ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಪತ್ತು ನಿರ್ವಹಣಾ ಸಮಿತಿ ಸಭೆ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಸರಳೀಕಾನ ಇವರ ಅಧ್ಯಕ್ಷತೆಯಲ್ಲಿ ಮೇ.30 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಪಂಚಾಯತ್ ವ್ಯಾಪ್ತಿಯ ಕೆಲವು ಕಡೆ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಸುತ್ತಿಕೊಂಡಿವೆ. ಮಳೆಗಾಲವಾದ ಕಾರಣ ಇದನ್ನು ತೆಗೆಯುವ ಕೆಲಸ ಮೆಸ್ಕಾಂನಿಂದ ಆಗಬೇಕಿದೆ ಎಂದು ಪಂಚಾಯತ್ ಉಪಾಧ್ಯಕ್ಷ ಮಹೇಶ್.ಕೆ ಮೆಸ್ಕಾಂ ಜೆ.ಇ ಪುತ್ತೂರು ರವರಲ್ಲಿ ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ಜೆ.ಇ ಮಳೆಗಾಲ ಬೇಗ ಆರಂಭವಾದ ಕಾರಣ ಸ್ವಲ್ಪ ಹಿನ್ನಡೆ ಆಗಿದೆ. ಈಗಾಗಲೇ ಪವರ್ ಮ್ಯಾನ್ ಗಳು ಎಲ್ಲಾ ಕಡೆ ಈ ಕೆಲಸ ಮಾಡುತ್ತಿದ್ದಾರೆ ಎಂದರು. ಕೆಲವು ಕಡೆ ವಯರ್ ಗಳು ಬಹಳ ಕೆಳಗೆ ನೇತಾಡುತ್ತಿರುವುದರ ಬಗ್ಗೆ ಸದಸ್ಯರು ಜೆ.ಇ ಯವರ ಗಮನಕ್ಕೆ ತಂದರು. ಅದೆಲ್ಲವನ್ನು ಮುಂದಿನ ದಿನಗಳಲ್ಲಿ ಸರಿಪಡಿಸುವ ಬಗ್ಗೆ ಜೆ.ಇ ಹೇಳಿದರು.
ವಿದ್ಯುತ್ ಲೈನ್ ಗಳಿಗೆ ಅಪಾಯಕಾರಿಯಾದ ಮರಗಳನ್ನು ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆ ಸಹಕಾರ ನೀಡುವಂತೆ ಸಭೆಯಲ್ಲಿ ಚರ್ಚಿಸಲಾಯಿತು.ಅಪಾಯಕಾರಿಯಾಗಿದ್ದು ಅರಣ್ಯ ಇಲಾಖೆಯ ಮರವಾದರೆ ಅದನ್ನು ತೆರವುಗೊಳಿಸಲು ಸಹಕರಿಸುತ್ತೇವೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಮದನ್ ಹೇಳಿದರು.
ಚೆಲ್ಯಡ್ಕ ಸೇತುವೆ ವ್ಯಾಪ್ತಿಯಲ್ಲಿ ಬೀದಿ ದೀಪ ಅಳವಡಿಕೆ
ಮುಳುಗು ಸೇತುವೆ ಖ್ಯಾತಿಯ ಚೆಲ್ಯಡ್ಕ ಸೇತುವೆ ನಿರ್ಮಾಣವಾದರೂ ಮಳೆಗಾಲವಾದ ಕಾರಣ ಸಂಪರ್ಕ ಕಾಮಗಾರಿ ನಡೆಸಲು ಆಗಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಅಲ್ಲಿ ಬೀದಿ ದೀಪ ಅಳವಡಿಸುವಂತೆ ಸದಸ್ಯ ಪ್ರಕಾಶ್ ರೈ ಮತ್ತೀತರರು ಸಭೆಯಲ್ಲಿ ಪ್ರಸ್ತಾಪಿಸಿದರು. ಇದನ್ನು ನೊಡೆಲ್ ಅಧಿಕಾರಿ ಜೆ.ಇ ಯವರ ಗಮನಕ್ಕೆ ತಂದಾಗ ಅದಕ್ಕೆ ಸ್ಪಂದಿಸುವುದಾಗಿ ಜೆ.ಇ ಹೇಳಿದರು.
ಪೇರಲ್ತಡ್ಕ ಅಂಗನವಾಡಿ ಹಳೆ ಕಟ್ಟಡ ನೆಲಸಮಗೊಳಿಸಲಿ
ಇರ್ದೆ ಗ್ರಾಮದ ಪೇರಲ್ತಡ್ಕ ಹಳೆ ಅಂಗನವಾಡಿ ಕೇಂದ್ರ ಶಿಥಿಲವಾದ ಕಾರಣ ಅಲ್ಲಿ ನೂತನ ಕೇಂದ್ರ ನಿರ್ಮಾಣವಾಗಿ ಆರಂಭವಾಗಿ ವರ್ಷ ಎರಡು ಕಳೆಯಿತು. ಹಳೆ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿರುವುದರಿಂದ ಅದನ್ನು ನೆಲಸಮಗೊಳಿಸುವಂತೆ ಅನೇಕ ಬಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ ವರ್ಷ ಎರಡು ಕಳೆದರೂ ಇದುವರೆಗೆ ಅವರು ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು.ಕಟ್ಟಡ ಅಪಾಯಕಾರಿಯಾಗಿದ್ದು ಅದರ ಹತ್ತಿರ ಮಕ್ಕಳು ಒಡಾಡುತ್ತಿರುತ್ತಾರೆ. ಆದ್ದರಿಂದ ಅದನ್ನು ಶೀಘ್ರವಾಗಿ ತೆರವುಗೊಳಿಸಲು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲು ಸಭೆಯಲ್ಲಿ ನಿರ್ಣಯಿಸಲಾಯಿತು.
ವಿಪತ್ತು ನಿರ್ವಹಣಾ ಸಭೆಗೆ ಶಾಲಾ ಮುಖ್ಯ ಗುರುಗಳು ಹಾಜರಾಗ ಬೇಕು ಎಂದು ಸದಸ್ಯ ಗಂಗಾಧರ ಗೌಡ ನೊಡೆಲ್ ಅಧಿಕಾರಿಯವರ ಗಮನಕ್ಕೆ ತಂದರು. ಶಾಲೆಗಳ ಪರಿಸ್ಥಿತಿ ಬಗ್ಗೆ ಅವರು ಸಭೆಯಲ್ಲಿ ಪ್ರಸ್ತಾಪಿಸಿದರೆ ಸ್ಪಂದಿಸಲು ಸಹಕಾರಿಯಾಗುತ್ತದೆ ಎಂದಾಗ ಈ ಬಗ್ಗೆ ಮುಂದೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡುವ ಬಗ್ಗೆ ತಿಳಿಸಿದರು.
ಉಪಾಧ್ಯಕ್ಷ ಮಹೇಶ್. ಕೆ, ಸದಸ್ಯರಾದ ಪ್ರಕಾಶ್ ರೈ, ಚಂದ್ರಶೇಖರ ರೈ, ಲಲಿತಾ ಚಿದಾನಂದ, ಗೋಪಾಲ, ಗಂಗಾಧರ ಗೌಡ,ಸುಮಲತಾ,ಲಲಿತ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ್,ಅರಣ್ಯಾಧಿಕಾರಿ ಮದನ್,ಮೆಸ್ಕಾಂ ಜೆ.ಇ ಪುತ್ತು, ಪ್ರಾಥಮಿಕ ಆರೋಗ್ಯ ಇಲಾಖೆಯ ಕಾರ್ಯಕರ್ತೆ ಯಶೋಧ, ಸಿ.ಎಚ್. ಒ ಧನ್ಯ, ಆಶಾ ಕಾರ್ಯಕರ್ತೆ ಮಮತಾ ಸಭೆಯಲ್ಲಿ ಭಾಗವಹಿಸಿದ್ದರು, ಪಿಡಿಒ ಸೌಮ್ಯ ಸ್ವಾಗತಿಸಿ ವಂದಿಸಿದರು. ಕಾರ್ಯದರ್ಶಿ ಬಾಬು ನಾಯ್ಕ, ಸಿಬ್ಬಂದಿಗಳಾದ ಸಂದೀಪ್, ಸವಿತಾ, ಚಂದ್ರಾವತಿ ಸಹಕರಿಸಿದರು.
ಎಲ್ಲರ ಸಹಕಾರ ಅಗತ್ಯ: ಬಿ.ಇ.ಒ ಲೋಕೇಶ್
ಸಭೆಯ ನೊಡೆಲ್ ಅಧಿಕಾರಿಯಾಗಿ ಭಾಗವಹಿಸಿದ ತಾಲೂಕು ಶಿಕ್ಷಣಾಧಿಕಾರಿ ಲೋಕೇಶ್ ರವರು ಸಭೆಯಲ್ಲಿ ಮಾತನಾಡಿ ಅವಧಿಗೆ ಮೊದಲು ಮಳೆಗಾಲ ಆರಂಭವಾದ ಕಾರಣ ನಾವು ಪ್ರಕೃತಿ ವಿಕೋಪದಿಂದ ಆಗುವ ಹಾನಿಯನ್ನು ತಡೆಗಟ್ಟಲು ತಯಾರಿ ನಡೆಸಲು ಸಾಧ್ಯವಾಗಿಲ್ಲ. ಆದರೆ ನಾವೆಲ್ಲಾ ಒಂದು ಟೀಮ್ ತರಹ ಒಟ್ಟಾಗಿ ಕೆಲಸ ಮಾಡ ಬೇಕು. ಇದಕ್ಕೆ ಎಲ್ಲಾ ಅಧಿಕಾರಿಗಳ, ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.ಶಾಲೆ,ಅಂಗನವಾಡಿ ಕೇಂದ್ರ, ಸರಕಾರಿ ಆಸ್ಪತ್ರೆಗಳು ಹಾಗೂ ಸರಕಾರಿ ಕಟ್ಟಡಗಳ ಮೇಲೆ ನಾವು ಹೆಚ್ಚಿನ ನಿಗಾ ವಹಿಸಬೇಕು. ಆದುದರಿಂದ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುವ ಎಂದು ಹೇಳಿದರು.