ಪುತ್ತೂರು: ಭಾನುವಾರ ಸಂಜೆ ಆರ್ಯಾಪು ಗ್ರಾಮದ ಸಂಟ್ಯಾರ್ ಕಲ್ಲಕಟ್ಟದಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆಗೆ ಶಾಸಕ ಅಶೋಕ್ ರೈ ತೆರಳಿದ್ದರು. ರಸ್ತೆ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಬರುವ ವೇಳೆ ಶಾಸಕರ ಕಾರಿಗೆ ಬಾಲಕಿಯೋರ್ವರು ಅಡ್ಡ ನಿಂತಿದ್ದಾಳೆ. ಏನೋ ಇರಬೇಕು ಎಂದ ಶಾಸಕರು ಕಾರು ನಿಲ್ಲಿಸಲಾಯಿತು. ಆ ವೇಳೆ ಶಾಸಕರ ಬಳಿ ಓಡಿ ಬಂದ ಬಾಲಕಿ ʼಅಶೋಕಣ್ಣ ನಮ್ಮ ಮನೆ ಸೋರುತಿದೆ, ಮಲಗಲು ಆಗುತ್ತಿಲ್ಲ, ಓದಲು ಬರೆಯಲು ಆಗುತ್ತಿಲ್ಲ, ನೀವು ರಿಪೇರಿ ಮಾಡಿಕೊಡಬೇಕುʼ ಎಂದು ಹೇಳಿದ್ದಾಳೆ. ಪುಟ್ಟ ಬಾಲಕಿಯ ಮನವಿಯನ್ನು ಕೇಳಿ ಕಾರಿನಿಂದ ಇಳಿದ ಶಾಸಕರು ಬಾಲಕಿಯ ತಲೆ ಸವರಿ, “ಎಲ್ಲಮ್ಮಾ ನಿನ್ನ ಮನೆ?” ಎಂದು ಕೇಳಿದಾಗ “ಅಲ್ಲೇ ಮೇಲೆ” ಎಂದು ಹೇಳಿದ್ದಾಳೆ.
ಕೂಡಲೇ ಸ್ಥಳೀಯ ಬೂತ್ ಅಧ್ಯಕ್ಷರನ್ನು ಕರೆಸಿ ಬಾಲಕಿಯ ಮನೆಯ ವಿಚಾರವನ್ನು ತಿಳಿದುಕೊಂಡರು. ಬಾಲಕಿಯ ತಂದೆ ಕೂಲಿ ಕೆಲಸ ಮಾಡುತ್ತಿದ್ದು, ದಲಿತ ಕುಟುಂಬಕ್ಕೆ ಸೇರಿದವರಾಗಿದ್ದರು. ಮನೆ ಪ್ರತೀ ಮಳೆಗಾಲದಲ್ಲಿ ಸೋರುತ್ತಿದೆ ಎಂಬ ವಿಚಾರವೂ ಇವರ ಗಮನಕ್ಕೆ ಬಂತು. ಕೂಡಲೇ ಶಾಸಕರು “ನಿಮ್ಮ ಮನೆಗೆ ನಾನು ಶೀಟು ಹಾಕಿ ಕೊಡುತ್ತೇನೆ, ನೀನು ಹಾಸ್ಟೆಲ್ನಲ್ಲಿ ಕಲಿಯುವ ಆಸಕ್ತಿ ಇದ್ದರೆ ಅದಕ್ಕೂ ವ್ಯವಸ್ಥೆ ಮಾಡಿಕೊಡುತ್ತೇನೆ, ಬರೆಯುವ ಪುಸ್ತಕ ಬೇಕಿದ್ದರೆ ಅದನ್ನೂ ಮಾಡಿಕೊಡುತ್ತೇನೆ. ಏನೂ ಚಿಂತೆ ಮಾಡಬೇಡ, ನಿನ್ನ ಸೋರುತಿರುವ ಮನೆಗೆ ಮುಕ್ತಿ ನೀಡುತ್ತೇನೆ” ಎಂದು ಬಾಲಕಿಯನ್ನು ಸಮಾಧಾನ ಪಡಿಸಿದ್ದಾರೆ. ಈಕೆ ಸಂಟ್ಯಾರ್ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ.