ಕಾಯಿಮಣ ಗ್ರಾಮ

ಅಗಳಿ ಶ್ರೀ ಸದಾಶಿವ ದೇವಸ್ಥಾನ, ಕಾಯಿಮಣ ಅಂಚೆ, ಪುತ್ತೂರು ದ.ಕ – 574 202, 08251-284213

ಪುತ್ತೂರು-ದರ್ಬೆ-ಸುಬ್ರಹ್ಮಣ್ಯ ಮಾರ್ಗದಲ್ಲಿ ದರ್ಬೆ ಯಿಂದ ೨೦ ಕಿ.ಮೀ. ದೂರದ ಬೆಳಂದೂರು ಎಂಬಲ್ಲಿಂದ ಬಲಕ್ಕೆ ರೈಲ್ವೇ ಮಾರ್ಗ ದಾಟಿ ೧ ಕಿ.ಮೀ. ದೂರದಲ್ಲಿ ೮೦೦ ವರ್ಷಗಳಷ್ಟು ಪುರಾತನವಾದ ಈ ದೇವಾಲಯವಿದೆ. ಸದಾಶಿವ ದೇವರು, ಗಣಪತಿ, ಶಾಸ್ತಾವು, ಸುಬ್ರಹ್ಮಣ್ಯ, ಉಳ್ಳಾಕುಲು, ಪಂಜುರ್ಲಿ, ರಕ್ತೇಶ್ವರಿ, ಗುಳಿಗ ಇಲ್ಲಿಯ ಆರಾಧ್ಯ ದೇವರುಗಳು. ಮಂಗಳಾರತಿ, ಪಂಚಕಜ್ಜಾಯ, ರುದ್ರಾಭಿಷೇಕ, ಬಲಿವಾಡು, ರಂಗಪೂಜೆ, ಶಿವರಾತ್ರಿ ಉತ್ಸವ, ಧನುಪೂಜೆಗಳೂ ಇಲ್ಲಿ ನಡೆಯುತ್ತವೆ.
ಆದಿದ್ರಾವಿಡ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬರಿಗೆ ಹೆಬ್ಬಲಸಿನ ಮರದ ಬುಡದಲ್ಲಿ ದೊರೆತ ಶಿವಲಿಂಗವನ್ನು ಬಲ್ಲಾಳ ಅರಸರು ಪ್ರತಿಷ್ಠಾಪಿಸಿ ಆರಾಧಿಸಿದರಂತೆ ಸುಮಾರು ೧೨ನೇ ಶಮಾನದಲ್ಲಿ ಪ್ರವರ್ಧಮಾನವಾಗಿದ್ದ ಈ ಮಂದಿರವು ಬಲ್ಲಾಳರ ಆಳ್ವಿಕೆಯ ನಂತರ ಬ್ರಾಹ್ಮಣರ ಆಡಳಿತಕ್ಕೊಳಪಟ್ಟು, ಅನೇಕ ವರ್ಷ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಾನಮಾನಗಳಲ್ಲಿ ಬಲಿಷ್ಠರಾದ ಬಲ್ಲಾಳ ಅರಸರ ಕೈ ಕೆಳಗೆ ಒಕ್ಕಲು ವೃತ್ತಿ ಮಾಡಿದ ಪೂರ್ಣ ಶಿವಾರಾಧಕರಾದ ಒಕ್ಕಲಿಗ ಗೌಡರು ಸ್ವತಃ ಮೊಕ್ತೇಸರರಾಗಿ ಕಾರ್ಯನಿರ್ವಹಿಸಿದ್ದರು. ಹಿಂದೆ ಒಂದೇ ಮನೆತನವಿದ್ದು, ನಂತರ ಅಗಳಿ ಮೇಲಿನ ಮನೆ, ಕೆಳಗಿನ ಮನೆ ಎಂಬ ಎರಡು ಪಂಗಡಗಳಾಗಿ ವರ್ಷಕ್ಕೊಬ್ಬರಂತೆ ಮೊಕ್ತೇಸರರಾಗಿ ಆಡಳಿತ ನಡೆಸಿಕೊಂಡು ಬಂದರು. ಗರ್ಭಗೃಹವು ಪೂರ್ತಿ ಶಿಲಾಮಯವಾಗಿದ್ದು, ಪಶ್ಚಿಮಾಭಿಮುಖವಾಗಿದ್ದು, ಎಡೆನಾಳ ಇದೆ. ಶಿವಗಣ ಪರಿವಾರ ದೇವರುಗಳಾದ ಗಣಪತಿ, ಶಾಸ್ತಾವು ಮತ್ತು ಸುಬ್ರಹ್ಮಣ್ಯ ದೇವರನ್ನು ಸುತ್ತು ಗೋಪುರದ ಒಳಗೆ ನೈಋತ್ಯ ದಿಕ್ಕಿನಲ್ಲಿ ಪ್ರತಿಷ್ಠೆ ಮಾಡಲಾಗಿದೆ. ಅಗಳಿ ಶ್ರೀ ಸದಾಶಿವ ಯುವಕ ಮಂಡಲದ ಸಹಕಾರದೊಂದಿಗೆ ವರ್ಷಂಪ್ರತಿ ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ರಂಗಪೂಜೆ, ಮೊಸರು ಕುಡಿಕೆ ನಡೆಯುತ್ತಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು – ಜಗನ್ನಾಥ ರೈ ಮಾದೋಡಿ, ೯೪೪೮೨೪೯೪೨೮, ಅನುವಂಶೀಯ ಮೊಕ್ತೇಸರರು – ಶಿವರಾಮ ಗೌಡ ಅಗಳಿ, ಉದಯಕುಮಾರ್ ಅಗಳಿ, ಸದಸ್ಯರು: ಉದಯ ರೈ ಮಾದೋಡಿ, ಗೋಪಾಲಕೃಷ್ಣ ಭಟ್ ಮುಂಡಾಳ, ವಸಂತ ರೈ ಕಾರ್ಕಳ, ಮುದರ, ಪಾರ್ವತಿ ಕೃಷ್ಣಪ್ಪ, ಹರಿಣಾಕ್ಷಿ ಶ್ರೀಧರ್, ಲಿಂಗಪ್ಪ ಗೌಡ ಅಗಳಿ, ಎನ್. ಪ್ರಸಾದ್ ಪಾಂಗಣ್ಣಾಯ (ಅರ್ಚಕರು)

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
*ಶ್ರೀ ಉಳ್ಳಾಕ್ಲು ದೈವಸ್ಥಾನ ಮರಕಡ ಕಾಮಣ, ಪುತ್ತೂರು
* ಶ್ರೀ ರುದ್ರಚಾಮುಂಡಿ, ಹುಲಿಭೂತ ದೈವಸ್ಥಾನ ಮರಕಡ (ಚಂದ್ರಶೇಖರ ಬೈತ್ತಡ್ಕ)