![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ರಾಮಮಂದಿರದ ಮಂತ್ರಾಕ್ಷತೆ ವಿತರಣೆ ಮಾಡುತ್ತಿದ್ದ ಹಿಂದೂ ಕರ್ಯರ್ತನ ಮೇಲೆ ಪುತ್ತಿಲ ಪರಿವಾರದ ಬೆಂಬಲಿಗರಿಂದ ಹಲ್ಲೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದ್ದು, ಈ ಹಲ್ಲೆ ಪ್ರಕರಣಕ್ಕೂ, ರಾಮಮಂದಿರದ ಅಕ್ಷತೆ ವಿತರಣೆಗೂ ಯಾವುದೇ ಸಂಬಂಧವಿಲ್ಲ ಎಂದು ದ.ಕ. ಜಿಲ್ಲಾ ಎಸ್ಪಿ ಸಿ.ಬಿ.ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ.
![](https://puttur.suddinews.com/wp-content/uploads/2024/01/WhatsApp-Image-2024-01-16-at-9.12.08-PM-1.jpeg)
ಈ ಹಲ್ಲೆ ಪ್ರಕರಣಕ್ಕೆ ಹಾಗೂ ರಾಮ ಮಂದಿರದ ಅಕ್ಷತೆ ವಿತರಣೆಗೂ ಯಾವುದೇ ಸಂಬಂಧವಿಲ್ಲ. ಮುಂಡೂರಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಅಕ್ಷತೆ ಹಂಚುವ ವಿಚಾರಕ್ಕೆ ನಡೆದ ಹಲ್ಲೆ ಅಲ್ಲ. ಪುತ್ತೂರು ತಾಲೂಕು ಮುಂಡೂರು ಗ್ರಾಮದ ಬರೆಕೊಲಾಡಿ ಎಂಬಲ್ಲಿ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಕ್ಕಪಕ್ಕದ ಮನೆಯವರು ಜಗಳವಾಡಿಕೊಂಡು ಪರಸ್ಪರ ಹಲ್ಲೆ ನಡೆಸಿರುವುದಾಗಿದೆ.
ಈ ಬಗ್ಗೆ ಈಗಾಗಲೇ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಿನಾಂಕ 15/01/2024 ರಂದು ಅ.ಕ್ರ 07-2024 (ಕಲಂ: 341,447,323,324,506, ಜೊತೆಗೆ 34 ಐಪಿಸಿ) ಹಾಗೂ ಅ.ಕ್ರ 08-2024 ಕಲಂ: IPC1860 (U/s. IPC 1860 (U/s-323,324,504,506 ಜೊತೆಗೆ 34) ರಂತೆ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಎರಡೂ ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುತ್ತದೆ. ಈ ಬಗ್ಗೆ ಸರ್ವಜನಿಕರು ಯಾವುದೇ ಸುಳ್ಳುಸುದ್ದಿ/ತಪ್ಪುಸಂದೇಶಗಳಿಗೆ ಕಿವಿಗೊಡಬಾರದಾಗಿ ವಿನಂತಿ ಎಸ್ಪಿ ಮಾಧ್ಯಮ ಪ್ರಕಟನೆ ಹೊರಡಿಸಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ `ಮುಂಡೂರು ಗ್ರಾಮದಲ್ಲಿ ನಡೆದ ಜಾಗದ ತಕರಾರಿಗೆ ಪುತ್ತಿಲ ಪರಿವಾರವನ್ನು ಅದರಲ್ಲೂ ಹಿಂದೂಗಳ ಪರಮಶ್ರೇಷ್ಠ ರಾಮಮಂದಿರದ ಮಂತ್ರಾಕ್ಷತೆಯನ್ನು ಬಳಸಿಕೊಂಡು ಸುಳ್ಳು ಅಪವಾದ ಮಾಡಿರುವುದು ತೀರ ನೀಚ ಕೆಲಸ. ಇದನ್ನು ನಾವು ಖಂಡಿಸುತ್ತೇವೆ ಎಂದು ಪುತ್ತಿಲ ಪರಿವಾರ ಹೇಳಿದೆ.ಪ್ರಕರಣವನ್ನು ತಿರುಚಿದವರ ವಿರುದ್ದ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪೊಲೀಸ್ ಇಲಾಖೆಯನ್ನು ಪುತ್ತಿಲ ಪರಿವಾರ ವಿನಂತಿಸಿದೆ