![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಪ್ರತ್ಯೇಕವಾಗಿ 108 ಆಂಬುಲೆನ್ಸ್ ಸೇವೆಯನ್ನು ಒದಗಿಸಬೇಕು ಹಾಗೂ ಕುಂಬ್ರಕ್ಕೆ ಕೆಎಸ್ಆರ್ಟಿಸಿ ಸಿಟಿ ಬಸ್ಸು ವ್ಯವಸ್ಥೆ ಮಾಡಬೇಕು ಮತ್ತು ಕುಂಬ್ರ ವರ್ತಕರ ಸಂಘದ ನಿವೇಶನಕ್ಕೆ ಜಾಗ ಮಂಜೂರು ಮಾಡಿಕೊಡುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ವರ್ತಕರ ಸಂಘದ ವತಿಯಿಂದ ಆ.8 ರಂದು ಮನವಿ ಅರ್ಪಿಸಲಾಯಿತು.
ಸಂಘದ ಅಧ್ಯಕ್ಷ ರಫೀಕ್ ಅಲ್ರಾಯರವರು ಪುತ್ತೂರು ಶಾಸಕರ ಕಛೇರಿಯಲ್ಲಿ ಮನವಿ ಅರ್ಪಿಸಿದರು. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬ್ರ ಪೇಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪುತ್ತೂರು ಬಿಟ್ಟರೆ ಎರಡನೇ ದೊಡ್ಡ ಪೇಟೆ ಎನಿಸಿಕೊಂಡಿರುವ ಕುಂಬ್ರಕ್ಕೆ ಅತೀ ಅಗತ್ಯವಾಗಿ ಆಂಬುಲೆನ್ಸ್ ಸೇವೆ ಆಗಬೇಕಾಗಿದೆ. ಈಗಾಗಲೇ ಹಲವು ಬಾರಿ ಅಪಘಾತ ಸಂಭವಿಸಿದಾಗ ಹತ್ತಿರದಲ್ಲಿ ಆಂಬುಲೆನ್ಸ್ ಸೇವೆ ಇಲ್ಲದೆ ಇರುವುದರಿಂದ ಗಾಯಾಳುವನ್ನು ಆಪೆ ರಿಕ್ಷಾದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಸಾಗಿಸಿದ ಘಟನೆ ಕೂಡ ನಡೆದಿದೆ ಆದ್ದರಿಂದ ಕೂಡಲೇ ಆಂಬುಲೆನ್ಸ್ ಸೇವೆಯನ್ನು ಒದಗಿಸಿಕೊಡುವಂತೆ ಅಧ್ಯಕ್ಷ ರಫೀಕ್ ಅಲ್ರಾಯರು ಕೇಳಿಕೊಂಡರು. ಇದಲ್ಲದೆ ಕುಂಬ್ರಕ್ಕೆ ಈ ಹಿಂದೆ ಕೆಎಸ್ಆರ್ಟಿಸಿ ಸಿಟಿ ಬಸ್ಸು ವ್ಯವಸ್ಥೆಯನ್ನು ಕಲ್ಪಿಸಿತ್ತು ಕಾರಣಾಂತರಗಳಿಂದ ಇದು ನಿಂತು ಹೋಗಿದೆ. ಮತ್ತೆ ಪೇಟೆಗೆ ಸಿಟಿ ಬಸ್ಸು ಬಂದು ಹೋಗುವ ವ್ಯವಸ್ಥೆ ಆಗಬೇಕು ಅಲ್ಲದೆ ಕುಂಬ್ರ ವರ್ತಕರ ಸಂಘವು ಕಳೆದ 19 ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು ಸಂಘಕ್ಕೆ ಇದುವರೆಗೆ ಸ್ವಂತ ಕಟ್ಟಡ ನಿರ್ಮಿಸಲು ಜಾಗ ಸಿಗದೇ ಇರುವುದರಿಂದ ತಾವು ದಯವಿಟ್ಟು ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಜಾಗದ ವ್ಯವಸ್ಥೆಯನ್ನು ದಯಪಾಲಿಸುವಂತೆ ಕೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕರು, ಆಂಬುಲೆನ್ಸ್ ಸೇವೆಯ ಬಗ್ಗೆ ಶೀಘ್ರದಲ್ಲೇ ಪರಿಶೀಲನೆ ಮಾಡುತ್ತೇನೆ ಅಲ್ಲದೆ ಸಿಟಿ ಬಸ್ಸು ಬಗ್ಗೆಯೂ ಮಾತನಾಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.