ಪುತ್ತೂರು: ನೋಕಿಪಡಿ ಕ್ರಿಕೆಟರ್ಸ್ ಅಬುಧಾಬಿ ಮತ್ತು ನೆಲ್ಯಾಡಿ, ಸಂತೋಷ್ ಲಾಡ್ ಫೌಂಡೇಶನ್, ಬೆಸ್ಟ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪ್ ಸೈಂಟ್ ಜಾರ್ಜ್ ನೆಲ್ಯಾಡಿ ಹಾಗೂ ಗಲ್ಫ್ ನೆಲ್ಯಾಡಿ ಫ್ರೆಂಡ್ಸ್ ಆಶ್ರಯದಲ್ಲಿ ಬಿಷಪ್ ದಿ.ಮಾರ್ ಪೋಲಿಕಾರ್ಪಸ್ ಗೀ ವರ್ಗಿಸ್, ನಾರಾಯಣ ಮಾಸ್ಟರ್, ಅಬ್ರಹಾಂ ಈಶೋ ಅವರ ಸ್ಮರಣಾರ್ಥ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನೆಲ್ಯಾಡಿ ಸಂತ ಜಾರ್ಜ್ ಪ.ಪೂ ಕಾಲೇಜಿನಲ್ಲಿ ನಡೆಯಿತು.

15 ಶಾಲೆಗಳ ಸುಮಾರು 228 ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ ಸಾಧನೆ ಮಾಡಲು ಬಡವ, ಶ್ರೀಮಂತ ಎನ್ನುವ ವ್ಯತ್ಯಾಸವಿಲ್ಲ, ಬಡ ಕುಟುಂಬದ ವಿದ್ಯಾರ್ಥಿಗಳು ಕೂಡಾ ಕ್ರಿಯಾಶೀಲರಾಗಿ ಯೋಚಿಸುವ ಮೂಲಕ ಐಎಎಸ್, ಐಪಿಎಸ್ ಅಧಿಕಾರಿಗಳಾಗುವ ಗುರಿ ಹೊಂದಿರಬೇಕು ಎಂದು ಹೇಳಿದರು.
ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಸಂತ ಜಾರ್ಜ್ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಅಬ್ರಹಾಂ ವರ್ಗಿಸ್, ಉದ್ಯಮಿ ಮುರಳಿ ನಾಯರ್ ಹೊಸಮಜಲು, ನೆಲ್ಯಾಡಿ ಗ್ರಾ.ಪಂ ಅಧ್ಯಕ್ಷ ಸಲಾಂ ಬಿಲಾಲ್, ರಾಜ್ಯ ಪ್ರಶಸ್ತಿ ಪುರಸ್ಕೃತ ಪೊಲೀಸ್ ಇಸಾಕ್ ಪಡುಬೆಟ್ಟು, ಸಂತ ಜಾರ್ಜ್ ಕಾಲೇಜಿನ ಪ್ರಾಂಶುಪಾಲ ಎಲಿಯಾಸ್ ಎಂ.ಕೆ. ಶುಭ ಹಾರೈಸಿದರು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ, ಗ್ರಾಪಂ ಉಪಾಧ್ಯಕ್ಷೆ ರೇಷ್ಮಾ ಶಶಿ, ಗ್ರಾ.ಪಂ ಸದಸ್ಯರಾದ ಆನಂದ್ ಪಿಲವೂರು, ಮೊಹಮ್ಮದ್ ಇಕ್ಬಾಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸತೀಶ್, ಉದ್ಯಮಿ ಅಬ್ದುಲ್ ಹಮೀದ್ ಮಲ್ಲಿಗೆ ಮಜಲು, ಕೌಕ್ರಾಡಿ ಗಾ.ಪಂ ಮಾಜಿ ಅಧ್ಯಕ್ಷ ಎಂ.ಕೆ ಇಬ್ರಾಹಿಂ, ಸುಧೀರ್ ಕೃಷ್ಣ ಹೊಸಮಜಲು ಮೊದಲಾದವರು ಉಪಸ್ಥಿತರಿದ್ದರು. ಇಸ್ಮಾಯಿಲ್ ನೆಲ್ಯಾಡಿ ಸ್ವಾಗತಿಸಿದರು. ಹಾರಿಸ್ ವಂದಿಸಿದರು. ಮೊಹಮ್ಮದ್ ರಫೀಕ್ ಬೈಲು ಕಾರ್ಯಕ್ರಮ ನಿರೂಪಿಸಿದರು.
ನಾವು ಕಳೆದ ಹತ್ತು ವರ್ಷಗಳಿಂದ ಜಾತಿ, ಮತ, ಧರ್ಮ ನೋಡದೆ ಸಮಾಜದ ಎಲ್ಲಾ ವರ್ಗದ ಅರ್ಹ ಬಡ ವಿದ್ಯಾರ್ಥಿಗಳನ್ನು ಗುರುತಿಸಿ, ಉಚಿತ ನೋಟ್ ಪುಸ್ತಕಗಳನ್ನು ಹಾಗೂ ಸ್ಕೂಲ್ ಫೀಸ್ ನೀಡುತ್ತಾ ಬರುತ್ತಿದ್ದೇವೆ. ಇದಕ್ಕಾಗಿ ಕ್ರಿಕೆಟ್ ಪಂದ್ಯಾಟವನ್ನು ನಡೆಸಿ ಅದರಲ್ಲಿ ಉಳಿಯುವ ಹಣ, ದಾನಿಗಳಿಂದ ಸಂಗ್ರಹಿಸುವ ಹಣ, ಸಂಘ ಸಂಸ್ಥೆಗಳ ಸಹಕಾರ ಮತ್ತು ವಿಶೇಷವಾಗಿ ನಮ್ಮ ಕಾಲೇಜು ಸಹಪಾಠಿಗಳ ವಾಟ್ಸಪ್ ಗ್ರೂಪ್ನ ಆರ್ಥಿಕ ಸಹಾಯದ ಮೂಲಕ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಕಲಿಯಲು ಆಸಕ್ತಿ ಇದ್ದು ಆರ್ಥಿಕವಾಗಿ ಸಬಲರಲ್ಲದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ಭವಿಷ್ಯದ ಜೀವನ ಕಮರಿ ಹೋಗಬಾರದು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದು ನೋಕಿಪಡಿ ಕ್ರಿಕೆಟರ್ಸ್ ಅಬುಧಾಬಿ ಮತ್ತು ನೆಲ್ಯಾಡಿ ಇದರ ಮುಖ್ಯಸ್ಥರಾದ ರಫೀಕ್ ಪ್ರಿಯದರ್ಶಿನಿ ತಿಳಿಸಿದ್ದಾರೆ.
