@ಯೂಸುಫ್ ರೆಂಜಲಾಡಿ
ವಿದ್ಯಾರ್ಥಿಗಳೇ ಹುಷಾರ್..!
ಹದಿಹರೆಯದ ಕಾಲೇಜು ವಿದ್ಯಾರ್ಥಿಗಳು ಕೂಡಾ ಗಾಂಜಾ, ಡ್ರಗ್ಸ್ನಂತಹ ಅಮಲುಯುಕ್ತ ಪದಾರ್ಥಗಳ ಕಡೆ ಆಕರ್ಷಿತರಾಗುತ್ತಾರೆ ಎನ್ನವುದು ದುರಂತ. ಇತ್ತೀಚೆಗೆ ಮಾದಕ ವಸ್ತು ಸಾಗಾಟ ಮತ್ತು ಸೇವನೆಯ ಕಾರಣಕ್ಕೆ ಹಲವು ಕಡೆ ವಿದ್ಯಾರ್ಥಿಗಳು ಪೊಲೀಸ್ ಬಲೆಗೆ ಬಿದ್ದಿರುವ ಪ್ರಸಂಗವೂ ನಡೆದಿದೆ. ಮಾದಕ ವ್ಯಸನದ ಹವ್ಯಾಸ ಒಮ್ಮೆ ಶುರುವಾದರೆ ನಂತರ ಚಟವಾಗಿ ಬೆಳೆಯುತ್ತದೆ. ಅದನ್ನು ವರ್ಜಿಸಬೇಕೆಂದು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗದೇ ಚಡಪಡಿಸುತ್ತಾರೆ. ಈ ಕುರಿತು ವಿದ್ಯಾರ್ಥಿ ಪೋಷಕರೂ, ನಾಗರಿಕ ಸಮಾಜವೂ ಎಚ್ಚೆತ್ತುಕೊಳ್ಳಬೇಕಾಗಿದೆ.
ಮಾದಕ ವ್ಯಸನ ಎನ್ನುವುದು ಈಗ ಸಾಮಾನ್ಯ ವಿಚಾರವಾಗಿ ಬಿಟ್ಟಿದೆಯೋ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ.
ನಾಗರಿಕ ಸಮಾಜದ ಪ್ರಮುಖ ಸಮಸ್ಯೆಗಳಲ್ಲೊಂದಾಗಿರುವ ಮಾದಕ ವ್ಯಸನವು ವರ್ಷಗಳು ಕಳೆದಂತೆ ತನ್ನ ಕದಂಬ ಬಾಹುವನ್ನು ವಿಸ್ತರಿಸಿಕೊಳ್ಳುತ್ತಿದ್ದು ಲಕ್ಷಾಂತರ ಜನರ ಭವಿಷ್ಯವನ್ನು, ಬದುಕನ್ನು ಕತ್ತಲೆಗೆ ದೂಡುತ್ತಿದೆ.

ಡ್ರಗ್ಸ್ ಎನ್ನುವ ಚಟ ಇಂದು ಸಾವಿರಾರು ಜನರನ್ನು ಕೊಲ್ಲದೇ ಕೊಲ್ಲುತ್ತಿದೆ. ಮುಖ್ಯವಾಗಿ ಯುವಕರು ಡ್ರಗ್ಸ್ಗೆ ಎಡಿಕ್ಟ್ ಆಗಿ ತಮ್ಮ ಜೀವನವನ್ನು ನರಕ ಮಾಡಿಕೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿದೆ. ಯುವಕರು ಮಾತ್ರವಲ್ಲ ವಿದ್ಯಾರ್ಥಿಗಳು ಕೂಡಾ ಅಮಲು ಪದಾರ್ಥಗಳ ಚಟಕ್ಕೆ ಬಲಿಬೀಳುತ್ತಿರುವುದನ್ನು ನೋಡುವಾಗ ನಾಗರಿಕ ಸಮಾಜ ಎತ್ತ ಸಾಗುತ್ತಿದೆ ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿದೆ. ಡ್ರಗ್ಸ್ನಿಂದಾಗಿ ಸಮಾಜದಲ್ಲಿ ಅಹಿತಕರ ಘಟನೆಗಳೂ ನಡೆಯುತ್ತಿದೆ. ಗಾಂಜಾದಂತಹ ಮಾದಕ ವಸ್ತುಗಳು ಸಮಾಜದಲ್ಲಿ ಹಲ್ಲೆ, ಕೊಲೆ, ದೊಂಬಿಯಂತಹ ಘಟನೆಗಳಿಗೆ ಕಾರಣವಾಗುತ್ತಿದೆ. ಸಮಾಜವನ್ನು ತಪ್ಪು ದಾರಿಗೆಳೆಯುತ್ತಿರುವ ಮಾದಕ ವಸ್ತುಗಳ ಬಗ್ಗೆ ಸಂಬಂಧಪಟ್ಟವರು ಸರಿಯಾದ ಕ್ರಮ ಜರಗಿಸದೇ ಹೋದಲ್ಲಿ ಭವಿಷ್ಯದಲ್ಲಿ ಇನ್ನಷ್ಟು ಅಪಾಯಕಾರಿ ಪರಿಣಾಮಗಳನ್ನು ಈ ಸಮಾಜ ಎದುರಿಸಬೇಕಾಗುವುದರಲ್ಲಿ ಸಂಶಯವಿಲ್ಲ. ಪ್ರಾರಂಭದಲ್ಲಿ ತಮಾಷೆಗಾಗಿಯೋ, ಮೋಜಿಗಾಗಿಯೋ, ಟೈಂಪಾಸ್ಗಾಗಿಯೋ ಶುರುವಾಗುವ ಮಾದಕ ವ್ಯಸನದ ಚಟ ಕ್ರಮೇಣ ಎಲ್ಲ ವಿಧದ ಡ್ರಗ್ಸ್ಗಳಿಗೂ ಬಲಿಬೀಳುವಂತೆ ಮಾಡುತ್ತದೆ. ಡ್ರಗ್ಸ್ ವಿರುದ್ಧ ಹೋರಾಟ, ಜಾಗೃತಿ ನಡೆಯುತ್ತಿದ್ದರೂ ಕೂಡಾ ಅದನ್ನು ಸಂಪೂರ್ಣ ಮಟ್ಟ ಹಾಕಲು ಇದುವರೆಗೂ ಸಾಧ್ಯವಾಗಿಲ್ಲ. ಭಾರತ ಸೇರಿದಂತೆ ಮುಂದುವರಿದ ರಾಷ್ಟ್ರಗಳಲ್ಲೂ ಮಾದಕ ವ್ಯಸನಕ್ಕೆ ದಾಸರಾಗುತ್ತಿರುವ ಯುವಜನತೆ ಯಥೇಚ್ಚವಾಗಿದ್ದಾರೆ. ಅದರ ಜಾಗೃತಿಗಾಗಿಯೇ ಜೂ.೨೬ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ.
ಡ್ರಗ್ಸ್ ದಂಧೆಗೆ ಕಡಿವಾಣ ಯಾವಾಗ?
ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ, ತೆರೆಮರೆಯಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿರುವ ಮಾದಕ ವಸ್ತುಗಳ ಕಾನೂನು ಬಾಹಿರ ದಂಧೆಗೆ ಕಡಿವಾಣ ಹಾಕಬೇಕಿದೆ. ಪೊಲೀಸ್ ಇಲಾಖೆ ಇಂತಹ ಪ್ರಕರಣಗಳನ್ನು ಅಲ್ಲಲ್ಲಿ ಬೇಧಿಸುತ್ತಿದೆಯಾದರೂ ಪರಿಣಾಮಕಾರಿಯಾಗಿ ಡ್ರಗ್ಸ್ ಮಾಫಿಯಾ ವಿರುದ್ದ ಕಾರ್ಯಾಚರಿಸಲು ಸಾಧ್ಯವಾಗಿಲ್ಲ. ಗಾಂಜಾ ಸಾಗಾಟದಂತಹ ಕೆಲವೊಂದು ಪ್ರಕರಣಗಳನ್ನು ಆಗಾಗ ಪೊಲೀಸರು ಪತ್ತೆ ಹಚ್ಚುವ ಸಂಭವಗಳು ನಡೆಯುತ್ತಿವೆಯಾದರೂ ಅವುಗಳ ಮೂಲ ಪತ್ತೆ ಹಚ್ಚಿ ಅವರುಗಳಿಗೆ ಶಾಶ್ವತ ಇತಿಶ್ರೀ ಹಾಡಲು ಪೊಲೀಸರಿಗೂ ಸಾಧ್ಯವಾದಂತಿಲ್ಲ. ಡ್ರಗ್ಸ್ ಜಾಲ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದ್ದು ಕಾನೂನಿನ ಕಣ್ಣನ್ನು ತಪ್ಪಿಸಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ. ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ಧಾರ್ಮಿಕ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸುವ ಕಾರ್ಯ ನಡೆಸಿದರೂ ಡ್ರಗ್ಸ್ ದಂಧೆ ಮಾತ್ರ ಎಲ್ಲರ ಕಣ್ತಪ್ಪಿಸಿ ತಮ್ಮ ಕಾರ್ಯಾಚರಣೆ ನಡೆಸುತ್ತಲೇ ಇದೆ. ಇದಕ್ಕೆ ಸಂಪೂರ್ಣ ಕಡಿವಾಣ ಇಂದಿನ ತುರ್ತು ಅಗತ್ಯವಾಗಿದೆ.
ಮಾದಕ ವ್ಯಸನದಿಂದ ಕುಟುಂಬವೇ ನಾಶ!
ಒಬ್ಬ ವ್ಯಕ್ತಿ ಮಾದಕ ವ್ಯಸನಿ ಆದರೆ ಆತನ ಕುಟುಂಬ, ಮನೆ ಮಠ ಹೀಗೆ ಎಲ್ಲದರ ನಾಶಕ್ಕೂ ಅದು ಕಾರಣವಾಗುತ್ತದೆ. ಮಾದಕ ವ್ಯಸನವೆನ್ನುವುದು ಒಂದು ಪಿಡುಗಾಗಿದೆ. ಒಳ್ಳೆಯವರಾಗಿದ್ದಾಗ ಆರಂಭಿಸುವ ಸಣ್ಣ ತಪ್ಪು ಅವರನ್ನು ಕ್ರಮೇಣ ಕೆಟ್ಟವರನ್ನಾಗಿ ರೂಪಿಸುತ್ತದೆ. ಮಾದಕ ವ್ಯಸನಗಳು ಒಂದು ರೀತಿಯ ಮಾರಕ ರೋಗವಾಗಿದ್ದು ಅದರಿಂದ ಹೊರಬರುವ ಬಗ್ಗೆ ಪ್ರತಿಜ್ಞೆ ಕೈಗೊಳ್ಳಬೇಕಾಗಿದೆ.
ಸಿಗರೇಟ್, ಬೀಡಿಯಂತಹ ಧೂಮಪಾನ ಕೂಡಾ ಮನುಷ್ಯನ ಹೃದಯವನ್ನು ಆವರಿಸಿ ಕ್ಯಾನ್ಸರ್ನಂತಹ ಮಾರಕ ರೋಗ ಮತ್ತು ಇನ್ನಿತರ ರೋಗಗಳಿಗೆ ಕಾರಣವಾಗುತ್ತದೆ. ಧೂಮಪಾನ ಸೇವನೆ ಕ್ಯಾನ್ಸರ್ಗೆ ಕಾರಣ ಎಂದು ಗೊತ್ತಿದ್ದೂ ಅದನ್ನು ಸೇವನೆ ಮಾಡುವವರು ಇನ್ನಾದರೂ ಚಿಂತಿಸಬೇಕಿದೆ. ಒಟ್ಟಿನಲ್ಲಿ ಮಾದಕ ವ್ಯಸನಗಳ ಬಗ್ಗೆ ಸ್ವಯಂ ಪ್ರತಿಜ್ಞೆ ಕೈಗೊಳ್ಳುವ ಕಾಲ ಸನ್ನಿಹಿತವಾಗಿದೆ.