ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಜಯಂತಿ

0

ಸ್ವಾಮಿ ವಿವೇಕಾನಂದರ ಜೀವನದ ಘಟನೆಗಳೇ ನಮಗೆ ಮಾರ್ಗದರ್ಶನ – ವೀಣಾಸರಸ್ವತಿ

ಪುತ್ತೂರು: ತುಂಟ ಬಾಲಕ ನರೇಂದ್ರ ಮುಂದೆ ಪ್ರಖರ ವ್ಯಕ್ತಿತ್ವದ ಸ್ವಾಮಿ ವಿವೇಕಾನಂದ ಜಗದ್ವಿಖ್ಯಾತರಾಗಿ ಭಾರತ ದೇಶದ ಹಿರಿಮೆಯನ್ನು ಎತ್ತಿ ಹಿಡಿದಂತಹ ಶ್ರೀ ರಾಮಕೃಷ್ಣ ಪರಮಹಂಸರ ಪ್ರಿಯ ಶಿಷ್ಯ ವಿವೇಕಾನಂದರ ಜೀವನದಲ್ಲಿ ನಡೆದ ಪ್ರತಿಘಟನೆಯ ಒಳ ತಿರುಳು ನಮ್ಮ ಜೀವನಕ್ಕೆ ಸೂಕ್ತವಾದ ಮಾರ್ಗದರ್ಶನ ನೀಡುತ್ತದೆ ಎಂದು ಶಾಲಾ ಹಿರಿಯ ಶಿಕ್ಷಕಿ ವೀಣಾಸರಸ್ವತಿಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜರುಗಿದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ನುಡಿದರು.


ಶಾಲಾ ಆಡಳಿತ ಮಂಡಳಿಯ ಸಂಚಾಲಕ ವಸಂತ ಸುವರ್ಣ ಮಾತನಾಡಿ, ವಿವೇಕಾನಂದರು ಬಾಲ್ಯದಿಂದಲೇ ಅನೇಕ ಆದರ್ಶ ಸದ್ಗುಣಗಳನ್ನು ಹೊಂದಿದ್ದು ಎಲ್ಲರ ಮನದಲ್ಲಿಯೂ ಅಚ್ಚಳಿಯದಂತಹ ಪ್ರಭಾವವನ್ನು ಬೀರಿದ್ದಾರೆ ಎಂದೂ ಸತ್ಯ, ಪ್ರಾಮಾಣಿಕತೆ ಇತ್ಯಾದಿ ನೈತಿಕ ಗುಣಗಳನ್ನು ಬಿಂಬಿಸುವ ಕಥೆಗಳನ್ನು ಹೇಳುತ್ತಾ ವಿವೇಕಾನಂದರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.


ವೇದಿಕೆಯಲ್ಲಿ ಶಾಲಾ ಹಿರಿಯ ಶಿಕ್ಷಕಿ ಪೂರ್ಣಿಮಾ ಮಾತಾಜಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಆರುಷಿ ರೈ ಮತ್ತು ಪ್ರಣತಿ ಬಂಗಾರಕೋಡಿ ವಿವೇಕಾನಂದ ಬಾಲ್ಯದ ಘಟನೆಗಳ ಕುರಿತು ಮಾತನಾಡಿದರು. ಮೋನಿಷಾ ವಿವೇಕವಾಣಿ ವಾಚಿಸಿದರು. ತ್ರಿಸ್ತಾ ಮತ್ತು ತಂಡದವರು ಸಮೂಹ ಗೀತೆಯನ್ನು ಹಾಡಿದರು. ನಂದನ್ ಮತ್ತು ತಂಡದವರು ಪ್ರಾರ್ಥಿಸಿದ ಕಾರ್ಯಕ್ರಮವನ್ನು ಪ್ರಾಥಮಿಕ ಶಾಲಾ ನಾಯಕ ಮುಕುಂದ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here