ಪುತ್ತೂರು: ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸೆ.19ರಂದು ಬೆಂಗಳೂರು ವಾರ್ತಾ ಸೌಧದ ಸಮಾಲೋಚನಾ ಸಭಾಂಗಣದಲ್ಲಿ ನಡೆದ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಅವರಿಗೆ 2017ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
2024ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಹಾಗೂ 2017ರಿಂದ 2023ನೇ ಕ್ಯಾಲೆಂಡರ್ ವರ್ಷದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕೋಲಾರ ಸರಕಾರ ಪದವಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಕಂಚಿಕಲ್ಲು ನಿವಾಸಿ ವಿಜಯ್ ಕೆ. ಅವರ ಪತ್ನಿಯಾಗಿರುವ ವಿಜಯಲಕ್ಷ್ಮಿ ಅವರು ಮೂಲತಃ ಮಂಗಳೂರು ಶಿಬರೂರಿನವರು. ಎಂ.ಸಿ.ಜೆ. ಮತ್ತು ಎಲ್.ಎಲ್.ಬಿ. ವಿದ್ಯಾಭ್ಯಾಸ ಮಾಡಿರುವ ವಿಜಯಲಕ್ಷ್ಮಿ ಒಟ್ಟು ೨೫ ವರ್ಷ ವೃತ್ತಿ ಅನುಭವ ಹೊಂದಿದ್ದಾರೆ.
ಜನವಾಹಿನಿ, ಆಕಾಶವಾಣಿ, ಸಂಯುಕ್ತ ಕರ್ನಾಟಕ, ಈ ಟಿವಿ, ಟಿವಿ ೯, ಸುವರ್ಣ ನ್ಯೂಸ್ ಮತ್ತು ನ್ಯೂಸ್ ೧೮ ಮಾಧ್ಯಮ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ ಸ್ವಂತ ಸಂಸ್ಥೆಯಾದ ವಿಜಯ ಟೈಮ್ಸ್ ಹಾಗೂ ಸೃಷ್ಠಿ ಮೀಡಿಯಾ ಅಕಾಡೆಮಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇವರು ತನಿಖಾ ಪತ್ರಿಕೋದ್ಯಮದಲ್ಲಿ ದೇಶದಲ್ಲಿಯೇ ಗುರುತಿಸಿಕೊಂಡ ದಿಟ್ಟ ಪತ್ರಕರ್ತೆಯಾಗಿದ್ದಾರೆ.