ನೆಲ್ಯಾಡಿ: ಭಾರೀ ಗಾಳಿ ಹಾಗೂ ಮಳೆಗೆ ಬಜತ್ತೂರು ಗ್ರಾಮದ ನೀರಕಟ್ಟೆ ಬಸ್ನಿಲ್ದಾಣ ಬಳಿಯ ಮರವೊಂದು ಮುರಿದು ರಸ್ತೆಗೆ ಬಿದ್ದ ಘಟನೆ ಜು.26ರಂದು ಮಧ್ಯಾಹ್ನ ನಡೆದಿದೆ.
ಮರ ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೂ ತುಸು ಅಡಚಣೆ ಉಂಟಾಗಿತ್ತು. ಮರ ಬೀಳುವ ಸಂದರ್ಭದಲ್ಲಿ ಇದರ ಅಡಿಯಲ್ಲೇ ಇಬ್ಬರು ವ್ಯಕ್ತಿಗಳು ನಿಂತಿದ್ದು ಮರ ಬೀಳುತ್ತಿರುವುದು ಅರಿವಿಗೆ ಬರುತ್ತಿದ್ದಂತೆ ಓಡಿ ಅಪಾಯದಿಂದ ಪಾರಾಗಿದ್ದಾರೆ. ಈ ಬಸ್ನಿಲ್ದಾಣದ ಬಳಿ ಇನ್ನೂ ಎರಡು ಮರಗಳು ಅಪಾಯಕಾರಿಯಾಗಿದೆ. ಇಲ್ಲಿ ಸದಾ ಜನರ ಓಡಾಟವಿರುತ್ತದೆ. ವಾಹನಗಳಿಗಾಗಿ ಈ ಮರದಡಿಯಲ್ಲೇ ನಿಂತು ಜನರು ಕಾಯುತ್ತಿರುತ್ತಾರೆ. ಅಪಾಯ ಸಂಭವಿಸುವ ಮುನ್ನ ಈ ಎರಡು ಮರಗಳನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
