ಬೂಡಿಯಾರ್ ಪುರುಷೋತ್ತಮ ರೈ ಅವರಿಂದ ಕುರಿಯ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

0

ಮಕ್ಕಳೇ ಗೌರವ ಕೊಡುವ ಪ್ರವೃತ್ತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ-ಪುರುಷೋತ್ತಮ ರೈ

ಪುತ್ತೂರು: ಭೂ ನ್ಯಾಯ ಮಂಡಳಿ ಸದಸ್ಯರು, ಆರ್ಯಾಪು ಗ್ರಾ.ಪಂ ಸದಸ್ಯರೂ ಆಗಿರುವ ಬೂಡಿಯಾರ್ ಪುರುಷೋತ್ತಮ ರೈ ಅವರಿಂದ ಕುರಿಯ ಸ.ಹಿ.ಪ್ರಾ.ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆ ಕಾರ್ಯಕ್ರಮ ಜೂ.19ರಂದು ಶಾಲೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಬೂಡಿಯಾರು ಪುರುಷೋತ್ತಮ ರೈಯವರು, ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಪುಸ್ತಕ ಖರೀದಿಸಲು ಸಮರ್ಥರಿದ್ದಾರೆ, ಆದರೂ ಅನೇಕ ಮಕ್ಕಳ ಮನೆಯಲ್ಲಿ ಕಷ್ಟವಿದೆ ಎಂದು ತಿಳಿದುಕೊಂಡಿದ್ದೇನೆ, ಈ ನಿಟ್ಟಿನಲ್ಲಿ ನಾನು ಎಲ್ಲ ಮಕ್ಕಳಿಗೂ ಪುಸ್ತಕ ವಿತರಿಸುತ್ತಿದ್ದೇನೆ ಎಂದು ಹೇಳಿದರು.


ನಾನು ಅಗರ್ಭ ಶ್ರೀಮಂತನೇನಲ್ಲ, ದೇವರು ಕೊಟ್ಟ ಸಂಪತ್ತಿನಲ್ಲಿ ಸಣ್ಣ ಅಂಶವನ್ನು ಸಮಾಜಕ್ಕೂ ಕೊಡುತ್ತಾ ಬಂದಿದ್ದೇನೆ, ಪ್ರಾಮಾಣಿಕವಾಗಿ ಗಳಿಸಿದ ಹಣದಿಂದ ನಾನು ನನ್ನಿಂದಾದ ಸಮಾಜ ಸೇವೆಯನ್ನು ಮಾಡುತ್ತಿದ್ದೇನೆ ಎಂದರು. ಮಕ್ಕಳೇ ನೀವು ಕಲಿತು ಸಾಧನೆ ಮಾಡಬೇಕು, ನಿಮ್ಮಿಂದ ನಾವು ಬೇರೆ ಏನನ್ನೂ ಬಯಸುವುದಿಲ್ಲ, ಎಲ್ಲರಿಗೂ ಗೌರವ ಕೊಡುವ ಪ್ರವೃತ್ತಿಯನ್ನು ಜೀವನದಲ್ಲಿ ಎಂದೆಂದಿಗೂ ಅಳವಡಿಸಿಕೊಳ್ಳಿ ಎಂದು ಹೇಳಿದರು.

ಸ್ವಾಗತಿಸಿ ಪ್ರಸ್ತಾವನೆಗೈದ ಶಾಲಾ ಪ್ರಭಾರ ಮುಖ್ಯಗುರು ನವೀನ್ ಕುಮಾರ್ ಮಾತನಾಡಿ, ಮಕ್ಕಳ ಶಿಕ್ಷಣದ ವಿಚಾರದಲ್ಲಿ ಕಾಳಜಿ ವಹಿಸಿ ಪ್ರತೀ ವರ್ಷ ಪುಸ್ತಕ ವಿತರಣೆ ಮಾಡುತ್ತಿರುವ ಬೂಡಿಯಾರ್ ಪುರುಷೋತ್ತಮ ರೈ ಸಮಾಜಕ್ಕೆ ಮಾದರಿಯಾಗಿದ್ದಾರೆ, ಶಿಕ್ಷಣಕ್ಕೆ ಸಹಕಾರ ಮಾಡುವುದು ಶ್ರೇಷ್ಠ ಕಾರ್ಯವಾಗಿದ್ದು ಇದರಿಂದ ಮಕ್ಕಳಿಗೆ ಬಹಳಷ್ಟು ಪ್ರಯೋಜನವಿದೆ ಎಂದು ಹೇಳಿದರು.
ಶಾಲಾ ನಾಯಕಿ ಹಿನಾ ಫಾತಿಮಾ ಮಾತನಾಡಿ, ಬೂಡಿಯಾರ್ ಪುರುಷೋತ್ತಮ ರೈಯವರಿಗೆ ಕೃತಜ್ಞತೆ ಸಲ್ಲಿಸಿದರು.

ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ, ಬೂಡಿಯಾರ್ ಪುರುಷೋತ್ತಮ ರೈ ನೇರ ನಡೆನುಡಿಯವರಾಗಿದ್ದು ಬಡವರ ಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದಾರೆ, ಸಮಾಜದಲ್ಲಿ ದುಡ್ಡು ಇರುವವರು ಅನೇಕರಿದ್ದಾರೆ, ಆದರೆ ಜನರ ಸೇವೆ ಮಾಡಲು ದುಡ್ಡಿಗಿಂತ ಮನಸ್ಸು ಮುಖ್ಯ, ಆ ಮನಸ್ಸು ಬೂಡಿಯಾರ್ ಪುರುಷೋತ್ತಮ ರೈಯವರಲ್ಲಿದೆ.ಅನೇಕ ವರ್ಷಗಳಿಂದ ಕುರಿಯ ಶಾಲೆ ಹಾಗೂ ಇಡ್ಯೊಟ್ಟು ಶಾಲೆಗೆ ಪುಸ್ತಕ ವಿತರಿಸುತ್ತಿರುವ ಇವರ ಕಾರ್ಯ ಮಾದರಿಯಾಗಿದೆ, ಇವರ ಇಂತಹ ಕಾರ್ಯ ಇತರರಿಗೂ ಪ್ರೇರಣರೆಯಾಗಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುರಿಯ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ ನಮ್ಮ ಶಾಲೆಗೆ ಅನೇಕ ವರ್ಷಗಳಿಂದ ಪುಸ್ತಕ ವಿತರಿಸುತ್ತಿರುವ ಬೂಡಿಯಾರ್ ಪುರುಷೋತ್ತಮ ರೈಯವರು ನಿಜವಾಗಿಯೂ ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿದ್ದಾರೆ, ಶಾಲೆಗೆ ನಿರಂತರ ಸಹಕಾರ ಕೊಡುತ್ತಿರುವ ಅವರಿಗೆ ನಾವು ಆಭಾರಿಯಾಗಿದ್ದೇವೆ ಎಂದರು. ಪುಸ್ತಕ ಪಡೆದುಕೊಂಡ ಮಕ್ಕಳು ಮತ್ತು ಮಕ್ಕಳ ಪೋಷಕರು ಪುರುಷೋತ್ತಮ ರೈ ಈ ಸಹಕಾರವನ್ನು ಮರೆಯಬಾರದು, ನಾವಂತೂ ಖಂಡಿತಾ ಮರೆಯುವುದಿಲ್ಲ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಕವಿತಾ ಪಿ.ಎನ್ ವಂದಿಸಿದರು. ಶಿಕ್ಷಕಿ ದಿವ್ಯಜ್ಯೋತಿ ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ನಳಿನಿ ಕೆ ಹಾಗೂ ಕಾವ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here