ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3 ಸರಕಾರಿ ಜಿಮ್ ಸೆಂಟರ್ – ಕ್ರೀಡಾ ಇಲಾಖೆಯ ಕಮಿಷನರ್ ಜೊತೆ ಶಾಸಕ ಅಶೋಕ್‌ ರೈ ಸಭೆ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಕಡೆಗಳಲ್ಲಿ ಸರಕಾರಿ ಜಿಮ್ ಸೆಂಟರನ್ನು ಆರಂಭಿಸುವಂತೆ ಶಾಸಕರಾದ ಅಶೋಕ್ ರೈ ಈ ಹಿಂದೆ ಕ್ರೀಡಾ ಸಚಿವರಿಗೆ ಮನವಿ ಮಾಡಿದ್ದು, ಬುಧವಾರ ಕ್ರೀಡಾ ಇಲಾಖೆ ಕಮಿಷನರ್ ಮತ್ತು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸರಕಾರದ ಕಾರ್ಯದರ್ಶಿ ಜೊತೆ ಸಭೆ ನಡೆಸಿದ್ದು, ಶೀಘ್ರವೇ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.


ಗ್ರಾಮೀಣ ಭಾಗದಲ್ಲಿ ಜಿಮ್ ಕೇಂದ್ರ ಪ್ರಾರಂಭ ಮಾಡುವಂತೆ ಈ ಹಿಂದೆಯೇ ಶಾಸಕರಿಗೆ ಹಲವಾರು ಮನವಿಗಳು ಬಂದಿದ್ದವು. ಯುವಕರು, ಯುವ ಸಂಘಟನೆಗಳಿಂದ ಶಾಸಕರಿಗೆ ಮನವಿ ಬಂದಿದ್ದು ಜಿಮ್ ಕೇಂದ್ರ ಪ್ರಾರಂಭ ಮಾಡುವಂತೆ ಮನವಿ ಮಾಡಿದ್ದರು. ಈ ವಿಚಾರವನ್ನು ಕಳೆದ ಕೆಲವು ತಿಂಗಳ ಹಿಂದೆ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವರ ಜೊತೆ ಮಾತುಕತೆ ನಡೆಸಿದ ವೇಳೆ ಸಚಿವರು ಅಸ್ತು ಎಂದಿದ್ದರು. ಕ್ರೀಡಾ ಇಲಾಖೆಯ ಮೂಲಕ ಜಿಮ್ ಕೇಂದ್ರ ತೆರೆಯಲು ಅವಕಾಶವಿರುವ ಬಗ್ಗೆ ಶಾಸಕರು ಸಚಿವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಶಾಸಕರು 3 ಜಿಮ್ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಪ್ರಸ್ತಾವನೆ ಸಚಿವಾಲಯದಿಂದ ಕಮಿಷನರ್ ಅವರಿಗೆ ಬಂದಿದ್ದು ಈ ಬಗ್ಗೆ ಬುಧವಾರ ಶಾಸಕರು ಕಮಿಷನರ್ ಜೊತೆ ಸಭೆ ನಡೆಸಿ ಬೇಡಿಕೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದ್ದಾರೆ.

ಯುವಕ, ಯುವತಿಯರಿಗಾಗಿ ಜಿಮ್ ಕೇಂದ್ರ
ಪುತ್ತೂರು ನಗರದಲ್ಲಿ ಮಾತ್ರ ಜಿಮ್ ಕೇಂದ್ರ ಇದ್ದು ಗ್ರಾಮಾಂತರ ಭಾಗದ ಯುವಕರಿಗೆ ಸಮಯಕ್ಕೆ ಸರಿಯಾಗಿ ಜಿಮ್ ಕೇಂದ್ರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜಿಮ್ ಕೇಂದ್ರ ಪ್ರಾರಂಭ ಮಾಡಿದ್ದಲ್ಲಿ ಯುವಕರು ಇದನ್ನು ಬಳಕೆ ಮಾಡುತ್ತಾರೆ. ಕ್ಷೇತ್ರ ವ್ಯಾಪ್ತಿಯ ಆಯ್ದ ಮೂರು ಕಡೆಗಳಲ್ಲಿ ಈ ಕೇಂದ್ರ ಸ್ಥಾಪನೆಯಾಗಲಿದೆ.

ಕ್ರೀಡಾಂಗಣಕ್ಕೆ ಅನುದಾನ ಬಿಡುಗಡೆಗೆ ಮನವಿ
ಮುಂಡೂರು ಗ್ರಾಮದಲ್ಲಿ ನಿರ್ಮಾಣವಾಗಲಿರುವ ತಾಲೂಕು ಕ್ರೀಂಡಾಂಗಣ ಸಮತಟ್ಟು ಮಾಡಲು 8 ಕೋಟಿ ಅನುದಾನ ಬೇಕಾಗಿದ್ದು, ಈ ಅನುದಾನವನ್ನು ಬಿಡುಗಡೆ ಮಾಡುವಂತೆ ಯುವಜನ ಕ್ರೀಡೆ ಮತ್ತು ಯುವ ಸಬಲಿಕರಣ ಇಲಾಖೆ ಸರಕಾರಿ ಕಾರ್ಯದರ್ಶಿ ರಣದೀಪ್ ಮತ್ತು ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಆಯುಕ್ತರಾದ ಚೇತನ್ ಅವರಿಗೆ ಶಾಸಕರು ಮನವಿ ಮಾಡಿದ್ದಾರೆ. ಮುಂಡೂರು ಗ್ರಾಮದಲ್ಲಿ ನಿರ್ಮಾಣವಾಗಲಿರುವ ಬೃಹತ್ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಒಂದು ಹಂತದ ಕಾಮಗಾರಿ ಮುಗಿದಿದ್‌ದು, ಎರಡನೇ ಹಂತ ಸಮತಟ್ಟು ಕಾಮಗಾರಿಗೆ ಶೀಘ್ರವೇ ಅನುದಾನ ಬಿಡುಗಡೆಯಾಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.


ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಕಡೆಗಳಲ್ಲಿ ಸರಕಾರಿ ಜಿಮ್ ಕೇಂದ್ರ ನಿರ್ಮಾಣವಾಗಲಿದೆ. ಈ ಕೇಂದ್ರದಲ್ಲಿ ಜಿಮ್ ಗೆ ಬೇಕಾದ ಎಲ್ಲಾ ಅಗತ್ಯ ಪರಿಕರಗಳು ಇರಲಿದೆ. ಗ್ರಾಮೀಣ ಯುವಕರನ್ನು ಲಕ್ಷ್ಯವಾಗಿಟ್ಟುಕೊಂಡು ಈ ಕೇಂದ್ರವನ್ನು ತೆರೆಯಲಾಗುತ್ತದೆ. ಫಿಟ್‌ನೆಸ್ ಕಡೆ ಯುವಕರು ಹೆಚ್ಚಿನ ಒಲವು ತೋರುತ್ತಿದ್ದು ಅವರಿಗೆ ವ್ಯವಸ್ಥೆ ಮಾಡಿಕೊಡಬೇಕಾಗಿದ್ದು ಸರಕಾರದ ಒಂದು ಭಾಗ ಎಂದು ಯುವಕರ ಮನವಿಗೆ ಸ್ಪಂದನೆ ನೀಡುವ ಕೆಲಸವನ್ನು ಮಾಡಲಿದ್ದೇವೆ. ಪುತ್ತೂರು ತಾಲೂಕು ಕ್ರೀಡಾಂಗಣಕ್ಕೆ ಶೀಘ್ರವೇ 8 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಅನುದಾನ ತಕ್ಷಣ ಬಿಡುಗಡೆಯಾಗಲಿದೆ.
ಅಶೋಕ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here