ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಯ ಚಿಂತನೆಯಲ್ಲಿ ದೇವಳದ ಜಾಗದಲ್ಲಿ ವಾಸ್ತವ್ಯ ಇರುವ ಮನೆಯವರು ಮನೆ ಬಿಟ್ಟು ಕೊಟ್ಟಂತೆ ಮನೆ ತೆರವು ಕಾರ್ಯ ನಡೆಯುತ್ತಿದ್ದು, ಇದೀಗ ಬಹುತೇಕ ಮನೆ ತೆರವಾಗಿದೆ. ಕಾಮಗಾರಿ ವೇಳೆ ಮನೆಗೆ ಮರ ಬಿದ್ದಿದ್ದು, ಸ್ಥಳಕ್ಕೆ ಶಾಸಕ ಅಶೋಕ್ ರೈ ಆಗಮಿಸಿದರು. ಈ ವೇಳೆ ಮನೆ ತೆರವಾಗದೆ ಉಳಿದಿರುವ ರಾಜೇಶ್ ಬನ್ನೂರು ಅವರಿದ್ದ ಮನೆಯನ್ನು ಶಾಸಕರು ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕರು, ಮನೆ ತೆರವಿಗೆ ಬಾಕಿಯಾದ ರಾಘವೇಂದ್ರ ವಕೀಲರಲ್ಲೂ ಮಾತನಾಡಿದ್ದೇನೆ. ಅವರ ಮನೆಯಲ್ಲಿ ಬಾಡಿಗೆಯಲ್ಲಿದ್ದವರೆಲ್ಲ ಬಿಟ್ಟು ಹೋಗಿದ್ದಾರೆ. ರಾಘವೇಂದ್ರ ವಕೀಲರು ಸ್ವಲ್ಪ ಸಮಯ ಕೇಳಿದ್ದಾರೆ. ಇನ್ನೋರ್ವರು ರಾಜಾರಾಮ ಭಟ್ ಮನೆಯವರು ಈಗ ಬಂದು ಮಾತನಾಡಿದ್ದಾರೆ. ಇನ್ನು ಉಳಿದಿರುವುದು ರಾಜೇಶ್ ಬನ್ನೂರು ಅವರ ಮನೆ ಮಾತ್ರ. ಅವರ ಮನಸ್ಸು ಒಳ್ಳೆಯದಿದೆ. ನಾನು ಅವರು ಆತ್ಮೀಯರು. ಹಾಗಾಗಿ ಅವರು ಮನೆ ಬಿಟ್ಟು ಕೊಡಲಿದ್ದಾರೆ. ಕೋರ್ಟ್ ಗೆ ಹೋದವರಿಗೆ ಸ್ಟೇ ಸಿಗಲಿಲ್ಲ ಎಂದು ಹೇಳಿದರು.