ಪುತ್ತೂರು: ಪುತ್ತೂರು ಹೆಚ್ಪಿಆರ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜು ವತಿಯಿಂದ ಜು.30 ರಂದು ಈಶ್ವರಮಂಗಲ ಮರಕಡ ಗದ್ದೆಯಲ್ಲಿ ವಿವಿಧ ಕ್ರೀಡೆಗಳೊಂದಿಗೆ ಕೆಸರ್ದ ಗೊಬ್ಬು ಕಾರ್ಯಕ್ರಮ ನಡೆಯಿತು.
ಶ್ರೀಶಕುಮಾರ್ ಮರಕಡ ಇವರು ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿಬಳಿಕ ಮಾತನಾಡಿ, ಇಂದಿನ ಮಕ್ಕಳಿಗೆ ಪುರಾತನ ಪದ್ಧತಿಗಳನ್ನು ನೆನಪಿಸುವ ಕೆಲಸ ಮತ್ತು ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಂಸ್ಕಾರ ಸಂಸ್ಕೃತಿ ದೊರೆಯದೆ ಇರುವ ಸಮಯದಲ್ಲಿ ಕೆಸರುಗದ್ದೆಯ ಕ್ರೀಡೆಯ ಮೂಲಕ ಅರಿವು ಮೂಡಿಸಬಹುದು ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ರವಿ ಪುತ್ಯಾಳ ಹಾಗೂ ವೇದಿಕೆಯಲ್ಲಿ ಗಿರೀಶ್ ಮರಕಡ, ಜನಾರ್ಧನ ಮಡ್ಯಾಳ ಮೂಲೆ, ಸಂಜೀವ ಮರಕಡ ಹಾಗೂ ಸಂಸ್ಥೆಯ ಪ್ರಾಂಶುಪಾಲೆಯಾದ ಇವ್ನೀಸ್ ಡಿಸೋಜಾ, ಉಪನ್ಯಾಸಕ ದಿಶಾಂತ್, ಪ್ರನೀತ್, ರೇಣುಕಾ ಕೆ ಮತ್ತು ಪ್ರಮೀಳಾ ಇವರು ಉಪಸ್ಥಿತರಿದ್ದರು.

ವಸಂತ ಮಡ್ಯಾಳ ಮೂಲೆ ಇವರು ಕ್ರೀಡಾಕೂಟದ ನಿರ್ಣಾಯಕರಾಗಿ ಸಹಕರಿಸಿದರು. ನಂತರ ನಡೆದ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗಾಗಿ ಗೂಟದ ಓಟ, ಹಗ್ಗಜಗ್ಗಾಟ, ವಾಲಿಬಾಲ್, ತ್ರೋಬಾಲ್, ನಿಧಿ ಹುಡುಕಾಟ ಮೊದಲಾದ ಆಟೋಟಗಳು ನಡೆಯಿತು.
ವಿದ್ಯಾರ್ಥಿಗಳೆಲ್ಲರೂ ಉತ್ಸಾಹದಲ್ಲಿ ಭಾಗವಹಿಸಿ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು. ಸಂಜೆ ನಡೆದ ಸಮಾರಂಭದಲ್ಲಿ ವಿವಿಧ ಕ್ರೀಡೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾಕೂಟವನ್ನು ಉಪನ್ಯಾಸಕಿಯಾದ ಜಲಜ ಎಸ್.ಎ ಇವರು ನಿರೂಪಿಸಿದರು.