ಚಿಕ್ಕಮುಡ್ನೂರು ಗ್ರಾಮ

ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಕೆಮ್ಮಾಯಿ
ಚಿಕ್ಕಮುಡ್ನೂರು ಅಂಚೆ, ಪುತ್ತೂರು, ದ.ಕ.-574 203.  ಮೊ: 9480157843, 9449332518

ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸುಮಾರು ೬೦೦ ವರ್ಷಗಳ ಇತಿಹಾಸವನ್ನು ಹೊಂದಿದೆ. ಶಂಖ, ಚಕ್ರ, ಗಧಾ, ಪದ್ಮಧಾರಿಯಾದ ಈ ಶ್ರೀ ವಿಷ್ಣು ದೇವಾಲಯ ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಪುತ್ತೂರಿನಿಂದ ೫ ಕಿ.ಮೀ. ಪ್ರಯಾಣಿಸಿದಾಗ ಕಾಣಸಿಗುವುದು. ಊರಿನ ಪ್ರಧಾನ ವಿಷ್ಣು ದೇವಾಲಯವೆಂದು ಪ್ರಸಿದ್ಧಿ ಪಡೆದಿದೆ. ಪೆರ್ಮುಂಡ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಆರಿಗೋ ನೇಮೋತ್ಸವದ ಮೊದಲನೆಯ ದಿನ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆಯನ್ನು ನೆರವೇರಿಸಿ ಬಳಿಕ ಉಳಿದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವುದು ಇಲ್ಲಿಯ ಪೂರ್ವ ಸಂಪ್ರದಾಯ.

ಈ ಕ್ಷೇತ್ರದಲ್ಲಿ ಹಿಂದೆ ಕ್ರಿ.ಶ.೧೯೬೩ರಲ್ಲಿ ಬ್ರಹ್ಮ ಕಲಶಾಭಿಷೇಕವು ನಡೆದಿದ್ದು ಆ ಬಳಿಕ ದೇವಾಲಯವು ಪ್ರಗತಿಯನ್ನು ಪಡೆದು ಭಕ್ತಾದಿಗಳ ಸಹಾಯದಿಂದ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಸ್ಥಾಪನೆಗೊಂಡಿತು. ಇದರ ಮುಖಾಂತರ ಶ್ರೀ ದೇವರಿಗೆ ವರ್ಷಂಪ್ರತಿ ಮಾರ್ಚ್ ತಿಂಗಳಲ್ಲಿ ಪೂಜೆ, ಮಧ್ಯಾಹ್ನ ಸೀಯಾಳಾಭಿಷೇಕ, ಮಹಾಮಂಗಳಾರತಿ, ರಾತ್ರಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಅಂತೆಯೇ ದೇವಳದ ಅಂಗಣದಲ್ಲಿ ಶ್ರೀ ಪಿಲಿ ಭೂತ ದೈವದ ನೇಮ ಜರಗುತ್ತಿದೆ.
ದೇವಾಲಯದ ಎಡಭಾಗದಲ್ಲಿ ಪ್ರತಿ ನಾಗರಪಂಚಮಿಯಂದು ನಾಗದೇವನಿಗೆ ವಿಶೇಷ ಪೂಜೆ, ಹಾಲಭಿಷೇಕವನ್ನು ನೆರವೇರಿಸಲಾಗುವುದು. ಹಂತಹಂತವಾಗಿ ಅಭಿವೃದ್ಧಿ ಹೊಂದಿದ ಈ ದೇವಸ್ಥಾನಕ್ಕೆ ನಮಸ್ಕಾರ ಮಂಟಪದಲ್ಲಿ ಶಾಸ್ತಾರ, ಮಹಾಗಣಪತಿಯ ಗುಡಿ, ಪಿಲಿಭೂತ ದೈವದ ಗುಡಿ, ದೇವಾಲಯದ ಒಳಾಂಗಣಕ್ಕೆ ಶಿಲೆಕಲ್ಲು ಹಾಸುವುದು, ಬಾವಿ, ತುಳಸಿಕಟ್ಟೆ, ವಸಂತಕಟ್ಟೆ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ನಡೆದು ೨೦೦೪ ಜನವರಿಯಲ್ಲಿ ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ ಮಹೋತ್ಸವವು ಜರಗಿತು. ದೇವಳದಲ್ಲಿ ಪ್ರತಿ ವರ್ಷವೂ ಫೆಬ್ರವರಿ ಮಕರ ಮಾಸದಂದು ಜಾತ್ರೋತ್ಸವ ನಡೆಯುತ್ತದೆ. ದೇವಾಲಯದ ಎಲ್ಲಾ ಕಾರ್ಯಕ್ರಮಗಳ ನಿರ್ವಹಣೆಗಾಗಿ ಶ್ರೀ ಮಹಾವಿಷ್ಣು ಸೇವಾಸಮಿತಿಯನ್ನು ರಚಿಸಲಾಗಿದೆ.
ಸೇವೆಗಳು: ಶಾಶ್ವತ ಪೂಜೆ, ರಂಗ ಪೂಜೆ, ಮಹಾಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಗಣಹೋಮ, ನಾಗರಪಂಚಮಿಯಂದು ನಾಗನಿಗೆ ಹಾಲಾಭಿಷೇಕ, ಸಂಕಷ್ಟ ಚತುರ್ಥಿಯಂದು ಮಹಾಗಣಪತಿಗೆ ಅಪ್ಪಕಜ್ಜಾಯ ಸೇವೆ, ಗಣಹೋಮ, ಪಂಚಕಜ್ಜಾಯ, ಪ್ರತಿ ಶುಕ್ರವಾರ ರಾತ್ರಿ ಭಜನಾ ಕಾರ್ಯಕ್ರಮ, ನಿತ್ಯಪೂಜೆ ದೇವಳದಲ್ಲಿ ನಡೆಯುತ್ತದೆ.
ಆಡಳಿತ ಮೊಕ್ತೇಸರರು – ಕೆ. ಸುಬ್ರಾಯ ಬೈಪಾಡಿತ್ತಾಯ, ಗೌರವಾಧ್ಯಕ್ಷರು – ಅಶೋಕ ಪಡಿವಾಳ್, ಆಡಳಿತ ಸಮಿತಿ ಸದಸ್ಯರು – ಸೋಮಪ್ಪ ಗೌಡ ಬಡಾವು, ರಾಮಣ್ಣ ಗೌಡ ಬಡಾವು, ಚಂದ್ರಶೇಖರ್ ಎಸ್. ಮೂಡಾಯೂರು, ಹೇಮಚಂದ್ರ ಗೌಡ ಕೆಮ್ಮಾಯಿ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಆರಿಗ ಬ್ರಹ್ಮ ಬೈದರ್ಕಳ ಗರಡಿ ಮೂಡಾಯೂರು
*ಶ್ರೀ ನಂದಿಕೇಶ್ವರ ಭಜನಾ ಮಂದಿರ ಬೆದ್ರಾಳ
* ಶ್ರೀ ಪುಳುವಾರು ಗ್ರಾಮ ದೈವಸ್ಥಾನ ಊರಮಾಲ್
* ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಊರಮಾಲ್
* ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಕೇಪುಳು
* ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿ, ಚಿಕ್ಕಮುಡ್ನೂರು ಗ್ರಾಮ, ಪುತ್ತೂರು ದ.ಕ. ೫೭೪೨೦೩
* ಗ್ರಾಮದೈವ ಮತ್ತು ಪರಿವಾರ ದೈವಗಳ ದೇವಸ್ಥಾನ ಪುಳುವಾರು, ಚಿಕ್ಕಮುಡ್ನೂರು, ಪುತ್ತೂರು ದ.ಕ.