಾಮ ಗೌಡ ಕಳಾರ ಕಡಬ – ಸದಸ್ಯರು

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಕಡಂಬಳಿತ್ತಾಯ ದೈವಸ್ಥಾನ ಕಡಬ