ಸದಸ್ಯರಿಗೆ 15 ಶೇ.ಡಿವಿಡೆಂಡ್, ರಬ್ಬರ್ಶೀಟ್ ಪ್ರತಿ ಕೆ.ಜಿ.ಗೆ 2 ರೂ.ಬೋನಸ್; ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಘೋಷಣೆ
ನೆಲ್ಯಾಡಿ: ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಜೂ.28ರಂದು ಬೆಳಿಗ್ಗೆ ನೆಲ್ಯಾಡಿಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅವರು ಮಾತನಾಡಿ, ಸಂಘವು ಕಳೆದ 35 ವರ್ಷಗಳಿಂದ ಹಿರಿಯ ಸಹಕಾರಿಗಳ ಮಾರ್ಗದರ್ಶನ ಮತ್ತು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಉತ್ತಮ ಸಂಸ್ಥೆಯಾಗಿ ಬೆಳೆಯುತ್ತಿದೆ. ರಬ್ಬರ್ ಬೆಳೆಗಾರರಿಗೆ ಅತ್ಯುತ್ತಮ ಸೇವೆ ನೀಡುವುದರೊಂದಿಗೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಸಂಘವು 34.06 ಕೋಟಿ ರೂ.ವ್ಯವಹಾರ ಮಾಡಿದ್ದು 50.83 ಲಕ್ಷ ರೂ.ನಿವ್ವಳ ಲಾಭಗಳಿಸಿದೆ. ಈ ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಸಂಘಕ್ಕೆ ರಬ್ಬರ್ ಶೀಟ್ ಮಾರಾಟ ಮಾಡಿದ ಸದಸ್ಯರಿಗೆ ಪ್ರತಿ ಕೆ.ಜಿ.ಗೆ 2 ರೂಪಾಯಿಯಂತೆ ಬೋನಸ್ ನೀಡಲು ತೀರ್ಮಾನಿಸಿದ್ದೇವೆ ಎಂದರು.

ರಬ್ಬರ್ ವ್ಯಾಪಾರದಲ್ಲಿ 1.55 ಕೋಟಿ ರೂ.ಲಾಭ:
ಕಳೆದ ಸಾಲಿನಲ್ಲಿ ಠೇವಣಿ ಸಂಗ್ರಹದಲ್ಲೂ ಹೆಚ್ಚಳವಾಗಿದೆ. ರಬ್ಬರ್ ಕೃಷಿಗೆ ಬೇಕಾದ ಸಲಕರಣೆ, ಅಡಿಕೆ ಕೃಷಿಗೆ ಮೈಲುತುತ್ತು, ರಾಸಾಯನಿಕ ಗೊಬ್ಬರಗಳನ್ನು ವ್ಯವಸ್ಥಿತವಾಗಿ ವಿತರಣೆ ಮಾಡಲಾಗುತ್ತಿದೆ. ಸಂಘದ ಸದಸ್ಯರಿಗೆ ರಬ್ಬರ್ ದಾಸ್ತಾನು, ಸಾಲ ಸೌಲಭ್ಯ ನೀಡಲಾಗುತ್ತಿದೆ. ಆರ್ಟಿಜಿಎಸ್, ನೆಫ್ಟ್ ಸೌಲಭ್ಯ ಒದಗಿಸಲಾಗಿದೆ. ಹವಾಮಾನ ವೈಪರಿತ್ಯ, ಖಾಸಗಿ ವ್ಯಾಪಾರಿಗಳಿಂದ ಸ್ಪರ್ಧೆ ಹಾಗೂ ರಬ್ಬರ್ ಧಾರಣೆಯಲ್ಲಿ ಏರಿಳಿತವಿದ್ದರೂ ಗುಣಮಟ್ಟದ ಸೇವೆ ನೀಡುವ ಮೂಲಕ ರಬ್ಬರ್ ವ್ಯಾಪಾರದಲ್ಲಿ ಕಳೆದ ಸಾಲಿನಲ್ಲಿ 1.55ಕೋಟಿ ರೂ. ಲಾಭಗಳಿಸಲಾಗಿದೆ ಎಂದು ಪ್ರಸಾದ್ ಕೌಶಲ್ ಶೆಟ್ಟಿ ತಿಳಿಸಿದರು.
ಅತ್ಯುತ್ತಮ ಸಂಘವಾಗಿ ಮೂಡಿಬರಬೇಕು:
ಸದಸ್ಯರ ಬೇಡಿಕೆಯಂತೆ ಈ ಬಾರಿ ಜೂನ್ ತಿಂಗಳಿನಲ್ಲಿಯೇ ಮಹಾಸಭೆ ನಡೆಸಲಾಗಿದೆ. ಕಳೆದ 5 ವರ್ಷ ಸದಸ್ಯರಿಂದ ಆಡಳಿತ ಮಂಡಳಿಗೆ ಪೂರ್ಣ ಸಹಕಾರ ದೊರೆತಿದೆ. ಎಲ್ಲರ ಸಹಕಾರದಿಂದ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆದಿದೆ. ಈ ಸಂಘವು ಜಿಲ್ಲೆಯಲ್ಲಿ ಅತ್ಯುತ್ತಮ ಸಹಕಾರ ಸಂಘವಾಗಿ ಮೂಡಿಬರಬೇಕು. ಇದಕ್ಕೆ ಶಕ್ತಿ ತುಂಬುವ ಕೆಲಸ ರಬ್ಬರ್ ಬೆಳೆಗಾರರಿಂದ ಆಗಬೇಕು ಎಂದು ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು.
ಐಸಿಯುನಿಂದ ಹೊರಬಂದಿದ್ದೇವೆ;
ಸಿಬ್ಬಂದಿ ಕಲ್ಯಾಣನಿಧಿ ಮಾದರಿಯಲ್ಲಿಯೇ ರಬ್ಬರ್ ಬೆಳೆಗಾರರ ಕಲ್ಯಾಣ ನಿಧಿಯೂ ಆರಂಭಿಸಬೇಕೆಂದು ಡೆನ್ನಿಸ್ ಪಿಂಟೋ ಕಾಂಚನ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು, ಸಂಘ ಆರ್ಥಿಕವಾಗಿ ಶಕ್ತಿಯುತವಾದಾಗ ಯೋಜನೆ ಜಾರಿಗೊಳಿಸಬಹುದು. ಎಲ್ಲಾ ನಷ್ಟಗಳನ್ನು ಸರಿದೂಗಿಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. ಈಗಷ್ಟೆ ನಾವು ಐಸಿಯುನಿಂದ ಹೊರಬಂದಿದ್ದೇವೆ. ಆಗಂತ ಏಕಾಏಕಿ 100ಮೀ.ಸ್ಪೀಡ್ನಲ್ಲಿ ಹೋಗಲು ಸಾಧ್ಯವಿಲ್ಲ. 50 ಮೀ. ಸ್ಪೀಡ್ನಲ್ಲಿ ಇದ್ದೇವೆ. ರಬ್ಬರ್ ಬೆಳೆಗಾರರ ಎಲ್ಲಾ ಅವಶ್ಯಕತೆಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುತ್ತೇವೆ ಎಂದು ಹೇಳಿದರು.
ಈಶ್ವರಮಂಗಲ ಶಾಖೆಯಲ್ಲಿ ರಸಗೊಬ್ಬರ ಮಾರಾಟ ಮಾಡಿ;
ಈಶ್ವರಮಂಗಲ ಶಾಖೆಯಲ್ಲಿ ರಸಗೊಬ್ಬರ ಮಾರಾಟ ಮಾಡಬೇಕೆಂದು ಸದಸ್ಯ ವಿಕ್ರಮ್ ರೈ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಅಲ್ಲಿ ಜಾಗ, ಕಟ್ಟಡದ ಕೊರತೆ ಇದೆ. ಆ ಭಾಗದ ನಿರ್ದೇಶಕ ಶ್ರೀರಾಮ ಪಕ್ಕಳ ಅವರು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಕಾರ್ಯನಿರತರಾಗಿದ್ದೇವೆ. ಶೀಘ್ರದಲ್ಲೇ ಆರಂಭಿಸುತ್ತೇವೆ ಎಂದರು.
ಟ್ಯಾಪಿಂಗ್ ತರಬೇತಿ ನೀಡಿ;
ರಬ್ಬರ್ ಬೆಳೆಗಾರರಿಗೆ ಟ್ಯಾಪಿಂಗ್ ಬಗ್ಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಸೂಪಿ ಬಿ.ಹೆಚ್.ಈಶ್ವರಮಂಗಲ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ರಬ್ಬರ್ ಬೋರ್ಡ್ ಜೊತೆ ಸೇರಿಕೊಂಡು ರಬ್ಬರ್ ಟ್ಯಾಪಿಂಗ್ ತರಬೇತಿ ಶಿಬಿರ ಆಯೋಜಿಸಲಾಗುವುದು. ಹತ್ತರಿಂದ ಹದಿನೈದು ವರ್ಷ ಮಗುವಿನಂತೆ ಸಲಹಿದ ರಬ್ಬರ್ ಮರಗಳನ್ನು ಕಡಿದು ಇನ್ನೊಂದು ಬೆಳೆಗೆ ಯಾರೂ ಮುಂದಾಗಬಾರದು. ಈ ವರ್ಷ ರಬ್ಬರ್ ಧಾರಣೆ ಇದೆ. ರಬ್ಬರ್ ಬೆಳೆಗಾರರ ಅವಶ್ಯಕತೆಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸುತ್ತೇವೆ ಎಂದರು.
ಪ್ರತಿಭಾವಂತ ಮಕ್ಕಳನ್ನು ಗುರುತಿಸಿ:
ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಮಹಾಸಭೆಯಲ್ಲಿ ಗುರುತಿಸುವ ಕೆಲಸ ಆಗಬೇಕೆಂದು ಜಾನ್ ಪಿ.ಎಸ್.,ಹೇಳಿದರು. ಮುಂದಿನ ವರ್ಷದಿಂದ ಮಕ್ಕಳನ್ನು ಗೌರವಿಸುತ್ತೇವೆ ಎಂದು ಪ್ರಸಾದ್ ಕೌಶಲ್ ಶೆಟ್ಟಿ ಅವರು ಭರವಸೆ ನೀಡಿದರು. ರಬ್ಬರ್ ಹಾಕುವ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಬೇಕೆಂದು ವಿಜಯಕುಮಾರ್ ರೈ ಕೆಯ್ಯೂರು ಒತ್ತಾಯಿಸಿದರು.
ಸ್ಕ್ರಾಪ್ಗೂ ಹೆಚ್ಚಿನ ಬೆಲೆ ನೀಡಿ:
ರಬ್ಬರ್ ಸ್ಕ್ರಾಪ್ಗೆ ಹೊರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತಿದೆ. ಆದ್ದರಿಂದ ಸ್ಕ್ರಾಪ್ಗಳನ್ನು ಹೊರ ಮಾರುಕಟ್ಟೆಯಲ್ಲಿ ಸದಸ್ಯರು ಮಾರಾಟ ಮಾಡುತ್ತಾರೆ ಎಂದು ಪ್ರಸನ್ನಕುಮಾರ್ ಕೆಯ್ಯೂರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಸ್ಕ್ರಾಪ್ ದರದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವಿದೆ. ಇದನ್ನು ಮುಂದೆ ಸರಿದೂಗಿಸುತ್ತೇವೆ ಎಂದರು. ಠೇವಣಿಗೆ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ನೀಡುವಂತೆ ಬಾಳಪ್ಪ ಗೌಡ ಒತ್ತಾಯಿಸಿದರು. ಸಂಘದ ಕಾರ್ಯಚಟುವಟಿಕೆಗೆ ಮೆಚ್ಚುಗೆ ಸೂಚಿಸಿ ಆಡಳಿತ ಮಂಡಳಿಗೆ ಸಂಘದ ಸದಸ್ಯ ಜಿ.ಪಿ.ಶೇಷಪತಿ ರೈಯವರು ಅಭಿನಂದನೆ ಸಲ್ಲಿಸಿದರು.
ರಬ್ಬರ್ ಬೆಳೆಗಾರರಿಗೆ ಗೌರವಾರ್ಪಣೆ:
2024-25ನೇ ಸಾಲಿನಲ್ಲಿ ಸಂಘದ ಪ್ರಧಾನ ಕಚೇರಿ, ಶಾಖೆ ಹಾಗೂ ರಬ್ಬರ್ ಖರೀದಿ ಕೇಂದ್ರಗಳಿಗೆ ಅತೀ ಹೆಚ್ಚು ರಬ್ಬರ್ ಹಾಕಿದ ಸದಸ್ಯರನ್ನು ಸಭೆಯಲ್ಲಿ ಸ್ಮರಣಿಕೆ, ಬಹುಮಾನ ನೀಡಿ ಗೌರವಿಸಲಾಯಿತು. ಪ್ರವೀಣ್ಕುಮಾರ್ ಜಿ.ಗಾಣದಮೂಲೆ, ಗೋಪಾಲಕೃಷ್ಣ ಪಿ., ಮ್ಯಾಥ್ಯು ಎ.ಸಿ.(ನೆಲ್ಯಾಡಿ ಕೇಂದ್ರ ಕಚೇರಿ), ರಾಯ್ ಅಬ್ರಹಾಂ, ತೋಮಸ್ ಜಕಾರಿಯಾ, ಪೂವಪ್ಪ ಕೆ.(ಕಡಬ ಶಾಖೆ), ಗಿರೀಶ್ಕೃಷ್ಣ, ಡಾ.ಪ್ರವೀಣ್ ಪಾರೆ, ಸುರೇಶ್ಕುಮಾರ್ ಸೊರಕೆ (ಪುತ್ತೂರು ಶಾಖೆ), ನವೀನ್ಕುಮಾರ್ ಕೆ.ನೆಟ್ಟಣಿಗೆ, ವಿಕ್ರಮ್ ರೈ, ಕೂಳೂರು ಸುಬ್ರಹ್ಮಣ್ಯ ಭಟ್(ಈಶ್ವರಮಂಗಲ ಶಾಖೆ), ರಶ್ಮಿ ಎಮ್.ರೈ, ಬೇಬಿ ಜೋಸೆಫ್, ಪ್ರಸನ್ನಕುಮಾರ್ ಎ.ಕೆ.,(ಕೆಯ್ಯೂರು ರಬ್ಬರ್ ಖರೀದಿ ಕೇಂದ್ರ), ಜೋನ್ ಪಿ.ಜೆ.ಕೆಡೆಂಬೇಲ್, ಸತ್ಯಾನಂದ ಬಿ., ನಿತ್ಯಾನಂದ ಬಿ.(ಇಚ್ಲಂಪಾಡಿ ರಬ್ಬರ್ ಖರೀದಿ ಕೇಂದ್ರ), ಸುಬ್ರಹ್ಮಣ್ಯ ಶಬರಾಯ, ಮ್ಯಾಥ್ಯು ವಿ.ಎಮ್., ಸಾಬು ಎ.ಎಮ್.(ನೆಲ್ಯಾಡಿ ಉಪಖರೀದಿ ಕೇಂದ್ರ)ರವರಿಗೆ ಬಹುಮಾನ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಹಿರಿಯ ರಬ್ಬರ್ ಬೆಳೆಗಾರರಿಗೆ ಗೌರವ:
ಹಿರಿಯ ರಬ್ಬರ್ ಬೆಳೆಗಾರರಾದ ಅನ್ನಮ್ಮ ಪಿ.ಎಮ್. ಮಣ್ಣಗುಂಡಿ, ಶೇಷಪ್ಪ ಗೌಡ ಕೆ. ಕೋಡಿಂಬಾಳ, ಶ್ರೀನಿವಾಸ ಶೆಟ್ಟಿ ಕಟ್ಟಾರ ಬೆಳ್ಳಿಪ್ಪಾಡಿ, ಶಿವರಾಮಕೃಷ್ಣ ಭಟ್ ಶ್ರೀಶೈಲ ಪಟ್ಟಾಜೆ ಮುಂಡೂರು, ರಾಮಣ್ಣ ಗೌಡ ಕೆಯ್ಯೂರು, ಮುತ್ತಣ್ಣ ಗೌಡ ಒಡ್ಯತಡ್ಕ, ಅಪ್ಪಿ ಕೊಣಾಲು ಅವರಿಗೆ ಸ್ಮರಣಿಕೆ, ಬಹುಮಾನ ನೀಡಿ ಗೌರವಿಸಲಾಯಿತು.
ವೀಲ್ಚಯರ್/ವಾಕಿಂಗ್ ಸ್ಟಿಕ್ ಹಸ್ತಾಂತರ;
7 ಮಂದಿ ಅಶಕ್ತರಿಗೆ ವೀಲ್ ಚೆಯರ್ ಹಾಗೂ ನಡೆಯಲು ಕಷ್ಟಕರವಾಗಿರುವ ಮೂವರಿಗೆ ಈ ಸಂದರ್ಭದಲ್ಲಿ ವಾಕಿಂಗ್ ಸ್ಟಿಕ್ ವಿತರಣೆ ಮಾಡಲಾಯಿತು. ಕೊರಗಪ್ಪ ಕೆಮ್ಮತ್ತಮನೆ ಕೊಳ್ತಿಗೆ, ಅಬ್ದುಲ್ಲ ಜಿ.ಗಾಳಿಮುಖ, ಐಸಾಬಿ ಕುದ್ಕುಳಿ, ಅಬ್ದುಲ್ ಕುಂಞಿ ಆಲಂತಡ್ಕ, ಆಶಾಭವನ್ ವೃದ್ಧಾ ಅನಾಥಾಶ್ರಮ ಇಚ್ಲಂಪಾಡಿ, ಜಿಬಿನ್ ಕುಟ್ರುಪ್ಪಾಡಿ, ಶ್ರೀಧರ ಬಿ.ನಾಗನಡ್ಕ ಇವರಿಗೆ ವೀಲ್ಚೆಯರ್ ನೀಡಲಾಯಿತು. ಪೂವರ ಕರ್ನೂರು, ಉಮ್ಮಾಲಿಯಮ್ಮ ಬಾಂಟಡ್ಕ, ಐಸಮ್ಮ ಬಾಂಟಡ್ಕರವರಿಗೆ ವಾಕಿಂಗ್ ಸ್ಟಿಕ್ ನೀಡಲಾಯಿತು.
ಸಂಘದ ಉಪಾಧ್ಯಕ್ಷ ರೋಯ್ ಅಬ್ರಹಾಂ, ನಿರ್ದೇಶಕರಾದ ಸಿ.ಜೋರ್ಜ್ಕುಟ್ಟಿ, ಎನ್.ವಿ.ವ್ಯಾಸ, ರಮೇಶ ಕಲ್ಪುರೆ, ಸುಭಾಷ್ ನಾಯಕ್ ಎನ್., ಸತ್ಯಾನಂದ ಬಿ., ಶ್ರೀರಾಮ ಪಕ್ಕಳ, ಗಿರೀಶ್ ಸಾಲಿಯಾನ್ ಬಿ., ಜಯರಾಮ ಬಿ., ಅರುಣಾಕ್ಷಿ, ಗ್ರೇಸಿ ನೈನಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯನಿರ್ವಾಹಣಾಧಿಕಾರಿ ಶಶಿಪ್ರಭಾ ಕೆ., ಮಹಾಸಭೆಯ ನೋಟಿಸ್ ಓದಿ ದೃಢೀಕರಿಸಿದರು. ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸ್ವಾಗತಿಸಿ, ಕಾರ್ಯಸೂಚಿ ಮಂಡಿಸಿದರು. ಉಪಾಧ್ಯಕ್ಷ ರೋಯ್ ಅಬ್ರಹಾಂ ವಂದಿಸಿದರು. ಸಿಬ್ಬಂದಿ ರುಕ್ಮಯ ನಿರೂಪಿಸಿದರು. ಸಿಬ್ಬಂದಿಗಳು ಪ್ರಾರ್ಥಿಸಿದರು.
ತೆರಿಗೆ ಪಾವತಿಯಲ್ಲಿ ತಾಲೂಕಿನಲ್ಲಿ ನಂ.1;
ಸಂಘವು 2024-25ನೇ ಸಾಲಿನಲ್ಲಿ 1,36,42,879 ರೂ. ಸರಕಾರಕ್ಕೆ ತೆರಿಗೆ ಪಾವತಿಸಿದೆ. ಪುತ್ತೂರು ತಾಲೂಕಿನಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸುವ ಸಹಕಾರ ಸಂಘಗಳ ಪೈಕಿ ನಮ್ಮ ಸಂಘ ನಂ.1 ಸ್ಥಾನದಲ್ಲಿದೆ. 2024-25ರ ಹಣಕಾಸು ವರ್ಷದಲ್ಲಿ ಕೇಂದ್ರೀಯ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯವರು ತ್ವರಿತ ಫೈಲಿಂಗ್ ಹಾಗೂ ಸರಕು ಮತ್ತು ಸೇವಾ ತೆರಿಗೆ ಪಾವತಿಗಾಗಿ ಮೆಚ್ಚುಗೆಯ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಸಂಘದ ಸದಸ್ಯರು ನಮ್ಮಲ್ಲಿ ಹೆಚ್ಚಿನ ವ್ಯವಹಾರಗಳನ್ನು ಮಾಡಿ ತಮ್ಮ ಪೂರ್ಣ ಸಹಕಾರದಿಂದ ಸಂಘವು ಬಲಿಷ್ಠವಾಗುವಲ್ಲಿ ಸಹಕರಿಸಬೇಕು.
-ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅಧ್ಯಕ್ಷರು
ಗರಿಷ್ಠ 35 ಸಾವಿರ ರೂ.ಬೋನಸ್;
ಸಂಘದ ಮೇಲೆ ವಿಶ್ವಾಸವಿಟ್ಟು ಸದಸ್ಯರು ಸಂಘದೊಂದಿಗೆ ವರ್ಷಪೂರ್ತಿ ವ್ಯವಹಾರ ನಡೆಸಿದ್ದಾರೆ. ರಬ್ಬರ್ ಬೆಳೆಗಾರರು ಸಂಘದ ಬೆನ್ನೆಲುಬು ಆಗಿದ್ದಾರೆ. ರಬ್ಬರ್ ಬೆಳೆಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಕೆ.ಜಿ. ರಬ್ಬರ್ ಶೀಟ್ಗೆ ಈ ವರ್ಷ 2ರೂಪಾಯಿಯಂತೆ ಬೋನಸ್ ನೀಡುತ್ತಿದ್ದೇವೆ. ಇದರಿಂದ ಸದಸ್ಯರಿಗೆ ಕನಿಷ್ಠ ರೂ.3 ಸಾವಿರದಿಂದ ಗರಿಷ್ಠ 35 ಸಾವಿರ ರೂ. ತನಕ ಬೋನಸ್ ಲಭಿಸಲಿದೆ. ಒಟ್ಟು 6,49,337 ರೂ. ಸದಸ್ಯರಿಗೆ ಬೋನಸ್ ರೂಪದಲ್ಲಿ ನೀಡುತ್ತಿದ್ದೇವೆ ಎಂದು ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು.
ಕೆಡಿಪಿ ಸದಸ್ಯರಿಗೆ ಸನ್ಮಾನ;
ಸಂಘದ ನಿರ್ದೇಶಕರಾಗಿದ್ದು ಕಡಬ ತಾ.ಪಂ.ಕೆಡಿಪಿ ಸದಸ್ಯರಾಗಿ ಆಯ್ಕೆಗೊಂಡಿರುವ ಗಿರೀಶ್ ಸಾಲಿಯಾನ್ ಬಿ. ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. 2024-25ನೇ ಸಾಲಿನಲ್ಲಿ ಅತ್ಯುತ್ತಮ ವ್ಯವಹಾರ ನಡೆಸಿರುವುದಕ್ಕಾಗಿ ಈಶ್ವರಮಂಗಲ ಶಾಖೆಯ ಸಿಬ್ಬಂದಿಗಳನ್ನು ಗೌರವಿಸಲಾಯಿತು.