ಡಿ.17: ಕೇಪು ಶ್ರೀ ಉಳ್ಳಾಲ್ತಿ ಕಜಂಬು ಜಾತ್ರೆ

0

ವಿಟ್ಲ: ಕಾರಣಿಕ ಮಹಿಮರ ಸುದೀರ್ಘ ಚರಿತ್ರೆ ಹೊಂದಿರುವ ತುಳುನಾಡುವಿನಲ್ಲಿ ದೈವಾರಾಧನೆ ಒಂದು ವಿಶಿಷ್ಟ ಮತ್ತು ವಿಶೇಷ ಭಕ್ತಿ ಭಾವದ ಸಂಪ್ರದಾಯವಾಗಿ ಅನಾದಿಕಾಲದಿಂದ ನಡೆಯುತ್ತಾ ಬಂದಿದೆ. ಇಲ್ಲಿನ ಜನಜೀವನ ವ್ಯವಸ್ಥೆಯು ದೈವ ದೇವರುಗಳ ಉಪಾಸನೆಯ ತಳಹದಿಯಲ್ಲಿ ನಿಂತಿದೆ ಎಂದರೆ ತಪ್ಪಾಗಲಾರದು.

ಕಾರಣಿಕ ಪುರುಷರಷ್ಟೇ ಕಾರಣಿಕ ದೇವಿಯರೂ ತುಳುನಾಡಿನಲ್ಲಿ ನೆಲೆಯೂರಿ ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಹಲವಾರು ದೈವೀ ಕ್ಷೇತ್ರಗಳಿವೆ. ಅವುಗಳಲ್ಲಿ ತುಳುನಾಡಿನ ಪಂಚ ಉಳ್ಳಾಲ್ತಿ ಕ್ಷೇತ್ರಗಳೂ ವಿಶೇಷ ಸಾನ್ನಿಧ್ಯ ಶಕ್ತಿ ಹೊಂದಿರುವ ಕ್ಷೇತ್ರಗಳಾಗಿವೆ. ಕೇಪು, ಬಲ್ನಾಡು, ಮಾಣಿ, ಅನಂತಾಡಿ ಮತ್ತು ಕೆಲಿಂಜ ಇವೇ ಪಂಚ ಉಳ್ಳಾಲ್ತಿ ಕ್ಷೇತ್ರಗಳು. ಈ ಕ್ಷೇತ್ರಗಳಲ್ಲಿ ಅನಾದಿ ಕಾಲದಿಂದ ನಡೆದು ಬಂದ ರೂಢಿ ಸಂಪ್ರದಾಯದ ಪ್ರಕಾರ ಉತ್ಸವ, ಜಾತ್ರೆಗಳು ನಡೆಯುತ್ತದೆ. ಕೇಪು `ಉಳ್ಳಾಲ್ತಿ ಅಪ್ಪೆ’ (ದುರ್ಗಾಪರಮೇಶ್ವರಿ ದೇವಿಯ ಅವತಾರ)ಯ ಕ್ಷೇತ್ರದಲ್ಲಿ ನಡೆಯುವ ಉತ್ಸವ `ಕಜಂಬು ಉತ್ಸವ’ ಎಂದೇ ಪ್ರಸಿದ್ಧಿಯಾಗಿದೆ. ವಿಟ್ಲ ಸೀಮೆಯ ಪ್ರಧಾನ ದೇವರಾದ ಪಂಚಲಿಂಗೇಶ್ವರ ದೇವರಿಗೂ ಈ ಉಳ್ಳಾಲ್ತಿ ಕ್ಷೇತ್ರಕ್ಕೂ ನಿಕಟ ಸಂಬಂಧವಿದೆ. ಉಳ್ಳಾಲ್ತಿ ಪಂಚಲಿಂಗೇಶ್ವರ ಎಂದೇ ಮೊದಲಿನಿಂದಲೂ ನುಡಿಯಿದೆ.

ಸುಮಾರು 800-900 ವರ್ಷಗಳ ಇತಿಹಾಸ ಹೊಂದಿರುವ ಕೇಪು ಉಳ್ಳಾಲ್ತಿ ಕ್ಷೇತ್ರ ವಿಟ್ಲ ಅರಸು ಮನೆತನದ ಡೊಂಬಯ್ಯ ಹೆಗ್ಗಡೆ ಅರಸರ ಆಳ್ವಿಕೆಗೆ ಒಳಪಟ್ಟು ನಿರ್ಮಾಣಗೊಂಡಿತ್ತು ಎನ್ನಲಾಗಿದೆ. ಈಗಲೂ ಈ ಕ್ಷೇತ್ರದ ಆಡಳಿತ ವಿಟ್ಲ ಅರಸರಲ್ಲಿದೆ. ಈ ಕ್ಷೇತ್ರದಲ್ಲಿ ನಡೆಯುವ `ದೇವಿಯ ನೆರಿ ಇಳಿಯುವುದು’ ಕಾರ್ಯಕ್ರಮವನ್ನು ಹಿಂದಿನ ಕಾಲದಿಂದಲೇ ಮಹಿಳೆಯರು ವೀಕ್ಷಿಸುವ ಹಾಗಿಲ್ಲ. ಈ ನಿರ್ಬಂಧವನ್ನು ಮೀರಿ ಈರ್ವರು ಅಕ್ಕ ತಂಗಿ ರಾಣಿಯರು ವೀಕ್ಷಿಸಿದ ಪರಿಣಾಮ ಇವರೀರ್ವರೂ ಕ್ಷೇತ್ರದಲ್ಲಿಯೇ ಕಲ್ಲಾಗಿ ಹೋದರು ಎಂಬ ಐತಿಹ್ಯ ಇದೆ. ಈ ಅಕ್ಕ ತಂಗಿಯರೇ ಮುಂದಕ್ಕೆ ಈ ಕ್ಷೇತ್ರದಲ್ಲಿ ಉಳ್ಳಾಲ್ತಿಯಾಗಿ ನೆಲೆಯೂರಿ ಕಾರಣಿಕತೆಯಿಂದ ಮೆರೆದರು ಎಂದು ಹೇಳಲಾಗಿದೆ. ಹಿಂದಿನ ಕಾಲದಲ್ಲಿ ಅರಸರು ಅಥವಾ ಯಜಮಾನರನ್ನು `ಉಳ್ಳಯ’ ಎಂದು ಕರೆಯುತ್ತಿದ್ದರು. ಹೀಗಾಗಿ ಸಹಜವಾಗಿ ಉಳ್ಳಯನ ಪತ್ನಿ `ಉಳ್ಳಾಲ್ತಿ’ ಎಂದು ಕರೆಯಲ್ಪಡುತ್ತಿದ್ದರು.

ಅಕ್ಕ ತಂಗಿಯರ ಬೆಳ್ಳಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆಯ ಮಕ್ಕಳನ್ನು ದೇವಿಯ ಪಾದಕ್ಕೆ ಸ್ಪರ್ಶಿಸುವುದೇ ಕಜಂಬು ಉತ್ಸವದ ವಿಶೇಷತೆಯಾಗಿದೆ. ಕ್ಷೇತ್ರದಲ್ಲಿ ಧ್ವಜಾರೋಹಣವಾದ ಬಳಿಕ ಒಟ್ಟು 5 ದಿನಗಳ ಉತ್ಸವ ನಡೆಯುತ್ತದೆ. ಧ್ವಜಾರೋಹಣದ ಬಳಿಕ ಬೆಳ್ಳಿಯ ಮೂರ್ತಿಗಳನ್ನು ವಿಟ್ಲ ಅರಮನೆಯಿಂದ ತಂದು ಉಳ್ಳಾಲ್ತಿ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಉಳಿದಂತೆ ಪ್ರತೀ ದಿನ ವಿಟ್ಲ ಅರಮನೆಯಲ್ಲಿ ಎರಡು ಹೊತ್ತು ಪೂಜೆ ನಡೆಯುತ್ತದೆ. ವಿಟ್ಲ ಅರಮನೆಯಿಂದ ಕೇಪು ಸುಬ್ರಾಯ ದೇವಸ್ಥಾನಕ್ಕೆ ಆಗಮಿಸುವ ವಿಟ್ಲ ಅರಸರನ್ನು ಎರಡೂರು ಗುರಿಕ್ಕಾರರು ಸೇರಿ ಉಳ್ಳಾಲ್ತಿ ಕ್ಷೇತ್ರಕ್ಕೆ ಕರೆತರುತ್ತಾರೆ. ಕ್ಷೇತ್ರದಲ್ಲಿ ಬೊಂಡ ಕಾಣಿಕೆ, ಪ್ರಾರ್ಥನೆ ಸಲ್ಲಿಕೆಯಾದ ಬಳಿಕ ದೇವಿಯ ಪಲ್ಲಕ್ಕಿ ಉತ್ಸವ 5 ಸುತ್ತು ನಡೆದು ನಂತರ ಕಜಂಬು ಉತ್ಸವ ನಡೆಯುತ್ತದೆ. ರಾತ್ರಿ ಸುಮಾರು ೧೧ ಗಂಟೆಗೆ ಉತ್ಸವ ಆರಂಭವಾಗಿ ರಾತ್ರಿ 2-3 ಗಂಟೆಯವರೆಗೆ ಮಕ್ಕಳನ್ನು ಹರಕೆ ಒಪ್ಪಿಸುವ ಕಾರ್ಯ ನಡೆಯುತ್ತದೆ. ಅದಾದ ಬಳಿಕ ಬೆಳಿಗ್ಗೆ ನೆರಿ ಇಳಿಯುವ ಕಾರ್ಯಕ್ರಮ ನಡೆಯುತ್ತದೆ.

5 ದಿನದ ಉತ್ಸವ:

ಕೇಪು ಕ್ಷೇತ್ರದಲ್ಲಿ ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಕಜಂಬು ಜಾತ್ರೆ ನಡೆಯುತ್ತದೆ. ಧ್ವಜಾರೋಹಣದ ಬಳಿಕ ಕ್ಷೇತ್ರದಲ್ಲಿ ಒಟ್ಟು 5 ದಿನಗಳ ಉತ್ಸವ ನಡೆಯುತ್ತದೆ. ಪ್ರಥಮ ದಿನ ಧ್ವಜಾರೋಹಣವಾಗಿ, ಎರಡನೇ ದಿನ ಕಜಂಬು ಉತ್ಸವ ಆಗಿ, ಬಳಿಕದ ಮೂರು ದಿನಗಳಲ್ಲಿ ತಂಬಿಲ ಸೇವೆ ನಡೆಯುತ್ತದೆ. 5 ನೇ ದಿನ ಧ್ವಜಾವರೋಹಣ ನಡೆಯುತ್ತದೆ. ಕೊಡಿ ಇಳಿಸಿ (ಧ್ವಜಾವರೋಹಣ)ದ ಮೇಲೆ ಕೋರಿಗುಂಟ ನಡೆಯುತ್ತದೆ. 3 ದಿನಗಳ ಕಾಲ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಹೊಂದಿರುವ `ಕೇಪು ಕೋಳಿ ಅಂಕ’ ನಡೆಯುತ್ತದೆ.

3 ದಿನಗಳ ಕೋಳಿ ಅಂಕದ ಬಳಿಕ ನಾಲ್ಕನೇ ದಿನ ಭಂಡಾರದ ಕೊಟ್ಯದಲ್ಲಿ ಮಲರಾಯಿ ಮತ್ತು ಪಿಲಿಚಾಮುಂಡಿ ನೇಮೋತ್ಸವ ನಡೆಯುತ್ತದೆ. ನಾಲ್ಕನೇ ದಿನ ಏಕಾದಶಿ ಅಥವಾ ಸೋಮವಾರ ಬಂದರೆ ಕೋಳಿ ಅಂಕ ನಾಲ್ಕು ದಿನ ನಡೆದು ಐದನೇ ದಿನ ನೇಮೋತ್ಸವ ನಡೆಯುತ್ತದೆ.

ನೆರಿ ಇಳಿಯುವುದನ್ನು ಮಹಿಳೆಯರು ನೋಡುವಂತಿಲ್ಲ: ಸಾಮಾನ್ಯವಾಗಿ ಯಾವುದೇ ಉಳ್ಳಾಲ್ತಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರವೇಶವಿರುವುದಿಲ್ಲ ಮತ್ತು ಉಳ್ಳಾಲ್ತಿ ನೇಮವನ್ನು ಮಹಿಳೆಯರು ನೋಡಬಾರದು. ಕೇಪು ಕ್ಷೇತ್ರದಲ್ಲಿ ವಿಟ್ಲ ಅರಸರ ಆಗಮನವಾದ ಬಳಿಕ ಮಹಿಳೆಯರು ಒಳಪ್ರವೇಶಿಸಬಹುದು. ಆದರೆ ಧ್ವಜಸ್ತಂಭದಿಂದ ಮುಂದುವರಿದು ಒಳಗೆ ಪ್ರವೇಶವಿಲ್ಲ. ಮುಂಜಾನೆ ನೆರಿ ಇಳಿಯುವ ಕಾರ್ಯಕ್ರಮವನ್ನು ಮಹಿಳೆಯರು ನೋಡಬಾರದು.

ಅನ್ನಸಂತರ್ಪಣೆ:

 ಹಿಂದಿನ ಕಾಲದಲ್ಲಿ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಗ್ರಾಮಸ್ಥರೇ ಸೇರಿ ಊಟ ಮಾಡಿ ಬಡಿಸುತ್ತಿದ್ದರು. ಈಗ ಕಜಂಬು ಹರಕೆಯವರು ಕಡ್ಡಾಯವಾಗಿ ಬಲಿವಾಡು ಮತ್ತು ಪುಂಡಿ ಪಣವು ಹಾಕಬೇಕಾಗುತ್ತದೆ. ಹೀಗಾಗಿ ಭಕ್ತರಿಗೆ ಮಧ್ಯಾಹ್ನ, ರಾತ್ರಿ ಅನ್ನಸಂತರ್ಪಣೆ ಜರಗುತ್ತದೆ.

ನಲ್ಪೊಲು:

ರಾಣಿಯರು ಕಲ್ಲಾಗಿ ಹೋಗುವಾಗ ಅವರ ಜೊತೆಗೆ ಬಂದಿದ್ದ ಸೈನಿಕರೂ ಮಾಯವಾಗಿದ್ದರು. ಹೀಗಾಗಿ ದೇವಳದ ನಾಲ್ಕು ಮೂಲೆಯಲ್ಲಿ ಈ ಸೈನಿಕರ ಪ್ರತಿನಿಧಿಗಳಾಗಿ `ನಲ್ಪೊಲು’ ಎಂದು ಕರೆಯಲ್ಪಡುವ ದೈವಮಾಣಿಗಳು ನೆಲೆಯಾಗಿದ್ದಾರೆ. ಈ ನಲ್ಪೊಲುಗಳು ಜಾತ್ರೆಗೆ ಮುನ್ನ ಅರಮನೆಯಲ್ಲಿ ಇಳಿದು ಬಂದು ಜಾತ್ರೋತ್ಸವ ಸುಸೂತ್ರವಾಗಿ ನೆರವೇರಲು ಅರಸರಿಂದ ಪಟ್ಟಿ ತೆಗೆದುಕೊಂಡು ಗ್ರಾಮದಲ್ಲಿ ಸಂಚರಿಸುತ್ತಾರೆ.

ಅಂಗಣ ಕೊಟ್ಟುಗೆ ಮುನ್ನ ಹಾರೆ ಹಾಕುವಂತಿಲ್ಲ:
ಗದ್ದೆಯ ಮಧ್ಯಭಾಗದಲ್ಲಿ ಇರುವ ಕ್ಷೇತ್ರದಲ್ಲಿ ಜಾತ್ರೆಗೆ ಮುನ್ನ ಹಾರೆ ಹಾಕುವಂತಿಲ್ಲ. ಅಂದರೆ ಅಂಗಣ ಕೊಟ್ಟು ನಡೆದ ಬಳಿಕವೇ ಹಾರೆ ಹಾಕಬೇಕು. ಇಲ್ಲಿಂದ ಜಾತ್ರೆಗೆ ಬೇಕಾದ ಕೆಲಸಗಳು ಆರಂಭಗೊಳ್ಳುತ್ತವೆ. ಜಾತ್ರೆ ಮುಗಿದ ಬಳಿಕವೂ ಮತ್ತೆ ಹಾರೆ ಹಾಕುವಂತಿಲ್ಲ.

ಜೂಜು ಇಲ್ಲದೆ ನಡೆಯುವ ಕೋಳಿ ಅಂಕ:
ಈ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ ಇಲ್ಲಿ ಯಾವುದೇ ಹಣದ ವ್ಯವಹಾರಗಳಿಗೆ ಅವಕಾಶವಿಲ್ಲ. ಸಂತೆ ವ್ಯಾಪಾರ ನಡೆಯುವುದಿಲ್ಲ. ಕೋಳಿ ಅಂಕವೂ ಯಾವುದೇಜೂಜು ಇಲ್ಲದೆ ನಡೆಯುತ್ತದೆ.

ಕಜಂಬು ಹರಕೆ:
ಸಂತಾನ ಪ್ರಾಪ್ತಿಯಾಗದವರು `ತೊಟ್ಟಿಲು ಕೊಂಬು ವಾದ್ಯದಲ್ಲಿ ಕಜಂಬು ಹಾಕುತ್ತೇವೆ’ ಎಂದು ಹರಕೆ ಹೇಳಿಕೊಂಡರೆ ಮಕ್ಕಳಾಗುತ್ತದೆ ಎಂಬುದಕ್ಕೆ ಈಗಲೂ ಅದಷ್ಟೋ ನಿದರ್ಶನಗಳಿವೆ. ದೇವಿಯ ವರಪ್ರಸಾದಿಂದ ಪ್ರಾಪ್ತವಾದ ಮಕ್ಕಳನ್ನು ದೇವಿಗೆ ಅರ್ಪಿಸಿ ಪಡೆಯುವುದು ಈ ಉತ್ಸವದ ವಾಡಿಕೆಯಾಗಿದೆ. ಹರಕೆಯ ಮಕ್ಕಳು ಜಾತ್ರೆಗೆ ಎರಡು ದಿನ ಮುಂಚಿತವಾಗಿ ವೃತಾಚರಣೆಯಿಂದಿರಬೇಕು. ಹಸುಳೆಯಾದರೆ ತಾಯಿ ವೃತಾಚರಣೆ ಪಾಲಿಸಬೇಕು. ಕಜಂಬು ಉತ್ಸವದ ದಿನ ಬೆಳಿಗ್ಗೆ ಫಲಾಹಾರ, ಮಧ್ಯಾಹ್ನ ನೈವೇದ್ಯ ಊಟ, ರಾತ್ರಿ ಉಪವಾಸದಿಂದ ಇರಬೇಕು. ಶುಚಿರ್ಭೂತರಾಗಿ ಕ್ಷೇತ್ರಕ್ಕೆ ಬರಬೇಕು. ದೇವಿಗೆ ನಮಸ್ಕರಿಸಿ, ನಲ್ಪೊಲುಗಳಿಗೆ ನಮಸ್ಕರಿಸಿ ನಿಲ್ಲಬೇಕು. ವಿಶೇಷ ಪೂಜೆಯ ಬಳಿಕ ಮಕ್ಕಳನ್ನು ಹರಕೆಯ ನುಡಿಯಂತೆ ಕೊಂಬು ವಾದ್ಯಗಳೊಂದಿಗೆ ಉಳ್ಳಾಲ್ತಿ ಗರ್ಭಗುಡಿಯ ಮೆಟ್ಟಿಲಿಗೆ ಸ್ಪರ್ಶಿಸಲಾಗುತ್ತದೆ. ಮಕ್ಕಳು ಚೀರಾಡಿದರೆ ದೇವಿಗೆ ಕೇಳಿಸುತ್ತದೆ ಎಂಬ ಪ್ರತೀತಿ ಇದೆ. ಈ ಸಂದರ್ಭದಲ್ಲಿ ಹರಕೆ ಸಲ್ಲಿಸುವವರು ಬಲಿವಾಡು ಮತ್ತು `ಪುಂಡಿ ಪಣವು’ ಹಾಕಿ ಉಳ್ಳಾಲ್ತಿಗೆ ಹರಕೆ ಸಂದಾಯ ಮಾಡಬೇಕು. ವರ್ಷಂಪ್ರತಿ ಸುಮಾರು ೩ ಸಾವಿರದಷ್ಟು ಬಲಿವಾಡು ಸಂಗ್ರಹವಾಗುತ್ತದೆ

LEAVE A REPLY

Please enter your comment!
Please enter your name here