ಕಾರ್ಯದರ್ಶಿ:ಬಿ.ಟಿ ಮಹೇಶ್ಚಂದ್ರ ಸಾಲಿಯಾನ್,ಕೋಶಾಧಿಕಾರಿ:ಜನಾರ್ದನ ಪೂಜಾರಿ ಪದಡ್ಕ
ಪುತ್ತೂರು: ಅವಿಭಜಿತ ಪುತ್ತೂರು ತಾಲೂಕು ಬಿಲ್ಲವ ಸಂಘದ 2025-28ನೇ ಸಾಲಿನ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ, ಉದ್ಯಮಿ ಸತೀಶ್ ಕುಮಾರ್ ಕೆಡಂಜಿರವರು ಮೂರನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಕೋಶಾಧಿಕಾರಿಯಾಗಿ ಜನಾರ್ದನ ಪೂಜಾರಿ ಪದಡ್ಕ, ಪ್ರಥಮ ಉಪಾಧ್ಯಕ್ಷರಾಗಿ ಚಿದಾನಂದ ಸುವರ್ಣ, ದ್ವಿತೀಯ ಉಪಾಧ್ಯಕ್ಷೆಯಾಗಿ ಪುಷ್ಪಾವತಿ ಬಿ.ಎಂ, ಜೊತೆ ಕಾರ್ಯದರ್ಶಿಯಾಗಿ ಪುರುಷೋತ್ತಮ ಬರೆಂಬೆಟ್ಟುರವರು ಆಯ್ಕೆಯಾಗಿದ್ದಾರೆ.
ಆ.6 ರಂದು ಸಂಘದ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ, ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಮೋನಪ್ಪ ಪೂಜಾರಿ ಕಾರ್ಯನಿರ್ವಹಿಸಿದರು.
ಕಾರ್ಯದರ್ಶಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್:
ಮುಂಡೂರು ಗ್ರಾಮದ ನಡುಬೈಲುಗುತ್ತು ನಿವಾಸಿಯಾಗಿರುವ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್ರವರು ಮಹಾನ್ ರಕ್ತದಾನಿಯಾಗಿದ್ದು 67 ಬಾರಿ ರಕ್ತದಾನ ಮಾಡಿರುತ್ತಾರೆ.ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಇವರು. ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಮುಂಡೂರು ಗ್ರಾ.ಪಂನಲ್ಲಿ ಮೂರು ಅವಧಿಯಲ್ಲಿ ಸದಸ್ಯರಾಗಿ, ರೆಡ್ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ನ ಅಧ್ಯಕ್ಷರಾಗಿ, ರೋಟರ್ಯಾಕ್ಟ್ ಜಿಲ್ಲೆ 3180 ಇದರ ಪತ್ರಿಕಾ ಸಂಪಾದಕರಾಗಿ, ಸಂಯೋಜಕರಾಗಿ, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾಗಿ, ಯುವವಾಹಿನಿ ಕೇಂದ್ರ ಸಮಿತಿ ಸುಳ್ಯ ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ, ಕೇಂದ್ರ ಸಮಿತಿಯ ವಿವಿಧ ಪದಾಧಿಕಾರಿಯಾಗಿ, ತಾಲೂಕು ಬಿಲ್ಲವ ಸಂಘದ ಗ್ರಾಮ ಸಮಿತಿಗಳ ಚಾಲನೆಯ ಕಾರಣಕರ್ತರಾಗಿ, ನವೋದಯ ಸ್ವ-ಸಹಾಯ ಗುಂಪುಗಳ ತಾಲೂಕು ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ, ಬಿಲ್ಲವ ಮಹಾಮಂಡಲದಿಂದ ಸುಳ್ಯ ತಾಲೂಕು ಸಂಘಟನಾ ಜವಾಬ್ದಾರಿ, ಪಂಚಾಯತ್ ಜನಪ್ರತಿನಿಧಿಗಳ ತಾಲೂಕು ಒಕ್ಕೂಟದ ಕೋಶಾಧಿಕಾರಿಯಾಗಿ ಪುತ್ತೂರು ತಾಲೂಕು ಬಿಲ್ಲವ ಸಂಘದ ಜತೆಕಾರ್ಯದರ್ಶಿಯಾಗಿ, ಎರಡು ಬಾರಿ ಕೋಶಾಧಿಕಾರಿಯಾಗಿ, ಗುರುಮಂದಿರದ ಸದಸ್ಯರಾಗಿ. ಮುಂಡೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ,ವಲಯ ಸಂಚಾಲಕರಾಗಿ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಜತೆ ಕಾರ್ಯದರ್ಶಿಯಾಗಿ, ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಷಷ್ಠಿ ಸಮಿತಿಯಲ್ಲಿ ಎರಡು ಬಾರಿ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸದಸ್ಯರಾಗಿ, ಪುತ್ತೂರು ತುಳು ಕೂಟದ ನಿರ್ದೇಶಕರಾಗಿ, ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.ಪ್ರಸ್ತುತ ಪುತ್ತೂರು ಸೈಂಟ್ ವಿಕ್ಟರ್ಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಮತ್ತು ಸೈಂಟ್ ವಿಕ್ಟರ್ಸ್ ಆಂಗ್ಲ ಮಾಧ್ಯಮ ಹೈಸ್ಕೂಲ್ ಪುತ್ತೂರು ಇದರ ಶಿಕ್ಷಕ ರಕ್ಷಕ ಸಂಘದ ಸದಸ್ಯರಾಗಿ. ಪುತ್ತೂರು ರೆಡ್ ಕ್ರಾಸ್ ಸಮಿತಿಯ ಆಡಳಿತ ಸಮಿತಿಯ ಸದಸ್ಯರಾಗಿ ಸೇರಿದಂತೆ ಹಲವು ಸಮಿತಿಗಳಲ್ಲಿ ಸಕ್ರಿಯವಾಗಿದ್ದಾರೆ.
ಕೋಶಾಧಿಕಾರಿ ಜನಾರ್ದನ ಪೂಜಾರಿ ಪದಡ್ಕ:
ಕೋಶಾಧಿಕಾರಿಯಾಗಿ ಆಯ್ಕೆಯಾದ ಜನಾರ್ದನ ಪೂಜಾರಿ ಪದಡ್ಕರವರು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಸದಸ್ಯರಾಗಿ, ಸುಳ್ಯಪದವು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ, ಗೆಜ್ಜೆಗಿರಿ ನೇಮೋತ್ಸವ ಸಮಿತಿ ಕಾರ್ಯದರ್ಶಿಯಾಗಿ, ಪಡುಮಲೆ ಗೋಕರ್ಣ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಉಪಾಧ್ಯಕ್ಷ ಚಿದಾನಂದ ಸುವರ್ಣ:
ಆರ್ಯಾಪು ಗ್ರಾಮದ ಗೆಣಸಿನಕುಮೇರು ನಿವಾಸಿ, ಪ್ರಗತಿಪರ ಕೃಷಿಕರಾದ ಚಿದಾನಂದ ಸುವರ್ಣರವರು ಕಳೆದ ಸಾಲಿನಲ್ಲಿ ಕಾರ್ಯದರ್ಶಿಯಾಗಿದ್ದು, ಕುಂಜೂರುಪಂಜ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ, ಸ್ವಾಭಿಮಾನಿ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿ, ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ವಳತ್ತಡ್ಕ ಆದಿಶಕ್ತಿ ಯುವಕ ಮಂಡಲದ ಅಧ್ಯಕ್ಷರಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಜೂರುಪಂಜ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಉಪಾಧ್ಯಕ್ಷೆ ಪುಷ್ಪಾವತಿ ಬಿ.ಎಂ:
ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಸವಣೂರು ಕೇಕುಡೆ ನಿವಾಸಿಯಾದ ಪುಷ್ಪಾವತಿ ಕೇಕುಡೆ ಇವರು ಮಾಸ್ಟರ್ ಅಥ್ಲೆಟಿಕ್ ಫೇಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ 45ನೇ ರಾಷ್ಟ್ರಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದ ಓಟ, ಹರ್ಡಲ್ಸ್ , ಡಿಸ್ಕಸ್, ಜಾವೆಲಿನ್ ವಿಭಾಗದಲ್ಲಿ ರಾಷ್ಟ್ರಮಟ್ಟ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಪದಕವನ್ನು ಗಳಿಸಿ ಅರ್ಹವಾಗಿ 2025 ನವೆಂಬರ್ ನಲ್ಲಿ ನಡೆಯಲಿರುವ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸುವ ಅರ್ಹತೆಯನ್ನು ಗಿಟ್ಟಿಸಿಕೊಂಡಿರುತ್ತಾರೆ. ಇವರು ಸವಣೂರು ಆದರ್ಶ ಶ್ರೀ ಶಕ್ತಿ ಗೊಂಚಲು ಇದರ ಪ್ರತಿನಿಽಯಾಗಿ, ಸವಣೂರು ಮುಗೇರು ಮಹಾವಿಷ್ಣು ದೇವಸ್ಥಾನದ ಮಹಿಳಾ ಭಜನಾ ಮಂಡಳಿಯ ಕಾರ್ಯದರ್ಶಿಯಾಗಿ, ಸವಣೂರು ಉನ್ನತ ಪ್ರಾಥಮಿಕ ಶಾಲೆಯ ಮಾಜಿ ಮಾಜಿ ಅಧ್ಯಕ್ಷರಾಗಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು ಇಲ್ಲಿನ ವಿದ್ಯಾರ್ಥಿಗಳ ಪೋಷಕರ ಸಮಿತಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಜೊತೆ ಕಾರ್ಯದರ್ಶಿ ಪುರುಷೋತ್ತಮ ಬರೆಂಬೆಟ್ಟು:
ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಪುರುಷೋತ್ತಮ ಬರೆಂಬೆಟ್ಟುರವರು ಹಳೇನೇರಂಕಿ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ವಿಷ್ಣುಮೂರ್ತಿ ಭಜನಾ ಮಂಡಳಿ ಸಂಚಾಲಕರಾಗಿ, ಸತ್ಯಸಾಯಿ ಸೇವಾ ಟ್ರಸ್ಟ್ ಮೂಲಕ ಹಲವಾರು ಫಲಾನುಭವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವಿಕೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
73 ಮಂದಿ..
ಪುತ್ತೂರು ಹಾಗೂ ಕಡಬ ತಾಲೂಕುಗಳನ್ನೊಳಗೊಂಡ 80 ಗ್ರಾಮಗಳು, 55 ಗ್ರಾಮ ಸಮಿತಿಗಳ ಅಧ್ಯಕ್ಷರು, 12 ವಲಯಗಳ ಸಂಚಾಲಕರು, 5 ಮಂದಿ ಸಂಘ-ಸಂಸ್ಥೆಯ ಪ್ರತಿನಿಧಿಗಳು, ಪುತ್ತೂರು, ಉಪ್ಪಿನಂಗಡಿ, ಕಡಬ ಯುವವಾಹಿನಿ ಘಟಕದ ಅಧ್ಯಕ್ಷರು, ತಾಲೂಕು ಬಿಲ್ಲವ ಮಹಿಳಾ ವೇದಿಕೆ ಪ್ರತಿನಿಧಿ ಹಾಗೂ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಸೇರಿದಂತೆ ಒಟ್ಟು 73 ಮಂದಿ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದೆ.
ಸತತ 3ನೇ ಬಾರಿ ಅಧ್ಯಕ್ಷರಾಗಿ ಸತೀಶ್ ಕೆಡೆಂಜಿ..
ಕುದ್ಮಾರು ಗ್ರಾಮದ ಕೆಡೆಂಜಿಗುತ್ತು ನಿವಾಸಿಯಾಗಿರುವ ಸತೀಶ್ ಕುಮಾರ್ ಕೆಡೆಂಜಿಯವರು ಪ್ರಸ್ತುತ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ, ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ, ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಗೆಜ್ಜೆಗಿರಿ ನೇಮೋತ್ಸವ ಸಮಿತಿಯ ಅಧ್ಯಕ್ಷರಾಗಿ, ಕುದ್ಮಾರು ಹಿ.ಪ್ರಾ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಜಿಲ್ಲಾ ಕೆಡಿಪಿ ಸದಸ್ಯರಾಗಿ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಕುದ್ಮಾರು ಹಿ.ಪ್ರಾ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಬೆಳಂದೂರು ಸ.ಪ್ರ.ದ. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿ ಇವರು ಸೇವೆ ಸಲ್ಲಿಸಿದ್ದರು.