ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ ) ಕಡಬ ಹಾಗೂ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು ಆಲಂಕಾರು ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಮಾಹಿತಿ ಕಾರ್ಯಾಗಾರವು ಜೂ.18ರಂದು ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆಯಿತು.
ಕಾರ್ಯಗಾರವನ್ನು ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ತಂಬಾಕಿನಿಂದ ದೂರವಿದ್ದು, ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ನೆಹರುನಗರ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಹಾಗೂ ವಕೀಲರಾದ ಮನೋಹರ ಎ ಮಾತನಾಡಿ, ವಿದ್ಯಾರ್ಥಿಗಳು ಕ್ಷಣಿಕ ಸುಖಕ್ಕೋಸ್ಕರ ಜೀವನವನ್ನು ವ್ಯರ್ಥ ಮಾಡದೇ ವಿದ್ಯಾರ್ಥಿ ದೆಸೆಯಲ್ಲಿ ಸಾಧನೆಯನ್ನು ಮಾಡಬೇಕು. ಆಗ ಮಾತ್ರ ನಮ್ಮ ಜೀವನಕ್ಕೆ ಅರ್ಥ ಬರುತ್ತದೆ ಎಂಬ ವಾಸ್ತವ ಸತ್ಯವನ್ನು ಮರೆಯಬಾರದು. ಅದೆಷ್ಠೋ ಯುವ ಜನಾಂಗ ದುಶ್ಟಟಕ್ಕೆ ಬಲಿಯಾಗಿ ತಮ್ಮ ಬದುಕನ್ನೇ ಹಾಳು ಮಾಡಿಕೊಂಡವರು ನಮ್ಮ ಸಮಾಜದ ಮುಂದೆ ಕಾಣುತ್ತಾರೆ, ಇದರಿಂದ ನಾವೆಲ್ಲಾ ದೂರವಿರೋಣ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಕಡಬ ಇದರ ಅಧ್ಯಕ್ಷ ಮಹೇಶ್ ಕೆ ಸವಣೂರು ಮಾತನಾಡಿ, ಜೀವನದಲ್ಲಿ ಪಾಸಿಟಿವ್ ನೆಗೆಟಿವ್ ಇದ್ದೇ ಇರುತ್ತದೆ. ನಾವು ಬದುಕಿನಲ್ಲಿ ಯಾವುದೇ ಸವಾಲುಗಳು ಬರಲೀ, ಪಾಸಿಟಿವ್ ಆಗಿ ಯೋಚನೆಯೊಂದಿಗೆ ಸಂತೃಪ್ತ ಜೀವನ ನಡೆಸೋಣ. ನಮ್ಮ ತಂದೆ ತಾಯಂದಿರು ನಮ್ಮ ಮೇಲೆ ಸಾವಿರಾರು ಕನಸುಗಳನ್ನು ಇಟ್ಟಿರುತ್ತಾರೆ. ಆ ಕನಸಿಗೆ ಚ್ಯುತಿ ಬರದ ಹಾಗೇ ನೆಮ್ಮದಿಯ ಜೀವನ ನಡೆಸೋಣ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಲಂಕಾರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವಲಯಾಧ್ಯಕ್ಷರಾದ ಇಂದು ಶೇಖರ ಶೆಟ್ಟಿ, ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜ್ ನ ಆಡಳಿತಾಧಿಕಾರಿ ಶ್ರೀಪತಿ ರಾವ್, ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲೆ ರೂಪ ಜಿ, ಪ್ರೌಢಶಾಲಾ ವಿಭಾಗದ ಮುಖ್ಯಗುರು ನವೀನ್ ಕುಮಾರ್ ರೈ ಆಲಂಕಾರು ಒಕ್ಕೂಟದ ಅಧ್ಯಕ್ಷೆ ಶಾರದ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಸವಿತ, ಪ್ರೇಮ, ಜನಜಾಗೃತಿ ವೇದಿಕೆಯ ಸದಸ್ಯರಾದ ಮಮತ ಅಂಬರ್ಜೆ, ಮೀನಾಕ್ಷಿ, ಕುಂತೂರು ಒಕ್ಕೂಟದ ಅಧ್ಯಕ್ಷ ಲಕ್ಷ್ಮೀಶ ಶೆಟ್ಟಿ, ಚೆನ್ನಕೇಶವ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಇದರ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ವಲಯ ಮೇಲ್ವಿಚಾರಕಿ ಸುಜಾತ ವಂದಿಸಿ, ಉಪನ್ಯಾಸಕಿ ನಿವ್ಯ ಕಾರ್ಯಕ್ರಮ ನಿರೂಪಿಸಿದರು.
