ಪ್ರಾಕೃತಿಕ ವಿಕೋಪ ಎದುರಿಸಲು ಕಾರ್ಯಪ್ರವೃತ್ತಗೊಂಡ ಗ್ರಾಪಂಗಳು

0

ಅಪಾಯಕಾರಿ ಮನೆಗಳಿಗೆ ನೋಟೀಸ್, ಸ್ಥಳಗಳಿಗೆ ಬ್ಯಾನರ್ ಅಳವಡಿಕೆ
ಒಳಮೊಗ್ರು 12, ಮುಂಡೂರು 11, ನಿಡ್ಪಳ್ಳಿ 3 ಮನೆಗಳಿಗೆ ನೋಟೀಸ್

ಪುತ್ತೂರು: ಮಳೆ, ಗಾಳಿ,ನೀರಿನಿಂದ ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಬಹುದಾದ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಆಯಾ ಸ್ಥಳೀಯ ಗ್ರಾಮ ಪಂಚಾಯತ್‌ಗಳು ಎಲ್ಲಾ ವಿಧದಲ್ಲೂ ಸಿದ್ದವಾಗಿವೆ. ಈಗಾಗಲೇ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರುಗಳು ಹಾಗೇ ಆಡಳಿತ ಮಂಡಳಿ ಸದಸ್ಯರುಗಳು ಗ್ರಾಮ ವ್ಯಾಪ್ತಿ ಭೇಟಿ ನೀಡುವ ಮೂಲಕ ಅಪಾಯಕಾರಿ ಸ್ಥಳಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಪಾಯಕಾರಿ ಅನ್ನಿಸುವಂತಹ ಮನೆ, ಕಟ್ಟಡ, ವಾಣಿಜ್ಯ ಮಳಿಗೆ ಇತ್ಯಾದಿಗಳು ನೋಟೀಸ್ ಜಾರಿ ಮಾಡಲಾಗಿದೆ. ಇದಲ್ಲದೆ ಗ್ರಾಮದಲ್ಲಿ ಹಳ್ಳ, ಕೊಳ್ಳ, ತೋಡು, ನದಿ ಇತ್ಯಾದಿಗಳಿಂದ ಅಪಾಯ ಇದೆ ಎಂದು ಕಂಡು ಬಂದ ಸ್ಥಳಗಳಿಗೆ ‘ಇಲ್ಲಿ ಅಪಾಯ ಇದೆ’ ಎಂಬ ಎಚ್ಚರಿಕೆಯ ಫಲಕವನ್ನು ಹಾಕುವ ಕೆಲಸವು ನಡೆದಿದೆ. ಈಗಾಗಲೇ ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಂದರೆ 12 ಕಡೆಗಳಿಗೆ ಹಾಗೇ ಮುಂಡೂರಿನಲ್ಲಿ 11 ಕಡೆಗಳಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿದ್ದು ಎಚ್ಚರಿಕೆಯ ನೋಟೀಸ್ ನೀಡಿದ್ದಾರೆ.


ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ 12 ಮನೆ,ಕಟ್ಟಡಗಳಿಗೆ ನೋಟೀಸ್
ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್, ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಹಾಗೂ ಸದಸ್ಯರುಗಳು, ಅಧಿಕಾರಿ ವರ್ಗದವರು ಅಪಾಯಕಾರಿ ಅನ್ನಿಸುವಂತಹ ಸ್ಥಳಗಳಿಗೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ 12 ಅಪಾಯಕಾರಿ ಅನ್ನಿಸುವಂತಹ ಮನೆ, ಕಟ್ಟಡಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಅಪಾಯಕಾರಿ ಸ್ಥಳಗಳಿಗೆ ಬ್ಯಾನರ್ ಅಳವಡಿಕೆಗೂ ಸಿದ್ಧತೆ ನಡೆಸಿದ್ದಾರೆ.


ಮುಂಡೂರು ಗ್ರಾಮದಲ್ಲಿ 11 ಮನೆಗಳಿಗೆ ನೋಟೀಸ್
ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಅಧ್ಯಕ್ಷ ಚಂದ್ರಶೇಖರ ಎನ್.ಎಸ್.ಡಿ ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಧರೆ ಕುಸಿತ ಪ್ರದೇಶಗಳ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ 11 ಅಪಾಯಕಾರಿ ಅನ್ನಿಸುವಂತಹ ಮನೆ, ಕಟ್ಟಡಗಳಿಗೆ ನೋಟೀಸ್ ಕೂಡ ಜಾರಿ ಮಾಡಿದ್ದಾರೆ.


ಕೆಯ್ಯೂರು, ನಿಡ್ಪಳ್ಳಿ, ಬೆಟ್ಟಂಪಾಡಿ ತಲಾ 3 ಮನೆಗಳಿಗೆ ನೋಟೀಸ್
ಕೆಯ್ಯೂರು ಗ್ರಾಪಂ ವ್ಯಾಪ್ತಿಯಲ್ಲೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಅಧ್ಯಕ್ಷ ಶರತ್ ಕುಮಾರ್ ಮಾಡಾವು ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ಗ್ರಾಮ ವ್ಯಾಪ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಯ್ಯೂರು ಗ್ರಾಮದಲ್ಲಿ 3 ಮನೆಗಳಿಗೆ ನೋಟೀಸ್ ನೀಡಲಾಗಿದ್ದು 8ಕ್ಕೂ ಅಧಿಕ ಕಡೆಗಳಲ್ಲಿ ಅಪಾಯವಿದೆ ಎಚ್ಚರಿಕೆ ಎಂಬ ಬ್ಯಾನರ್ ಅನ್ನು ಅಳವಡಿಸಿದ್ದಾರೆ. ಇದರಂತೆ ನಿಡ್ಪಳ್ಳಿ ಗ್ರಾಪಂ ವ್ಯಾಪ್ತಿಯಲ್ಲೂ 3 ಮನೆಗಳಿಗೆ ನೋಟೀಸ್ ನೀಡಲಾಗಿದ್ದು 1 ಮನೆಯವರನ್ನು ಸ್ಥಳಾಂತರ ಕೂಡ ಮಾಡಲಾಗಿದೆ ಹಾಗೇ 1 ಕಡೆ ಅಪಾಯವಿದೆ ಎಚ್ಚರಿಕೆ ಎಂಬ ಬ್ಯಾನರ್ ಕೂಡ ಅಳವಡಿಸಿದ್ದಾರೆ. ಬೆಟ್ಟಂಪಾಡಿ ಗ್ರಾಮ ವ್ಯಾಪ್ತಿಯಲ್ಲಿ 3 ಮನೆಗಳಿಗೆ ನೋಟೀಸ್ ನೀಡಲಾಗಿದ್ದು 2 ಕಡೆಗಳಲ್ಲಿ ಅಪಾಯವಿದೆ ಎಂಬ ಬ್ಯಾನರ್ ಅಳಡಿಸಲಾಗಿದೆ.


ಪಾಣಾಜೆ, ಕೊಳ್ತಿಗೆ 2ಮನೆಗಳಿಗೆ ನೋಟೀಸ್
ಪಾಣಾಜೆ, ಕೊಳ್ತಿಗೆ ಗ್ರಾಮ ವ್ಯಾಪ್ತಿಯಲ್ಲೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಹಾಗೇ ಆಡಳಿತ ಮಂಡಳಿ ಸದಸ್ಯರುಗಳು ಭೇಟಿ ನೀಡುತ್ತಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಪಾಣಾಜೆ ಗ್ರಾಪಂ ವ್ಯಾಪ್ತಿಯಲ್ಲಿ 2 ಮನೆಗಳಿಗೆ ನೋಟೀಸ್ ನೀಡಲಾಗಿದ್ದು 3 ಕಡೆಗಳಲ್ಲಿ ಅಪಾಯವಿದೆ ಎಚ್ಚರಿಕೆ ಎಂಬ ಬ್ಯಾನರ್ ಅಳಡಿಸಲಾಗಿದೆ. ಕೊಳ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ 2 ಮನೆಗಳಿಗೆ ನೋಟೀಸ್ ನೀಡಲಾಗಿದೆ.


ಉಳಿದಂತೆ ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ,ಅಧ್ಯಕ್ಷೆ ಸುಜಾತ ಮುಳಿಗದ್ದೆ ಹಾಗೇ ಆಡಳಿತ ಮಂಡಳಿ ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆದಂಬಾಡಿ ಗ್ರಾಪಂ ವ್ಯಾಪ್ತಿಯಲ್ಲಿ 1 ಮನೆಗೆ ನೋಟೀಸ್ ನೀಡಲಾಗಿದೆ. ಅರಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲೂ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು 1 ಕಡೆಯಲ್ಲಿ ಅಪಾಯವಿದೆ ಎಚ್ಚರಿಕೆ ಎಂಬ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಬಡಗನ್ನೂರು, ನೆಟ್ಟಣಿಗೆ ಮುಡ್ನೂರು ಗ್ರಾಪಂ ವ್ಯಾಪ್ತಿಯಲ್ಲೂ ಪಂಚಾಯತ್ ಅಧಿಕಾರಿಗಳು, ಆಡಳಿತ ಮಂಡಳಿಯವರು ಗ್ರಾಮ ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ಮನೆಗಳಿಗೆ ನೋಟೀಸ್ ನೀಡಿಲ್ಲ ಎಂದು ತಿಳಿದು ಬಂದಿದೆ.


ಗ್ರಾಮೀಣ ಭಾಗದಲ್ಲಿ ಫುಲ್ ಅಲರ್ಟ್
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಧರೆ ಕುಸಿತ, ಗುಡ್ಡ ಕುಸಿತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಈ ಬಗ್ಗೆ ಈಗಾಗಲೇ ಗ್ರಾಮ ಪಂಚಾಯತ್ ಅಧಿಕಾರಿ, ಆಡಳಿತ ಮಂಡಳಿಯವರು ಗುಡ್ಡ, ಧರೆ ಕುಸಿತ ಸಂಭವಿಸುವ ಸ್ಥಳಗಳಿಗೆ ಭೇಟಿ ನೀಡಿದ್ದು ಸುತ್ತಲಿನ ನಿವಾಸಿಗಳಿಗೆ ಎಚ್ಚರಿಕೆಯಿಂದಿರುವಂತೆ ಮನವಿ ಮಾಡಿಕೊಂಡಿದ್ದಾರೆ. ಅಪಾಯ ಇದೆ ಎಂದು ಕಂಡುಬಂದ ಮನೆಯವರಿಗೆ, ಕಟ್ಟಡ ಮಾಲೀಕರಿಗೆ ನೋಟೀಸ್ ಕೂಡ ಜಾರಿ ಮಾಡಿದ್ದಾರೆ. ಒಟ್ಟಿನಲ್ಲಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಗ್ರಾಪಂಗಳು ಎಲ್ಲಾ ವಿಧದಲ್ಲೂ ಸಿದ್ಧವಾಗಿದೆ.


ಧರೆ, ಗುಡ್ಡ ಕುಸಿತಗಳೇ ಹೆಚ್ಚು…!
ಕಳೆದ ಒಂದು ತಿಂಗಳಿನಿಂದ ಗಮನಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಗುಡ್ಡ, ಧರೆ ಕುಸಿತಗಳೇ ಹೆಚ್ಚಾಗಿ ಸಂಭವಿಸಿದೆ. ಹೆಚ್ಚಾಗಿ ಮನೆಯ ಹಿಂಬದಿಯ ಧರೆಯೇ ಕುಸಿತಗೊಂಡಿದ್ದು ಇದರಿಂದಾಗಿ ಮನೆಗಳಿಗೆ ಹಾನಿಯುಂಟಾಗಿದೆ. ಮಾನವ ಹಸ್ತಕ್ಷೇಪದಿಂದಲೇ ಇಂತಹ ಅವಘಡಗಳು ಸಂಭವಿಸುತ್ತಿದ್ದು ಅಭಿವೃದ್ಧಿಯ ಮಾದರಿಗಳು ಇಂತಹ ಭೂ ಕುಸಿತ, ಗುಡ್ಡ, ಧರೆ ಕುಸಿತಕ್ಕೆ ಕಾರಣವಾಗುತ್ತಿವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.


LEAVE A REPLY

Please enter your comment!
Please enter your name here