ವಿಟ್ಲ: ಮಾನವನ ಅಂತರ್ಯ ಮಾನವೀಯತೆ. ಆಗಲೇ ಮನುಷ್ಯನಾಗುವುದು. ಬದುಕಿನ ಆದರ್ಶ ಸಾಧನೆಯಲ್ಲಿ ಅಡಗಿದೆ. ಬದುಕು ಶಿಕ್ಷಣ ಬೇಕು ಎನ್ನುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ನಡೆಸಲಾಗುತ್ತದೆ. ಕೇವಲ ಆರ್ಥಿಕ ವ್ಯವಹಾರವೇ ಮುಖ್ಯವಲ್ಲ. ಸಂಸ್ಕಾರವೂ ಅಗತ್ಯ. ಜೀವನ ಮೌಲ್ಯದ ಅರಿವು ನಮ್ಮಲ್ಲಿ ಬೇಕು. ಸತ್ಕರ್ಮದಲ್ಲಿ ತೊಡಗಿಕೊಂಡರೆ ಸತ್ಫಲ ಲಭಿಸುತ್ತದೆ. ಮಕ್ಕಳಿಗೆ ಆಚರಣೆಯ ಮಹತ್ವವನ್ನು ತಿಳಿಸಿಕೊಟ್ಟಾಗ ಮಾತ್ರ ಸಾರ್ಥಕತೆ ಇದೆ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಸ್ಕೃತಿ ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ, ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಗುತ್ತಿಗಾರು ವಲಯ ಘಟಸಮಿತಿ ಅಧ್ಯಕ್ಷ ಸಂದೀಪ್ಕುಮಾರ್, ಬೊಳ್ಳಾಜೆ ಘಟಸಮಿತಿ ಅಧ್ಯಕ್ಷ ಸೀತಾರಾಮ, ಕಾರ್ಯದರ್ಶಿ ಜಯಂತಿ, ದೇವಚಳ್ಳ ಘಟಸಮಿತಿ ಸಂಘಟನಾ ಕಾರ್ಯದರ್ಶಿ ಜಯಂತ್ ಮೊದಲಾದವರು ಉಪಸ್ಥಿತರಿದ್ದರು.
ಸುಳ್ಯ ತಾಲೂಕಿನ 11 ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳಿಗೆ ರೂ.3,50,74೦.೦೦ ಮೊತ್ತ ಲಾಭಾಂಶದ ಚೆಕ್ಕನ್ನು ಶ್ರೀಗಳು ವಿತರಿಸಿದರು. ತಾಲೂಕು ಮೇಲ್ವಿಚಾರಕಿ ಗೀತಾ ಸಂಘಗಳ ಮಾಹಿತಿ ನೀಡಿದರು.
ಆರಂಭದಲ್ಲಿ ಧ್ಯಾನ-ಪ್ರಾಣಾಯಾಮ, ಶ್ರೀಮದ್ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ, ನಾಮ ಸಂಕೀರ್ತನೆ ಜರಗಿದವು. ವಿಶ್ವನಾಥ ಶೆಟ್ಟಿಯವರು ಹಾಸ್ಯ ಚಟುವಟಿಕೆ ನಡೆಸಿಕೊಟ್ಟರು. ಸುಳ್ಯ ಸಂಯೋಜಕಿ ರೇವತಿ ಸ್ವಾಗತಿಸಿದರು. ಗುತ್ತಿಗಾರು ವಲಯ ಸಂಯೋಜಕಿ ಸವಿತಾ ಸಿ. ಕಾರ್ಯಕ್ರಮ ನಿರೂಪಿಸಿದರು.