![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕುಂಬ್ರಕ್ಕೆ ಕೆಎಸ್ಆರ್ಟಿಸಿ ಸಿಟಿ ಬಸ್ಸು ಬರಬೇಕು ಎಂಬ ಕುಂಬ್ರ ವರ್ತಕರ ಸಂಘದ ಮನವಿಗೆ ಶೀಘ್ರವಾಗಿ ಸ್ಪಂದಿಸಿದ ಅಧಿಕಾರಿಗಳು ಕುಂಬ್ರಕ್ಕೆ ಜೂ.18 ರಿಂದ ಸಿಟಿ ಬಸ್ಸು ವ್ಯವಸ್ಥೆ ಕಲ್ಪಿಸಿದ್ದಾರೆ. ಬೆಳಿಗ್ಗೆ 8.30 ಕ್ಕೆ ಕುಂಬ್ರಕ್ಕೆ ಆಗಮಿಸಿದ ಸಿಟಿ ಬಸ್ಸನ್ನು ವರ್ತಕರ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಸ್ವಾಗತಿಸಿದರು.
ಬಸ್ಸಿಗೆ ಹೂಹಾರ ಹಾಕಿ, ಸಿಹಿ ತಿಂಡಿ ಹಂಚಿ ಸಂಭ್ರಮದಿಂದ ಬಸ್ಸನ್ನು ಸ್ವಾಗತ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ ರೈ ಕೊಪ್ಪಳರವರು, ಸಂಘದ ಮನವಿಗೆ ಶೀಘ್ರವಾಗಿ ಸ್ಪಂದನೆ ನೀಡಿದ ಕೆಎಸ್ಆರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಜಯಕರ ಶೆಟ್ಟಿಯವರನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು. ಸಂಘದ ಕೇವಲ ವರ್ತಕರಿಗೆ ಮಾತ್ರ ಸೀಮಿತವಾಗದೆ ಸಮಾಜಮುಖಿ ಕೆಲಸಗಳಲ್ಲೂ ಕೈ ಜೋಡಿಸಿಕೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ, ಹೊಟೇಲ್ ಉದ್ಯಮಿ ರಫೀಕ್ ಅಲ್ರಾಯ, ಮಾಜಿ ಅಧ್ಯಕ್ಷರುಗಳಾದ ಮೆಲ್ವಿನ್ ಮೊಂತೆರೋ, ದಿವಾಕರ ಶೆಟ್ಟಿ, ಪದಾಧಿಕಾರಿಗಳಾದ ಚರಿತ್ ಕುಮಾರ್, ಹನೀಫ್, ಮಹಮ್ಮದ್, ಹನೀಫ್, ಜಯರಾಮ ಆಚಾರ್ಯ, ಪದ್ಮನಾಭ ಆಚಾರ್ಯ, ರಕ್ಷಿತ್, ಸಂಶುದ್ದೀನ್ ಎ.ಆರ್ ಹಾಗೂ ರಿಕ್ಷಾ ಚಾಲಕ, ಮಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಸ್ವಾಗತಿಸಿ ವಂದಿಸಿದರು.
ವರ್ತಕರ ಸಂಘದ ಮನವಿಗೆ ಶೀಘ್ರ ಸ್ಪಂದನೆ
ಕುಂಬ್ರ ವರ್ತಕರ ಸಂಘದಿಂದ ಕುಂಬ್ರ ಪೇಟೆಗೆ ಸಿಟಿ ಬಸ್ಸು ಬರಬೇಕು ಎಂಬ ಬೇಡಿಕೆಯನ್ನು ಜೂ.13 ರಂದು ಪುತ್ತೂರು ಕೆಎಸ್ಆರ್ಟಿಸಿ ಡಿಸಿ ಜಯಕರ ಶೆಟ್ಟಿಯವರಿಗೆ ನೀಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಯಕರ ಶೆಟ್ಟಿಯವರು ಶೀಘ್ರದಲ್ಲೇ ಬಸ್ಸು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಜೂ.18 ರಿಂದ ಸಿಟಿ ಬಸ್ಸು ವ್ಯವಸ್ಥೆ ಮಾಡಿದ್ದಾರೆ. ಆ ಮೂಲಕ ವರ್ತಕರ ಸಂಘದ ಮನವಿಗೆ ಶೀಘ್ರ ಸ್ಪಂದನೆ ಕೊಟ್ಟಿದ್ದಾರೆ. ಸಿಟಿ ಬಸ್ಸು ವ್ಯವಸ್ಥೆಯಿಂದಾಗಿ ಕುಂಬ್ರ, ಕೊಲತ್ತಡ್ಕ, ಪರ್ಪುಂಜ, ಸಂಟ್ಯಾರು, ಸಂಪ್ಯ ಈ ಭಾಗದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ.
‘ ಸಂಘದ ಮನವಿಗೆ ಶೀಘ್ರ ಸ್ಪಂದನೆ ನೀಡಿದ ಬೆಂಗಳೂರು ಬಿಎಂಟಿಸಿಗೆ ವರ್ಗಾವಣೆಗೊಂಡ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಹಾಗೂ ಪ್ರಸ್ತುತ ಡಿಸಿಯಾಗಿರುವ ನವೀನ್ ಟಿ.ಆರ್ ಮತ್ತು ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.’
ರಫೀಕ್ ಅಲ್ರಾಯ, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ