ಕ್ಷಿಪಣಿ ಉರುಳಿಸಿದಂತೆ ಬಿಜೆಪಿಗರು ಬಿಟ್ಟಸುಳ್ಳನ್ನು ಹೊಡೆದುರುಳಿಸಿದ್ದೇವೆ: ಅಶೋಕ್ ರೈ
ಪುತ್ತೂರು: ಕ್ಷಿಪಣಿಯನ್ನು ಹೊಡೆದುರುಳಿಸಿದಂತೆ ಬಿಜೆಪಿಯವರು ಗ್ರಾಪಂ ಕಚೇರಿಗಳಮುಂದೆ ಗಾಳಿಯಲ್ಲಿ ತೇಲಿಬಿಟ್ಟ 13 ಬಿಟ್ಟ ಸುಳ್ಳನ್ನು ಹೊಡೆದು ಉರುಳಿಸಿದ್ದೇವೆ, ಇನ್ನು ಎಲ್ಲಿ ಸುಳ್ಳು ಬಿಟ್ಟರೂ ಅದಕ್ಕೆ ತಕ್ಕ ಉತ್ತರವನ್ನು ನೀಡಿಯೇ ಸಿದ್ದ ಎಂದು ಶಾಸಕ ಅಶೋಕ್ ರೈ ಹೇಳಿದರು.ಅವರು ಹಿರೆಬಂಡಾಡಿಯಲ್ಲಿ ನಡೆದ ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಎರಡು ದಿನದಲ್ಲಿ 14 ಕಡೆಗಳಲ್ಲಿ ಜಾಗೃತಿ ಸಭೆ ನಡೆಸಿದ್ದೇವೆ,ಬಿಜೆಪಿ ಬಿಟ್ಟ ಸುಳ್ಳನ್ನು ಒಡೆದು ಸತ್ಯವನ್ನು ಅನಾವರಣ ಮಾಡಿದ್ದೇವೆ ,ಇನ್ನು ಮುಂದೆ ಬಿಜೆಪಿಯವರು ಸುಳ್ಳು ಹೇಳಲು ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಹೇಳಿದರು.
ಮಾಜಿ ಶಾಸಕರೇ ನಿಮ್ಮ ಗ್ರಾಮದಲ್ಲಿ ಬಡವರಿಗೆ ನಿವೇಶನ ಕೊಟ್ಟಿಲ್ಲ ಯಾಕೆ?
ಹಿರೆಬಂಡಾಡಿ ಗ್ರಾಮದಲ್ಲಿ ನಿವೇಶನಕ್ಕೆ ಗ್ರಾಮಸ್ಥರು ಅರ್ಜಿ ಹಾಕಿದರೂ ಯಾರಿಗೂ ನಿವೇಶನ ಕೊಟ್ಟಿಲ್ಲ,ಜಾಗ ಇಲ್ಲ ಎಂದು ಸುಳ್ಳು ಹೇಳಿದ ಬಿಜೆಪಿಯವರು ಗ್ರಾಮಸ್ಥರನ್ನೇ ಮೋಸ ಮಾಡಿದ್ದಾರೆ. ಗ್ರಾಮದಲ್ಲಿ ಎರಡೂವರೆ ಎಕ್ರೆ ಜಾಗ ಗುರುತಿಸಿದ್ದು ಅದನ್ನು ಸೈಟ್ ಮಾಡಿ ಬಡವರಿಗೆ ಕೊಡುತ್ತೇನೆ ಎಂದು ಹೇಳಿದ ಶಾಸಕರು, ಮಾಜಿ ಶಾಸಕರ ಗ್ರಾಮದಲ್ಲೇ ಮಾಜಿ ಶಾಸಕರ ಹೆಸರು ಹೇಳದೆ ಇಲ್ಲಿನವರೇ ಶಾಸಕರಾಗಿದ್ದರೂ ಸ್ವಂತ ಗ್ರಾಮಸ್ಥರಿಗೆ ಏನು ಕೊಟ್ಟಿದ್ದಾರೆ, ಗ್ರಾಮದವರ ಅಕ್ರಮ ಸಕ್ರಮವನ್ನೇ ಮಾಡಿಲ್ಲ ಯಾಕೆ ಎಂದು ಶಾಸಕರು ಪ್ರಶ್ನಿಸಿದರು.
ಮುಂದೆ ಪ್ರತೀ ಬೂತ್ಮಟ್ಟದಲ್ಲಿ ಸಭೆ
ಈಗ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿದ್ದು ಮುಂದೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಬಿಜೆಪಿಗರ ಸುಳ್ಳಿನ ಬಂಡವಾಳವನ್ನು ಬಯಲು ಮಾಡುತ್ತೇವೆ. ಧರ್ಮದ ಹೆಸರಿನಲ್ಲಿ ಪ್ರಚೋದನೆ ಮಾಡಿ ಲಾಭ ಪಡೆಯುತ್ತಿದ್ದ. ಬಿಜೆಪಿಯ ಸುಳ್ಳು ಇನ್ನು ನಡೆಯುವುದಿಲ್ಲ. ಪ್ರಚೋದನೆ ಮಾಡಿದರೆ ಕೇಸು ದಾಖಲಾಗುತ್ತದೆ, ಚಡ್ಡಿಯಲ್ಲಿ ನಿಲ್ಲಿಸಿ ಪೊಟೋ ತೆಗೆಯುತ್ತಾರೆ. ಹೊಸ ಎಸ್ ಪಿ ಬಂದ ಮೇಲೆ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ ಎಂದು ಹೇಳಿದರು.
ಪುತ್ತೂರು ಅಭಿವೃದ್ದಿಯಾಗುತ್ತಿದೆ: ಎಂ ಎಸ್ ಮಹಮ್ಮದ್
ಪುತ್ತೂರು ಅಭಿವೃದ್ದಿಯಾಗುತ್ತಿದೆ, ಮೆಡಿಕಲ್ ಕಾಲೇಜು ಮಂಜೂರಾಗಿದೆ, ದೇವಸ್ಥಾನ ಅಭಿವೃದ್ದಿಯಾಗಿದೆ ಎಲ್ಲಾ ಕ್ಷೇತ್ರದಲ್ಲೂ ಶಾಸಕರು ಮಿಂಚುತ್ತಿದ್ದಾರೆ ಇದನ್ನು ಸಹಿಸದ ಬಿಜೆಪಿ ಸುಳ್ಳು ಹೇಳುವ ಮೂಲಕ ಅಪಪ್ರಚಾರ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಹೇಳಿದರು.
ಮುಂದಿನ ಮೂರು ವರ್ಷದಲ್ಲಿ ಪುತ್ತೂರಿನ ಸಮಗ್ರ ಅಭಿವೃದ್ದಿಯಾಗಲಿದೆ,ಇದನ್ನು ಸಹಿಸುವ ಶಕ್ತಿ ಬಿಜೆಪಿಯವರಿಗೆ ಭಗವಂತ ಕರುಣಿಸಲಿ ಎಂದು ಹೇಳಿದರು. ಬಡವರಿಗೆ ಜಿಲ್ಲೆಯಲ್ಲಿ ಯಾವ ಶಾಸಕರು ಬಡವರಿಗೆ ನೆರವು ನೀಡುವ ಕೆಲಸ ಮಾಡಿಲ್ಲ, ಪುತ್ತೂರಿನ ಶಾಸಕರು ಮಾಡಿರುವ ಬಡವರ ಪರ ಕೆಲಸವನ್ನು ಕಂಡು ಜನ ಸಂತುಷ್ಟರಾಗಿದ್ದಾರೆ ಎಂದು ಎಂ ಎಸ್ ಹೇಳಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸೀಫ್ ನಿಕಟಪೂರ್ವ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಕರೀಂ ಕುದ್ದುಪದವು, ಹಿರೆಬಂಡಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಗೌಡ ಪಟ್ಟಾರ್ತಿ, ಗ್ರಾಪಂ ಸದಸ್ಯ ಸತೀಶ್, ಬೂತ್ ಅಧ್ಯಕ್ಷ ಶೌಕತ್ ,ನಝೀರ್ ಮಠ, ಮುರಳೀದರ್ ರೈ ಮಠಂತಬೆಟ್ಟು, ಗ್ಯಾರಂಟಿ ಸಮಿತಿಅಧ್ಯಕ್ಷ ಉಮಾನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.