ರಾಮಕುಂಜ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ಉತ್ಸವ ಸಮಿತಿ ಉಪಾಧ್ಯಕ್ಷ, ಕೊಯಿಲ ಗ್ರಾಮದ ಪಲ್ಲಡ್ಕ ಆದಿಮನೆ ಶಿವಕೃಪಾ ನಿವಾಸಿ ಶೀನಪ್ಪ ಗೌಡ (73ವ.)ರವರು ಎ.22ರಂದು ತಡರಾತ್ರಿ ಹೃದಯಾಘಾತದಿಂದ ನಿಧನರಾದರು.
ಶೀನಪ್ಪ ಗೌಡರವರಿಗೆ ತಡರಾತ್ರಿ ಎದೆನೋವು ಕಾಣಿಸಿಕೊಂಡಿದ್ದು ಮನೆಯವರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿದರಾದರೂ ದಾರಿಮಧ್ಯೆ ಅವರು ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರೂ, ಪ್ರಸ್ತುತ ಉತ್ಸವ ಸಮಿತಿಯ ಉಪಾಧ್ಯಕ್ಷರೂ ಆಗಿದ್ದ ಶೀನಪ್ಪ ಗೌಡ ಅವರು 20 ದಿನದ ಹಿಂದೆ ನಡೆದ ದೇವಸ್ಥಾನದ ಜಾತ್ರಾ ಮಹೋತ್ಸವ, ನೇಮೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದಲ್ಲೂ ಗುರುತಿಸಿಕೊಂಡಿದ್ದರು. ಆದಿಮನೆಯ ಕುಟುಂಬದ ಯಜಮಾನರಾಗಿದ್ದು, ಊರ ಗೌಡರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಕುಟುಂಬದ ದೈವದ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಪ್ರಗತಿಪರ ಕೃಷಿಕರೂ ಆಗಿದ್ದರು.
ಮೃತರು ಪತ್ನಿ ರೇವತಿ, ಪುತ್ರರಾದ ಸುರೇಶ, ಯಶೋಧರ, ನವೀನ, ಪುತ್ರಿಯರಾದ ಜಲಜ, ಅಮಿತಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಶೀನಪ್ಪ ಗೌಡರವರ ಮೃತದೇಹವನ್ನು ಆಸ್ಪತ್ರೆಯಿಂದ ಮನೆಗೆ ತರಲಾಗಿದ್ದು ಮಧ್ಯಾಹ್ನ 1 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತರ ಕಿರಿಯ ಪುತ್ರ ನವೀನ ಅವರು ಬಹ್ರೈನ್ನಿಂದ ಬರಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಎ.24ರಂದು ಬೆಳಿಗ್ಗೆ ಸ್ವಗೃಹದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.