ಸಂತ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ರಕ್ಷಕ ಶಿಕ್ಷಕ ಸಂಘದ ಮಹಾಸಭೆ

0

ಪೋಷಕರು ರಚನಾತ್ಮಕ ಪ್ರತಿಕ್ರಿಯೆ, ಮಾರ್ಗದರ್ಶನ ನೀಡಬೇಕು- ಡಾ| ಹೆಚ್. ಮಾಧವ ಭಟ್

ಪುತ್ತೂರು: ವಿದ್ಯಾರ್ಥಿಗಳು ಮಾಡಿದ ತಪ್ಪುಗಳಿಗೆ ಅವರನ್ನು ದೂಷಿಸುವ ಬದಲು, ಪೋಷಕರು ವಿದ್ಯಾರ್ಥಿಗಳಿಗೆ ತಮ್ಮ ತಪ್ಪುಗಳಿಂದ ಕಲಿಯಲು ರಚನಾತ್ಮಕ ಪ್ರತಿಕ್ರಿಯೆ ಮತ್ತು ಮಾರ್ಗದರ್ಶನ ನೀಡುವತ್ತ ಗಮನಹರಿಸಬೇಕು. ಪ್ರತಿಯೊಬ್ಬ ಪೋಷಕ ಮಾರ್ಗದರ್ಶಕ. ಅವರ ನಡವಳಿಕೆ, ಮೌಲ್ಯಗಳು ಮತ್ತು ವರ್ತನೆಗಳು ವಿದ್ಯಾರ್ಥಿಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ಮತ್ತು ಮಾರ್ಗದರ್ಶನ ನೀಡಲು ಉತ್ತಮ ಪೋಷಕರು ಅತ್ಯಗತ್ಯ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಸೂಕ್ಷ್ಮವಾಗುವ ರೀತಿಯಲ್ಲಿ ಜ್ಞಾನವನ್ನು ನೀಡಬೇಕು. ಕಲಿಕೆಯು ಬೆಳವಣಿಗೆ, ಪ್ರೀತಿ ಮತ್ತು ಮಾರ್ಗದರ್ಶನದೊಂದಿಗೆ ಇರಬೇಕು, ಇವು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅತ್ಯಗತ್ಯ ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ| ಹೆಚ್. ಮಾಧವ ಭಟ್ ಹೇಳಿದರು. ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆದ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಹೆತ್ತವರ ಆದರ್ಶಗಳು ಎಂಬ ವಿಷಯದ ಬಗ್ಗೆ ಅವರು ಪೋಷಕರಿಗೆ ಮಾಹಿತಿ ನೀಡಿದರು.


ಕಾಲೇಜಿನ ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಖ್ಯವಾಗಿ ಮಕ್ಕಳು ತಪ್ಪು ದಾರಿಯನ್ನು ಹಿಡಿದಾಗ ಅವರನ್ನು ಸರಿದಾರಿಗೆ ತಂದು ಅವರ ಬದುಕನ್ನು ರೂಪಿಸುವ ಮಹತ್ತರ ಜವಾಬ್ದಾರಿ ಹೆತ್ತವರ ಪಾಲಿಗೆ ಇದೆ. ಜೊತೆಗೆ ಮಕ್ಕಳನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಳೆಯಲು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.


ಕಾಲೇಜು ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೊ ಪ್ರಾಸ್ತಾವಿಕ ಮಾತನಾಡಿದರು. ಮಾಯ್ ದೆ ದೇವುಸ್ ಚರ್ಚ್‌ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕಾಸ್ಟ ಮಾತನಾಡಿ ನಮ್ಮ ಮಕ್ಕಳು ಯಶಸ್ವಿಯಾಗಲು ಪೋಷಕರು ನೀಡುತ್ತಿರುವ ಬೆಂಬಲ ಪ್ರಶಂಸನೀಯ ಎಂದು ಹೇಳಿದರು.

ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರಶಾಂತ್ ರೈ ವರದಿ ವಾಚಿಸಿದರು. ಖಜಾಂಚಿ ಪ್ರೇಮಲತಾ ಕೆ. ಆಯವ್ಯಯ ಪತ್ರ ಮಂಡಿಸಿದರು. ಸಹಾಯಕ ಪ್ರಾಧ್ಯಾಪಕರಾದ ವಾರಿಜಾ ಮತ್ತು ತಂಡ ಪ್ರಾರ್ಥಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಸ್ವಾಗತಿಸಿ, ಸಹಾಯಕ ಪ್ರಾಂಶುಪಾಲರಾದ ಡಾ| ವಿಜಯ್ ಕುಮಾರ್ ಮೊಳೆಯಾರ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ತೇಜಸ್ವಿ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಚಂಡೆ ವಾದನ ಹಾಗೂ ಚಕ್ರತಾಳ ಎಲ್ಲರ ಗಮನ ಸೆಳೆಯಿತು.

ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಎಸ್. ಅಬೂಬಕ್ಕರ್ ಆರ್ಲಪದವು

ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಎಸ್. ಅಬೂಬಕ್ಕರ್ ಆರ್ಲಪದವು ರವರನ್ನು ಆಯ್ಕೆ ಮಾಡಲಾಯಿತು. ಡಾ| ರಾಧಾಕೃಷ್ಣ ಗೌಡ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here