ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಯೋಗ ದಿನಾಚರಣೆ

0

ನಿರಂತರ ಯೋಗಾಭ್ಯಾಸದಿಂದ ದೇಹ ನಿಯಂತ್ರಣ ಸಾಧ್ಯ – ಡಾ. ಚೇತನಾ
ಪುತ್ತೂರು: ಯೋಗ, ಪ್ರಾಣಾಯಾಮ ಹಾಗೂ ಮುದ್ರೆಗಳ ಅಭ್ಯಾಸದಿಂದ ಮನುಷ್ಯ ತನ್ನ ದೇಹವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯ. ಪ್ರತಿ ದಿನ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಂಡಾಗ ದೈಹಿಕ ಹಾಗೂ ಮಾನಸಿಕ ಆರೋಗ್ಯ ಅಭಿವೃದ್ಧಿ ಹೊಂದಿ ಸದೃಢ ದೇಹ ಹಾಗೂ ಆರೋಗ್ಯವನ್ನು ಪಡೆಯಬಹುದು. ಯೋಗ ಹಾಗೂ ನಿಯಮಿತ ಆಹಾರ ಸೇವನೆಯಿಂದ ಮಧುಮೇಹದಂತಹಾ ಸಮಸ್ಯೆಗಳನ್ನೂ ಹತೋಟಿಗೆ ತರಬಹುದು ಎಂದು ಪುತ್ತೂರು ಸಿಟಿ ಆಸ್ಪತ್ರೆಯ ಆಯುರ್ವೇದ ಹಾಗೂ ಯೋಗ ಥೆರಪಿ ವೈದ್ಯೆ ಡಾ. ಚೇತನಾ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಯೋಗ ದಿನಾಚರಣೆ ಅಂಗವಾಗಿ ಸಂಸ್ಕೃತ ಹಾಗೂ ತತ್ವಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೂ.21 ರಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಯೋಗಭ್ಯಾಸ ಹಾಗೂ ಅದರ ಮಹತ್ವವನ್ನು ವಿವರಿಸಿದರು.

ಯೋಗ ಅಭ್ಯಾಸದಿಂದ ದೇಹದ ಗಂಟುಗಳು ಸಡಿಲಗೊಂಡು, ರಕ್ತ ಪರಿಚಲನೆ ಸರಾಗವಾಗುತ್ತದೆ. ರಕ್ತ ಪರಿಚಲನೆ ಸಮರ್ಪಕಾಗಿ ನಡೆದಾಗ ದೇಹದ ಅಂಗಾಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ ನಮ್ಮ ಆರೋಗ್ಯ ಉತ್ತಮ ಸ್ಥಿತಿಗೆ ತಲುಪುತ್ತದೆ. ಅದೇ ರೀತಿ ಮಾನಸಿಕ ಸಮತೋಲನ ಸಾಧನೆಗೂ ಪ್ರಣಾಯಾಮ ಹಾಗೂ ಮುದ್ರೆಗಳು ಸಹಕರಿಸುತ್ತವೆ. ನೆನಪಿನ ಶಕ್ತಿ ಹೆಚ್ಚಿಸಲು, ಮಾನಸಿಕ ಕೌಶಲ ವೃದ್ಧಿಗೆ ಇದು ಸಹಕಾರ ನೀಡುತ್ತದೆ. ಯೋಗಾಸನಗಳನ್ನು ಸಾಧ್ಯವಾದಷ್ಟು ನಿಧಾನಗತಿಯಲ್ಲಿ ನಮ್ಮ ನಮ್ಮ ಸಾಮರ್ಥ್ಯಕ್ಕೆ, ವಯಸ್ಸು, ದೈಹಿಕತೆಗೆ ಅನುಗುಣವಾಗಿ ಮಾಡಬೇಕು ಎಂದರು.

ಉಸಿರಾಟದ ಗತಿ ನಿಧಾನಗತಿಯಲ್ಲಿ ಸಾಗಿದಷ್ಟು ನಮ್ಮ ಹೃದಯದ ಬಡಿತದ ಗತಿಯೂ ನಿಧಾನವಾಗುತ್ತಾ ಹೋಗುತ್ತದೆ ಮತ್ತು ದೇಹ ಸಮತೋಲನದ ಸ್ಥಿತಿಯಲ್ಲಿ ಇರುವಂತೆ ಮಾಡುತ್ತದೆ. ಇದರಿಂದ ನಮ್ಮ ದೇಹ ಉದ್ವೇಗಕ್ಕೆ ಒಳಗಾಗುವುದು ತಪ್ಪುತ್ತದೆ, ಪ್ರಶಾಂತತೆ ಕಾಪಾಡಲು ನೆರವಾಗುವ ಜೊತೆಗೆ ನಮ್ಮ ಆಯಸ್ಸವನ್ನೂ ಕಡಿಮೆಮಾಡುತ್ತದೆ. ಹಿಂದೆ ಋಷಿ ಮುನಿಗಳು ತಮ್ಮ ಉಸಿರಿನ ಮೇಲೆ ಹತೋಟಿ ಸಾಧಿಸುವ ಮೂಲಕ ದೀರ್ಘಾಯುಷ್ಯವನ್ನು ಪಡೆಯುತ್ತಿದ್ದರು. ಯೋಗಾಭ್ಯಾಸದಿಂದ ಒತ್ತಡ, ಖಿನ್ನತೆ, ಏಕಾಗ್ರತೆ ಕೊರತೆ, ನಿದ್ರಾಹೀನತೆ ಮೊದಲಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರಾಣಾಯಾಮ ಹಾಗೂ ಯೋಗಾಭ್ಯಾಸವನ್ನು ಪ್ರಾಯೋಗಕವಾಗಿ ನಡೆಸಿ ಪ್ರಯೋಜನಗಳ ಬಗೆಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರಾದ ಶರಣ್ಯ, ದೀಪ ಪಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದು ಸ್ವಾಗತಿಸಿದರು. ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿ. ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶಶಿಕಲ ವರ್ಕಾಡಿ ವಂದಿಸಿದರು.

LEAVE A REPLY

Please enter your comment!
Please enter your name here