ಪುತ್ತೂರು; ಪುತ್ತೂರಿನಲ್ಲಿ 2024-25 ನೇ ಸಾಲಿನಲ್ಲಿ ಮಾಡಿರುವ ಹಲವಾರು ಜನಪರ ಸೇವೆಗಳಿಗಾಗಿ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರ ನೇತೃತ್ವದ ಸಮಿತಿಯಿಂದ, ಪಿಡಿಜಿ ಡಾ.ಭಾಸ್ಕರ್ ರವರ ಉಪಸ್ಥಿತಿಯಲ್ಲಿ ಮಂಗಳೂರಿನ ಪಿಲಿಕುಳ ಸ್ಕೌಟ್ ಹಾಗೂ ಗೈಡ್ಸ್ ಸಭಾಭವನದಲ್ಲಿ ಜೂ.21 ರಂದು ನಡೆದ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣಗೆ ಪ್ರತಿಷ್ಠಿತ ಡೈಮಂಡ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸಣ್ಣ ಕ್ಲಬ್ಗಳ ಸಾಲಿನಲ್ಲಿ ಟಾಪ್ 3 ಕ್ಲಬ್ ಇನ್ ಎಂಗೇಜ್ಮೆಂಟ್ ಎಕ್ಸಲೆನ್ಸ್ ಅವಾರ್ಡಿನಲ್ಲಿ ರೋಟರಿ ಅಂತರ್ರಾಷ್ಟ್ರಿಯ ಜಿಲ್ಲೆ 3181 ರಲ್ಲಿ 2 ನೇ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಕ್ಲಬ್ ಅಧ್ಯಕ್ಷರಾಗಿರುವ ಸುರೇಶ್ ಪಿ ಹಾಗೂ ಕಾರ್ಯದರ್ಶಿಯಾಗಿರುವ ಸೆನೋರಿಟಾ ಆನಂದ್ ರವರ ನೇತೃತ್ವದಲ್ಲಿ ಕ್ಲಬ್ 2024-25 ನೇ ಸಾಲಿನಲ್ಲಿ ರೋಟರಿ ಸ್ವರ್ಣ 10ನೇ ವರ್ಷದ ಸಂಭ್ರಮಾಚರಣೆಯನ್ನು ಮಾಡುತ್ತಿದ್ದು ಈ ಪ್ರಯುಕ್ತ ಸುಮಾರು 138 ಕ್ಕೂ ಅಧಿಕ ಜನಪರ ಸೇವೆಗಳನ್ನು ಮಾಡಲಾಗಿತ್ತು. ವಿಶೇಷವಾಗಿ ಹಲವಾರು ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯವನ್ನು ಮಾಡಲಾಗಿದೆ. ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಹಲವಾರು ಕೊಡುಗೆಗಳನ್ನು ನೀಡಲಾಗಿತ್ತು. ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶುಚಿತ್ವಕ್ಕೆ ಆದ್ಯತೆಯನ್ನು ನೀಡಿ ಡೈಯಪರ್ ಬರ್ನಿಂಗ್ ಯಂತ್ರಗಳನ್ನು ನೀಡಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಹಲವು ಬಡವರಿಗೆ ಧನ ಸಹಾಯವನ್ನು ನೀಡಲಾಗಿತ್ತು. ಹಲವು ಶಾಲೆಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಗಿತ್ತು. ಪುತ್ತೂರಿನಲ್ಲಿ ಹಲವಾರು ಪ್ರದೇಶಗಳಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮಗಳನ್ನು ಮಾಡಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಮಹನೀಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಮಾಡಲಾಗಿತ್ತು. ದೇವಸ್ಥಾನ, ದೈವಸ್ಥಾನ ಜಿರ್ಣೋದ್ಧಾರ ಕಾರ್ಯಕ್ರಮಗಳಿಗೂ ವಿಶೇಷ ಧನ ಸಹಾಯವನ್ನು ನೀಡಲಾಗಿತ್ತು. ಅಲ್ಲದೆ ರಕ್ತದಾನ ಶಿಬಿರಗಳನ್ನು ಹಾಗೂ ಆರೋಗ್ಯ ತಪಾಸಣೆ ಶಿಬಿರಗಳನ್ನು ಕೂಡಾ ಕ್ಲಬ್ ವತಿಯಿಂದ ಮಾಡಲಾಗಿತ್ತು.
ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷರಾದ ಸುರೇಶ್ ಪಿ, ನಿಯೋಜಿತ ಅಧ್ಯಕ್ಷ ಸುಭಾಸ್ ರೈ ಬೆಳ್ಳಿಪ್ಪಾಡಿ, ಪೂರ್ವಾಧ್ಯಕ್ಷರಾದ ಭಾಸ್ಕರ ಕೋಡಿಂಬಾಳ, ಸುಂದರ ರೈ ಬಲ್ಕಾಡಿ ಹಾಗೂ ಪ್ರವೀಣ್ ರೈ ಸಾಂತ್ಯ, ದೀಪಕ್ ಬೊಳ್ವಾರು ಇವರು ಹಾಜರಿದ್ದರು.