ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 40ನೇ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸಂಪ್ಯ ಹಾಗೂ ಆರೋಗ್ಯ ರಕ್ಷಾ ಸಮಿತಿ ಇದರ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಉಚಿತ ವೈದ್ಯಕೀಯ ಶಿಬಿರದ 40ನೇ ಶಿಬಿರವು ಜು.6ರಂದು ದೇವಸ್ಥಾನದಲ್ಲಿ ನಡೆಯಿತು.


ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸುಳ್ಯ ಕೆವಿಜಿ ಆಸ್ಪತ್ರೆಯ ವೈದ್ಯ ಡಾ.ವೇಣುಗೋಪಾಲ ಮಾತನಾಡಿ, ದೇವಸ್ಥಾನದಲ್ಲಿ ಡಾ.ಸುರೇಶ್ ಪುತ್ತೂರಾಯರವರ ನೇತೃತ್ವದಲ್ಲಿ ಕಳೆದ 40 ತಿಂಗಳುಗಳಿಂದ ಶಿಬಿರವು ಯಶಸ್ವಿಯಾಗಿ ನಡೆಸುವ ಮುಖಾಂತರ ಭಕ್ತಾದಿಗಳಿಗೆ ತಮ್ಮ ಆರೋಗ್ಯ ರಕ್ಷಣೆಯಲ್ಲಿ ಬಹಳಷ್ಟು ಸಹಕಾರಿಯಾಗಿದೆ. ಈ ಶಿಬಿರದಲ್ಲಿ ನನಗೂ ಜನರ ಸೇವೆ ಮಾಡುವ ಅವಕಾಶ ದೊರೆತಿದ್ದು ಅವಕಾಶ ದೊರೆತಿದೆ. ಶಿಬಿರದಲ್ಲಿ ಪ್ರತಿಯೊಬ್ಬರೂ ಉತ್ತಮ ಬಾಂಧವ್ಯದಿಂದ ಪಾಲ್ಗೊಳುತ್ತಿದ್ದು ಈ ಶಿಬಿರವು ನಿರಂತರವಾಗಿ ನಡೆಯಲಿ ಎಂದರು.


ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಇಂದಿನ ಜೀವನ ಶೈಲಿಯ ಬದಲಾವಣೆಯಿಂದ ಕೆಲವೊಂದು ಕಾಯಿಲೆಗಳು ಉಂಟಾಗುತ್ತಿದೆ. ನಮ್ಮ ಆರೋಗ್ಯದ ರಕ್ಷಣೆ ನಮ್ಮ ಕೈಯಲ್ಲೇ ಇದ್ದು ದೇಹಕ್ಕೆ ಕಾಯಿಲೆ ಬಾರದಂತೆ ಮುಂಜಾಗ್ರತೆ ವಹಿಸಬೇಕು. ಮಧುಮೇಹ, ಅಧಿಕರಕ್ತದ ಒತ್ತಡಗಳನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಕೊಂಡು ಅವುಗಳನ್ನು ನಿಯಂತ್ರಣದಲ್ಲಿಡಬೇಕು. ವೈದ್ಯರ ಸಲಹೆಗಳನ್ನು ಪಾಲಿಸಿಕೊಂಡಾಗ ಉತ್ತಮ ಆರೋಗ್ಯಕರ ಜೀವನ ಸಾಧ್ಯವಿದೆ ಎಂದರು.
ಫಿಸಿಯೋತೆರಫಿ ತಜ್ಞ ಡಾ.ಚಿಂತನ್, ಮೊಟ್ಟೆತ್ತಡ್ಕ ಐಕ್ಯಕಲಾ ಸೇವಾ ಟ್ರಸ್ಟ್‌ನ ಚೇತನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಆರೋಗ್ಯ ರಕ್ಷಾ ಸಮಿತಿ ಕಾರ್ಯದರ್ಶಿ ಶಶಿಕಲಾ ನಿರಂಜನ ರೈ ಪ್ರಾರ್ಥಿಸಿದರು. ಅಧ್ಯಕ್ಷ ಉದಯ ಕುಮಾರ್ ರೈ ಸಂಪ್ಯ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿ, ನವಚೇತನ ಯುವಕ ಮಂಡಲದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು.


40ನೇ ಶಿಬಿರದಲ್ಲಿ ವಿಶೇಷವಾಗಿ ಫಿಜಿಯೋಥೆರಪಿಯನ್ನು ಆಯೋಜಿಸಲಾಗಿತ್ತು. ಉಳಿದಂತೆ ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ ನಡೆಸಿ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ನೂರಾರು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ನವಚೇತನ ಯುವಕ ಮಂಡಲ ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಐಕ್ಯ ಕಲಾ ಸೇವಾ ಟ್ರಸ್ಟ್ ಮೊಟ್ಟೆತ್ತಡ್ಕ, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಪುತ್ತೂರು ಹಾಗೂ ಹಲವು ಔಷಧಿ ಕಂಪೆನಿಗಳು ಮತ್ತು ಭಕ್ತಾದಿಗಳು ಶಿಬಿರದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here